DC Shivamogga ರಾಜ್ಯದ ಜನರ ಜೀವನ ಗುಣಮಟ್ಟವನ್ನು ಸುಧಾರಿಸುವ ಹಾಗೂ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ದಾಖಲೆಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದಾದ್ಯಂತ ಆರಂಭಗೊಳಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷಾ ಕಾರ್ಯದಲ್ಲಿ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಜನರು ತಮ್ಮ ಮಾಹಿತಿಯನ್ನು ನೀಡಿ, ಸಮೀಕ್ಷೆಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಜನರಲ್ಲಿ ಮನವಿ ಮಾಡಿದ್ದಾರೆ.
ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಆರ್ಥಿಕ ಮತ್ತು ಸಾಮಾಜಿಕ ಗಣತಿ ಬಗ್ಗೆ ಮಾಹಿತಿ ನೀಡಿ ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ಅಂದಾಜು 4.85ಲಕ್ಷ ಕುಟುಂಬಗಳ ಪೈಕಿ ಈಗಾಗಲೇ 4ಲಕ್ಷ ಮನೆಗಳ ಸಮೀಕ್ಷಾ ಕಾರ್ಯ ಪೂರ್ಣಗೊಂಡು ಶೇ. 80ರಷ್ಟು ಪ್ರಗತಿ ಸಾಧಿಸಲಾಗಿದ್ದು, ಉಳಿದ ಮನೆಗಳ ಸಮೀಕ್ಷೆಯನ್ನು ಮುಂದಿನ ಎರಡು ದಿನಗಳೊಳಗಾಗಿ ಪೂರ್ಣಗೊಳಿಸಿ ನಿರೀಕ್ಷಿತ ಪ್ರಗತಿ ಸಾಧಿಸಲಾಗುವುದು. ಅದಕ್ಕಾಗಿ 4543ಬ್ಲಾಕ್ಗಳನ್ನು ಸೃಜಿಸಲಾಗಿದೆ ಎಂದವರು ತಿಳಿಸಿದರು.
ಈಗಾಗಲೇ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಶೇ.100ರಷ್ಟು ಸಮೀಕ್ಷಾ ಕಾರ್ಯ ಪೂರ್ಣಗೊಳಿಸಲಾಗಿದೆ. ಅಲ್ಲದೇ ಶಿಕಾರಿಪುರದಲ್ಲಿ ಶೇ.90ರಷ್ಟು ಗಣತಿ ಪೂರ್ಣಗೊಂಡಿರುವ ಮಾಹಿತಿ ಇದೆ. ಉಳಿದಂತೆ ಜಿಲ್ಲೆಯಾದ್ಯಂತ ಸಮೀಕ್ಷೆ ಪ್ರಗತಿ ಹಂತದಲ್ಲಿದೆ. ಸಮೀಕ್ಷೆಗೆ ಅಡಚಣೆಯಾಗುತ್ತಿರುವ ಕೆಲವು ಸ್ಥಳಗಳನ್ನು ಗುರುತಿಸಿ, ಸಮೀಕ್ಷೆಗೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಗಣತಿದಾರರು ಮನೆಮನೆ ಸಮೀಕ್ಷೆಗೆ ಬಂದಾಗ ಮಾಹಿತಿ ನೀಡಿ ಸಹಕರಿಸಿ ಎಂದು ಮನವಿ ಮಾಡಿದ ಅವರು, ಒತ್ತಾಯಪೂರ್ವಕವಾಗಿ ಮಾಹಿತಿ ಪಡೆದುಕೊಳ್ಳಲಾಗದು. ಸಮೀಕ್ಷೆಗೆ ಸರಿಯಾದ ಮಾಹಿತಿ ನೀಡಿದಲ್ಲಿ, ಸರ್ಕಾರದ ಯೋಜನೆಗಳ ಲಾಭ ಇನ್ನಷ್ಟು ಸಾರ್ವಜನಿಕರು ಪಡೆದುಕೊಳ್ಳಲು ಅನುಕೂಲವಾಗಲಿದೆ. ಇಲ್ಲದಿದ್ದಲ್ಲಿ ಮಾಹಿತಿ ನಿಖರವಾಗಿ ದಾಖಲಿಸಲಾಗದೆ ಸೌಲಭ್ಯಗಳಿಂದ ವಂಚಿತರಾಗಬಹುದಾದ ಸಂಭವವಿದೆ ಎಂದವರು ನುಡಿದರು.
ಸಮೀಕ್ಷಾ ಕಾರ್ಯದ ಪೂರ್ವದಲ್ಲಿ ಮನೆಮನೆಗೆ ಅಂಟಿಸಲಾಗಿರುವ ಗುರುತಿನ ಸಂಖ್ಯೆಯನ್ನು ಖಾಲಿ ಮನೆ, ಧಾರ್ಮಿಕ ಸ್ಥಳಗಳು,ವಾಣಿಜ್ಯ ಕಟ್ಟಡಗಳು ಸೇರಿದಂತೆ ಮತ್ತಿತರೆಡೆ ಅಂಟಿಸಲಾಗಿದೆ. ಇವುಗಳನ್ನು ಸಮೀಕ್ಷಾ ಕಾರ್ಯಕ್ಕೆ ನಿಯೋಜಿತರಾದ ಮೇಲ್ವಿಚಾರಕರು ಇನ್ನೂ ಒಂದೆರೆಡು ದಿನಗಳಲ್ಲಿ ಅವುಗಳನ್ನು ಸರಿಪಡಿಸಿ, ಅಂತಿಮ ಮಾಹಿತಿಯನ್ನು ನೀಡಲಿದ್ದಾರೆ ಎಂದವರು ನುಡಿದರು.
