ಭಾಗ –5
ಮುಂದುವರೆದ ಭಾಗ
ಕೆಳದಿ ಸಂಕಣ್ಣನಾಯಕರು ದೆಹಲಿಯ ಜಟ್ಟಿ ಅಂಕುಶಖಾನನನ್ನು ಕಣ್ಣು ಮುಚ್ಚಿ ಬಿಡುವುದರೊಳಗೆ ದೇಹವನ್ನು ಎರಡು ಸೀಳಾಗಿಸಿ ಕಾಳಗದಲ್ಲಿ ಗೆದ್ದು ಬೀಗಿದ್ದು, ಇದನ್ನು ನೋಡಿದ ಬಾದಷಹಃನು ಬಹಳ ಸಂತೋಷದಿಂದ ಸಂಕಣ್ಣನಾಯಕರ ಹಿನ್ನೆಲೆ ತಿಳಿದು ಬಿರುದು, ರತ್ನಾವಳಿಗಳನ್ನು ನೀಡಿ ಸನ್ಮಾನಿಸಿದನು. ಅದಕ್ಕೆ ಸಂಕಣ್ಣನಾಯಕರು ” ಈಶ್ವರ ಅನುಗ್ರಹದಿಂದ ಬಿರುದು, ಬಾವುಲಿಗಳು ಬೇಕಾದಷ್ಟು ಇವೆ, ಆದರೆ ನನ್ನ ಮನಸ್ಸು ಆಧ್ಯಾತ್ಮಿಕ ದ ಕಡೆ ಇದ್ದು ಕಾಶೀಕ್ಷೇತ್ರಕ್ಕೆ ಹೊರಡಬೇಕೆಂದಿದ್ದು ಅದಕ್ಕೆ ತಮ್ಮ ಸಹಕಾರದ ಅಗತ್ಯವಿದೆಯೆಂದು ತಿಳಿಸಿದರು. ಈ ಮಾತಿನಿಂದ ಸಂತೋಷಗೊಂಡ ಬಾದಷಹಃ ಸಂಕಣ್ಣನಾಯಕರಿಗೆ ತೀರ್ಥ ಯಾತ್ರೆ ಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಒದಗಿಸುತ್ತಾ ಆಯಾ ಸ್ಥಾನಿಕ ಅಧಿಕಾರಿಗಳಿಗೆ ಫರ್ಮಾನು ಹೊರಡಿಸಿ ಸಂಕಣ್ಣನಾಯಕರಿಗೆ ಹನ್ನೆರಡು ಸಾವಿರ ಹೊನ್ನುಗಳನ್ನು ನೀಡಿ ಸಂತೋಷದಿಂದ ಬೀಳ್ಕೊಟ್ಟನು.ಅಲ್ಲಿಂದ ಹೊರಟ ನಾಯಕರು ದಿಲ್ಲಿಯ “ಚಾವಲಿಕೆ ಮಂಡೈ” ಎಂಬಲ್ಲಿ ಜಂಗಮಮಠವನ್ನು ಸ್ಥಾಪಿಸಿದ್ದಲ್ಲದೆ ಆಗ್ರಾದಲ್ಲಿಯೂ, ಮಾಣಿಕ್ಯಪುರಿಯಲ್ಲಿಯೂ, ಪ್ರಯಾಗ, ತ್ರಿವೇಣಿಸಂಗಮ ಕ್ಷೇತ್ರದಲ್ಲಿಯೂ ಜಂಗಮಮಠವನ್ನು ಸ್ಥಾಪಿಸಿ ಅಲ್ಲೆಲ್ಲಾ ಭೂದಾನವನ್ನು ಮಾಡಿ ಕಾಶಿಗೆ ತೆರಳಿ ವಿಶ್ವೇಶ್ವರನ ದರ್ಶನ ಪಡೆದು “ಜಂಗಮವಾಡಿ” ಮಠವನ್ನು ಸ್ಥಾಪಿಸಿ ವಿಶ್ವೇಶ್ವರ ನ ಪೂಜೆಗೆ, ಭಕ್ತರ ದಾಸೋಹಕ್ಕೆ ದಾನಗಳನ್ನು ನೀಡಿದ್ದು ಅಲ್ಲಿದ್ದ ಕಪಿಲಾತೀರ್ಥ, ಮಾನಸಸರೋವರ, ಗಂಧರ್ವಸಾಗರವೆಂಬ ತೀರ್ಥ ಗಳನ್ನು ಜೀರ್ಣೋದ್ಧಾರ ಮಾಡಿ ಐಯ್ಯಪ್ಪನೆಂಬ ಶಾನುಭೋಗನ ಮುಖಾಂತರ ನರ್ಮದೇಶ್ವರ, ಕರ್ದಮೇಶ್ವರ, ಭೀಮಚಂದ್ರಿಕೆ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿಸಿ ತನ್ನ ಪುತ್ರ ವೆಂಕಟಪ್ಪನಾಯಕರ ಹೆಸರಲ್ಲಿ ಶಾಸನ ಬರೆಸಿದರು. Klive Special Article ನಂತರ ಕೇದಾರ, ಗಯ, ಹರಿದ್ವಾರ, ನೇಪಾಳ, ಕಾಶ್ಮೀರ, ಕುರುಕ್ಷೇತ್ರ ಮುಂತಾದ ಕಡೆ ಸಂಚರಿಸಿ ಅಲ್ಲೆಲ್ಲಾ ದಾನ ಮಾಡಿ ಕೆಳದಿಯ ಹೆಸರನ್ನು ಅಚಂದ್ರಾರ್ಕವಾಗಿರುವಂತೆ ಮಾಡಿದ್ದಲ್ಲದೆ ಪೈಠಣಕ್ಕೆ ಬಂದು ಮೂವತ್ತೆರೆಡು ಕರಕಮಲಗಳಿಂದ ಕಂಗೊಳಿಸುತ್ತಿದ್ದ ಅಘೋರ ಮೂರ್ತಿಯನ್ನು ಕಂಡು ಅದರ ಯಥಾ ನಕಲನ್ನು ಚಿತ್ರಿಸಿಕೊಂಡು, ನಂತರ ಅಲ್ಲಿಂದ ಪಂಪಾಕ್ಷೇತ್ರದ ಮೂಲಕ ಮಾಸೂರು ಸೀಮೆಯ ಆಲವಳ್ಳಿಗೆ ಬಂದು ಅಲ್ಲಿ ದೊರೆತ ಸುಂದರ ವೀರಭದ್ರ ಮೂರ್ತಿಯೊಂದಿಗೆ ಕೆಳದಿಗೆ ಬಂದನು.ಕೆಳದಿಯ ರಾಮೇಶ್ವರ ಲಿಂಗದ ದಕ್ಷಿಣ ಭಾಗದಲ್ಲಿ ವೀರಭದ್ರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಶಿಲಾಮಯ ಗರ್ಭಗುಡಿಯನ್ನು ನಿರ್ಮಿಸಿ.ಅದರ ಪೂಜೆಗಾಗಿ ಭೂದಾನ ನೀಡಿದರು. ಪೈಠಣದಿಂದ ಚಿತ್ರಿಸಿ ತಂದಿದ್ದ ಅಘೋರೇಶ್ವರನ ವಿನ್ಯಾಸಕ್ಕೆ ಅನುಗುಣವಾಗಿ ಶ್ರೀ ಅಘೋರೇಶ್ವರನ ಮೂರ್ತಿ ನಿರ್ಮಿಸಿ ಅದನ್ನು ಇಕ್ಕೇರಿ ಯಲ್ಲಿ ಪ್ರತಿಷ್ಠಾಪಿಸಿ, ಭವ್ಯ ದೇವಾಲಯವನ್ನು, ಕೊಳವನ್ನು, ಹೂದೋಟವನ್ನೂ ನಿರ್ಮಿಸಿದನು. ಮುಂದುವರೆಯುವುದು.
