ಲೇ: ಪ್ರಭಾಕರ ಕಾರಂತ
Klive Special Article ಮುಳುಗಡೆ ಒಡಲಾಳ ಎಂಬ ನನ್ನ ಕೃತಿ ಬಿಡುಗಡೆಯಾಗಿ ನಾಲ್ಕು ತಿಂಗಳಲ್ಲೇ ಖರ್ಚಾಗಿ ಸಂಚಲನ ಮೂಡಿಸಿತು.
ಆ ಕೃತಿ ಬಿಡುಗಡೆಯ ದಿನವೇ ಮಾರಾಟಕ್ಕಿಟ್ಟ ಅಷ್ಟೂ ಪುಸ್ತಕಗಳು ಕೆಲವೇ ಕ್ಷಣದಲ್ಲಿ ಕಾಲಿಯಾಯಿತು. ಕೃತಿ ಬಿಡುಗಡೆ ದಟ್ಟ ಕಾಡಿನ ಮುಳುಗಡೆಯ ಹಿನ್ನೀರಿನಾಚೆಯ ಜನವಸತಿ ವಿರಳವಾಗಿರುವ ಮೇಲುಸುಂಕ ದುರ್ಗಾಪರಮೇಶ್ವರಿಯ ದೇವಸ್ಥಾನದಲ್ಲಿ ನಡೆದಿದ್ದು. ಅಂದು ದೂರದೂರದ ಊರಿನಿಂದ ಆರುನೂರಾ ಐವತ್ತಕ್ಕೂ ಹೆಚ್ಚು ಜನ ಆ ಸಮಾರಂಭಕ್ಕೆ ಬಂದಿದ್ದರು. ಬಸ್ ಸಂಪರ್ಕದಿಂದ 18 ಕಿಮೀ ದೂರದ ಆ ಊರಿಗೆ ಅಷ್ಟು ಜನ ಬಂದಿದ್ದೇ ಒಂದು ದಾಖಲೆ. ಮುಳುಗಡೆಯಾಗಿ ಹರಿದು ಹಂಚಿಹೋದ ಜನಕ್ಕೆ ಆ ನೋವು ತಲೆಮಾರಿನ ನಂತರವೂ ಮಾಸಿಲ್ಲ ಎಂದು ಖಚಿತವಾದ ದಿನವದು.
ಈ ಕಾರ್ಯಕ್ರಮದ ಕುರಿತು ನಾನು ಬರೆದ ಲೇಖನಗಳು,ಆ ಕುರಿತು ಅಂದು ಆಗಮಿಸಿದ್ದ ಜನರ ಲೇಖನ,ನಂತರ ನಾವು ಮುಳುಗಡೆಯ ಊರಿಗೆ ನೀರು ಬಿಟ್ಟಾಗ ಒಂದಷ್ಟು ಜನ ಯಾತ್ರೆ ಹೋದ ಘಟನೆ ಇವುಗಳ ಜತೆಗೆ ಕೃತಿಯ ಕುರಿತು ಬಂದ ವಿಮರ್ಶೆಗಳನ್ನು ಸೇರಿಸಿ ಮುಳುಗಡೆ ಒಡಲಾಳ ಭಾಗ-2 ಕೃತಿ ರಚನೆಯಾಗಿದೆ. ಕೃತಿಯೊಂದರ ಕುರಿತೇ ಮತ್ತೊಂದು ಕೃತಿ ನನ್ನಂತಹ ಹೆಚ್ಚು ಪ್ರಸಿದ್ದನಲ್ಲದ ಲೇಖಕನ ಪಾಲಿಗೆ ಅಪೂರ್ವ. ನಾನು ಮುಳುಗಡೆ ಒಡಲಾಳ ಲೇಖನಗಳನ್ನು ಫೇಸ್ ಬುಕ್ ನಲ್ಲಿ ಪ್ರಕಟಿಸುತ್ತಾ ಹೋದ ಹಾಗೇ ಹತ್ತಾರು ಸಹಸ್ರ ಜನ ಅದಕ್ಕೆ ಸ್ಪಂದಿಸಿದ್ದರು. ಅದರಲ್ಲಿ ಆಯ್ದ ಕೆಲ ಅಭಿಪ್ರಾಯಗಳನ್ನು ಈ ಕೃತಿಯಲ್ಲಿ ಕಾಣಬಹುದು. ಕೃತಿಯ ಕುರಿತು ಬಂದ ಬಹುತೇಕ ಎಲ್ಲಾ ಲೇಖನಗಳೂ ಇಲ್ಲಿವೆ.ಅದನ್ನು ಬರೆದ ಎಲ್ಲಾ ಲೇಖಕರನ್ನು ಅನುಮತಿ ಕೇಳಿದಾಗ ಪ್ರೀತಿಯಿಂದ ಸಮ್ಮತಿಸಿದ್ದಾರೆ.
Klive Special Article ಮುಳುಗಡೆ ಒಡಲಾಳ ಕೃತಿ ಓದಿ ಅನೇಕರು ನನ್ನನ್ನು ಹುಡುಕಿಕೊಂಡು ಬಂದು ಉಡುಗರೆ ಇತ್ತು ಜತೆಗೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ. ಓರ್ವ ಲೇಖನಿಗೆ ಇದಕ್ಕಿಂತ ಇನ್ನೇನು ಬೇಕು.ನನಗೆ ಅದು ತೃಪ್ತಿ ನೀಡಿದೆ.ಅದಕ್ಕಾಗೇ ನಾನು ಈ ಕೃತಿಯನ್ನು ಯಾವುದೇ ಪ್ರಶಸ್ತಿ ಗಾಗಿ ಕಳಿಸಿಲ್ಲ. ಅಂತಹ ಪ್ರಶಸ್ತಿಯ ಮೇಲೆ ನನಗೆ ಗೌರವವೂ ಇಲ್ಲ.
ಮುಳುಗಡೆ ಒಡಲಾಳ ಭಾಗ 2 ರಲ್ಲಿ ನನ್ನ ಲೇಖನಕ್ಕಿಂತ ಪ್ರತಿಕ್ರೆಯೆಗಳೇ ಜಾಸ್ತಿ ಪುಟ ಹೊಂದಿದೆ. ಕನ್ನಡದ ಪ್ರಸಿದ್ಧ ಲೇಖಕರಾದ ಡಾ.ಗಜಾನನ ಶರ್ಮ, ಶಿವಾನಂದ ಕಳವೆ, ಶರತ್ ಕಲ್ಕೋಡ್, ಸ.ಗಿರಿಜಾ ಶಂಕರ್,ಡಾ.ಮಂಜುಳಾ ಹುಲ್ಲಹಳ್ಳಿ, ಡಾ.ಎಲ್ ಸಿ.ಸುಮಿತ್ರ, ಮಂಗಳಾ ನಾಡಿಗ್, ಉಮಾದೇವಿ ಉರಾಳ್, ಶೃಂಗೇಶ್ವರ ಶರ್ಮ, ಪ್ರಸನ್ನ,ಶಶಿಧರ ಹಾಲಾಡಿ,ವಾ.ಮುರಳೀಧರ,ಮುಂತಾದ ಅನೇಕರ ಮೌಲ್ಯಯುತ ಬರಹದಿಂದ ಇದು ಸಮೃದ್ಧವಾಗಿದೆ.
ಮೊದಲ ಪುಸ್ತಕದಲ್ಲಿ ಮರೆತಿದ್ದ ಕೆಲ ವ್ಯಕ್ತಿಗಳು, ಘಟನೆಗಳೂ ಇಲ್ಲಿ ಸ್ಮರಿಸಿರುವೆ.
ಮೊದಲ ಪುಸ್ತಕ ರೂಪ ನೀಡಿದ್ದು ನನ್ನ ಹಿರಿಯ ಗೆಳೆಯ ಪತ್ರಕರ್ತ ಅರುಣ್.ಅವರು ತಿಂಗಳ ಕಾಲ ತಮ್ಮ ಅಮೂಲ್ಯ ಸಮಯ ನೀಡಿ ಅದಕ್ಕೊಂದು ರೂಪ ನೀಡಿದ್ದರು. ಈಗಲೂ ಅವರಿಗೆ ಕಳಿಸಿದರೆ ಮತ್ತೆ ಅವರು ಆ ಕೆಲಸ ಮಾಡುವವರೇ. ಆದರೆ ನನಗೇ ಸಂಕೋಚ.ಯಾರಿಗಾದರೂ ಎಷ್ಟು ಕಷ್ಟ ಕೊಡುವುದು. ಹಾಗೆಂದೇ ಅರುಣ್ ಮಾಂತ್ರಿಕ ಸ್ಪರ್ಶ ಇಲ್ಲದೇ ಉಳಿದ ತಪ್ಪು, ದೋಷಗಳಿಗೆ ಕ್ಷಮೆ ಇರಲಿ.
ಇದನ್ನು ಸಾಧನಾ ಪ್ರಕಾಶನದ ರವಿಚಂದ್ರ ರಾವ್ ರವರೇ ಪ್ರಕಟಿಸುವ ಔದಾರ್ಯ ತೋರಿದ್ದಾರೆ. ಪುಟ ವಿನ್ಯಾಸ ಜಮುನಾ ರವರದ್ದು. ಮುಖಪುಟ ಚಿತ್ರ ಮುಳುಗಿದ ಮೇಲಿನ ಐದುಬಳ್ಳಿಯ ನನ್ನ ತಂಗಿಯ ಮನೆಯದ್ದು. ಸಹಕರಿಸಿದ ಎಲ್ಲರಿಗೂ ಹೃದಯಾಂತರಾಳದ ಕೃತಜ್ಞತಿಗಳು.
ಮುಳುಗಡೆ ಒಡಲಾಳ ಕ್ಕೆ ತೋರಿಸಿದಂತಹ ಪ್ರೀತಿ ಅದರ ಮಗುವಿಗೂ ತೋರಿಸುತ್ತೀರಿ ಎಂದು ನಂಬುವೆ.
ನಿಮ್ಮ ಪ್ರೀತಿಯ
ಪ್ರಭಾಕರ ಕಾರಂತ್. ಹೊಸಕೊಪ್ಪ
577126.
ಫೋನ್ 6362671384.
ವಿ.ಸೂ.ಆಸಕ್ತಿಯುಳ್ಳ ಓದುಗರು ಲೇಖರನ್ನ ಸಂಪರ್ಕಿಸಿ ಪ್ರಕಾಶಕರ ಮಾಹಿತಿ ಪಡೆಯಬಹುದು.