DC Shivamogga ಕೆಲವು ಸ್ಥಳಗಳಲ್ಲಿನ ಟವರ್ಸಮಸ್ಯೆಗೆ ತಕ್ಷಣದ ಪರಿಹಾರ ಕಂಡುಕೊಂಡು ವಾಸಸ್ಥಳಕ್ಕೆ ಬಂದು ಸಮೀಕ್ಷೆ ಮಾಡಿ ಎಂದು ಕೆಲವು ಗ್ರಾಮೀಣ ಪ್ರದೇಶಗಳಲ್ಲಿನ ನಿವಾಸಿಗಳು ಬೇಡಿಕೆ ಇಟ್ಟಿರುವುದು ಗಮನಕ್ಕೆ ಬಂದಿದೆ. ಈ ಸಮಸ್ಯೆ ತಕ್ಷಣಕ್ಕೆ ಇತ್ಯರ್ಥಪಡಿಸಲು ಸಾಧ್ಯವಾಗದು. ಇದನ್ನು ಆದ್ಯತೆಯ ಮೇರೆಗೆ ಸಹಕರಿಸಲು ಗಮನಹರಿಸಲಾಗುವುದು. ಗ್ರಾಮೀಣರು ಮಾಹಿತಿ ನೀಡಿ ಸಹಕರಿಸುವಂತೆ ಮನವಿ ಮಾಡಿದರು.
ಈ ಸಮೀಕ್ಷಾ ಕಾರ್ಯದಲ್ಲಿ ಕಂದಾಯ, ಬಿ.ಸಿ.ಎಂ., ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಸಹಕಾರ ಪಡೆದುಕೊಳ್ಳಲಾಗಿದೆ. ಸಮೀಕ್ಷೆಯ ಕುರಿತು ಸಮಸ್ಯೆಗಳಿಗಾಗಿ ನಗರದ ಮಹಾನಗರಪಾಲಿಕೆ ಮತ್ತು ಸಾಗರದ ತಾಲೂಕು ಕಚೇರಿಯಲ್ಲಿ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಿರುವುದಾಗಿ ಅವರು ತಿಳಿಸಿದರು.
ಜಿಲ್ಲೆಯ ಹೊಸನಗರ, ಸಾಗರ ಮತ್ತು ತೀರ್ಥಹಳ್ಳಿ ತಾಲೂಕುಗಳ ಕೆಲವು ಆಯ್ದ ಭಾಗಗಳಲ್ಲಿ ನೆಟ್ವರ್ಕ್ನ ಸಮಸ್ಯೆಯಿಂದಾಗಿ ಗಣತಿ ಕಾರ್ಯಕ್ಕೆ ಅಡಚಣೆ ಉಂಟಾಗುತ್ತಿದೆ. ಈ ಸಮೀಕ್ಷೆಯನ್ನು ನಿಗಧಿಪಡಿಸಿದ ಕಾಲಮಿತಿಯೊಳಗಾಗಿ ಪೂರ್ಣಗೊಳಿಸಲು ಪರ್ಯಾಯ ಕ್ರಮಗಳನ್ನು ಕೈಗೊಂಡಿದ್ದು, ಸಮೀಪದ ಗ್ರಾಮ ಪಂಚಾಯಿತಿ ಅಥವಾ ಶಾಲೆಗಳಲ್ಲಿ ನೆಟ್ವರ್ಕ್ನ ಸೌಲಭ್ಯವಿರುವ ಸ್ಥಳಗಳಲ್ಲಿ ದಾಖಲೆಗಳನ್ನು ಸಂಗ್ರಹಿಸುವಂತೆ ಸೂಚಿಸಲಾಗಿದೆ. 250ಕ್ಕೂ ಹೆಚ್ಚಿನ ಸ್ಥಳಗಳನ್ನು ಗುರುತಿಸಿ, ಸಮೀಕ್ಷೆ ನಡೆಸಲಾಗುತ್ತಿದೆ. ಅದಕ್ಕಾಗಿ ಸ್ಥಳೀಯ ಸಂಸ್ಥೆಗಳ ಅಧಿಕಾರಿ-ಸಿಬ್ಬಂಧಿಗಳ ಸಹಕಾರವನ್ನು ಪಡೆದುಕೊಳ್ಳಲಾಗುತ್ತಿದೆ ಎಂದರು. – ಎನ್.ಹೇಮಂತ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಅಪರ ಜಿಲ್ಲಾಧಿಕಾರಿ ಅಭಿಷೇಕ್ವಿ. ಮತ್ತು ಇತರೆ ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಶ್ರೀಮತಿ ಶೋಭಾ ಅವರು ಉಪಸ್ಥಿತರಿದ್ದರು.
DC Shivamogga ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡಿ ಸಹಕರಿಸಿ : ಗುರುದತ್ತ ಹೆಗಡೆ
Date:
