ಶಿವಮೊಗ್ಗ ನಗರದ ಹೃದಯ ಭಾಗದಲ್ಲಿನ ಕನ್ಸರ್ವೆನ್ಸಿ ಜಾಗದ ಸದ್ಬಳಕೆ ಹಾಗೂ ಆಸ್ಪತ್ರೆಗಳು ರಸ್ತೆ ಮತ್ತು ಫುಟ್ಪಾತ್ ಒತ್ತುವರಿ ಮಾಡಿಕೊಂಡಿರು ವುದರ ಕುರಿತು ಸಮಾಜ ಸೇವಕ, ಸ್ಥಳೀಯ ಪತ್ರಿಕೆಯ ಜಾಹಿರಾತು ವ್ಯವಸ್ಥಾಪಕರೂ ಆದ ಕಾಯಕಯೋಗಿ ಬಿ.ಚನ್ನಬಸಪ್ಪ ಅವರು ನಗರಪಾಲಿಕೆಯ ಆಯುಕ್ತರನ್ನು ಒತ್ತಾಯಿಸಿದ್ದಾರೆ.
ನಗರದ ಹಲವು ಸಮಸ್ಯೆ ಗಳ ಕುರಿತಾಗಿ ಸಾರ್ವಜನಿಕ ಅಭಿಯಾನವೊಂದನ್ನು ಆರಂಭಿಸಿರುವ ಅವರು ಸಮಸ್ಯೆಗಳ ಕುರಿತು ವಿವರವಾದ ಮಾಹಿತಿ, ಸ್ಥಳದ ಹಾಗೂ ಕಾರಣಕರ್ತರ ಕುರಿತು ವಿವರವಾದ ಮಾಹಿತಿಯನ್ನು ಫೋಟೋ ಸಮೇತ ಸಂಬಂಧಿಸಿದವರಿಗೆ ತಲುಪಿಸಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸುವುದಲ್ಲದೆ, ಕಾರ್ಯಪೂರ್ಣಗೊಳ್ಳುವವರೆಗೂ
ಸಂಬಂಧಿಸಿದವರ ಜೊತೆ ನಿರಂತರವಾಗಿ ಸಂಪರ್ಕ ಸಾಧಿಸುವ ಅಭಿಯಾನ ಇದಾಗಿದೆ ಎಂದು ಕಾಯಕಯೋಗಿ ಚನ್ನಬಸಪ್ಪ ತಿಳಿಸಿದ್ದಾರೆ.
ನಗರದ ಮಧ್ಯಭಾಗದಲ್ಲಿ ಹಲವಾರು ದೊಡ್ಡ ದೊಡ್ಡ ಆಸ್ಪತ್ರೆಗಳು ಇದ್ದು, ಈ ಆಸ್ಪತ್ರೆಗಳು ಫುಟ್ಪಾತ್ ಅನ್ನು ಆಕ್ರಮಿಸಿಕೊಂಡು ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆ ಉಂಟುಮಾಡಿದ್ದಾರೆ. ಕೆಲವು ಕಡೆ ಫುಟ್ಪಾತ್ ಅನ್ನು ಎತ್ತರಕ್ಕೆ ಏರಿಸಿ ಆಸ್ಪತ್ರೆಯ ವೈದ್ಯರ ಕಾರುಗಳನ್ನು ಮಾತ್ರ ನಿಲ್ಲಿಸುತ್ತಿದ್ದು, ಉಳಿದವರಿಗೆ ನಿರಾಕರಿಸುತ್ತಿದ್ದಾರೆ. ಇಲ್ಲಿ ಸರಪಳಿ ಹಾಕಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಇದರ ಬದಲಿಗೆ ಆಸ್ಪತ್ರೆ ಸಮೀಪದಲ್ಲಿ ಹಲವಾರು ಕಡೆಗಳಲ್ಲಿ ಇರುವ ಕನ್ಸರ್ ವೆನ್ಸಿಗಳನ್ನು ಈ ಆಸ್ಪತ್ರೆಗಳು ತಮ್ಮ ಉಸ್ತುವಾರಿಗೆ ಪಡೆದು, ಇವುಗಳನ್ನು ಅಭಿವೃದ್ಧಿಪಡಿಸಿ ಅಲ್ಲಿ ಸಾರ್ವಜನಿಕ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಕೆಲವು ಕಡೆಗಳಲ್ಲಿ ಸಂಚಾರಕ್ಕೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದ್ದಾರೆ
ರಕ್ಷಣಾ ಇಲಾಖೆಯ ನೆರವಿನೊಂದಿಗೆ ನಗರ ಪಾಲಿಕೆಯು ಈ ಸಮಸ್ಯೆ ಗಳನ್ನು 15 ದಿನಗಳ ಒಳಗಾಗಿ ಪರಿಹರಿಸಬೇಕು ಎಂದು ಅವರು ಆಗ್ರಹಪಡಿಸಿದ್ದಾರೆ.
ಕೆಲವು ಕಡೆ ರಸ್ತೆಗಳಲ್ಲಿ ಹಣ್ಣು ಮತ್ತು ತರಕಾರಿ ವ್ಯಾಪಾರ ಮಾಡುವವರು ರಸ್ತೆಗಳನ್ನು ಅತಿಕ್ರಮಿಸಿಕೊಂಡು ಸಾರ್ವಜನಿಕರ ಓಡಾಟಕ್ಕೆ ಅಡ್ಡಿ ಉಂಟು ಮಾಡುತ್ತಿದ್ದಾರೆ. ಆಗಾಗ್ಗೆ ಸಂಚಾರ ಜಾಮ್ ಆಗುತ್ತಿದೆ. ಹೀಗಾಗಿ ಇವರನ್ನು ಇಲ್ಲಿಂದ ತೆರವುಗೊಳಿಸಿ ಅವರಿಗೂ ಸೂಕ್ತವಾದ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಸಾರ್ವಜನಿಕರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದ್ದಾರೆ.
