Gurudatta Hegde ನಾಗಾಲೋಟದಲ್ಲಿ ಬದಲಾಗುತ್ತಿರುವ ಕಾಲಮಾನಕ್ಕೆ ಅನುಗುಣವಾಗಿ ಸರ್ಕಾರವು ಸುಗಮ ಆಡಳಿತಕ್ಕೆ ಅನುಕೂಲವಾಗುವಂತೆ ರೂಪಿಸಿ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳನ್ನು ಹಾಗೂ ಅತ್ಯಾಧುನಿಕ ತಂತ್ರಾಂಶಗಳನ್ನು ಅರಿತು ಅಧಿಕಾರಿಗಳು ತಮ್ಮ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು.
ಅವರು ಇಂದು ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ಜಿಲ್ಲೆಯ ನೌಕರರಿಗಾಗಿ ಏರ್ಪಡಿಸಲಾಗಿದ್ದ ಹೆಚ್.ಆರ್.ಎಂ.ಎಸ್.-2.0 ಹಾಗೂ ಕೆ.ಎ.ಎಸ್.ಎಸ್.ಕುರಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ರಾಜ್ಯದ ವಿವಿಧ ಇಲಾಖೆಗಳ ಅಧಿಕಾರಿಗಳು ಈ ಹಿಂದೆ ಬಳಸುತ್ತಿದ್ದ ಹೆಚ್.ಆರ್.ಎಂ.ಎಸ್.ತಂತ್ರಾಂಶ ಬಹಳ ಚೆನ್ನಾಗಿ ವಿನ್ಯಾಸಗೊಳಿಸಲಾಗಿದೆ ಆದರೂ ಅದರ ಬಳಕೆ ಸ್ವಲ್ಪ ಕಷ್ಟಕರವೂ, ದಾಖಲೆಗಳ ನಿರ್ವಹಣೆ ಕಷ್ಟಕರವೂ ಆಗಿತ್ತು. ಅದನ್ನು ಇಲಾಖೆಗಳ ಪತ್ರಾಂಕಿತ ಅಧಿಕಾರಿಗಳು ಹಾಗೂ ವಿಷಯ ನಿರ್ವಾಹಕರು ಸರಳವಾಗಿ ಬಳಸಲು ಅನುಕೂಲವಾಗುವಂತೆ ಸರ್ಕಾರಿ ನೌಕರರ ಸಂಘವು ಹೆಚ್.ಆರ್.ಎಂ.ಎಸ್.ತಂತ್ರಾಂಶ ಮತ್ತು ಕೆ.ಎ.ಎಸ್.ಎಸ್.ಕುರಿತು ಕಾರ್ಯಾಗಾರ ಆಯೋಜಿಸಿರುವುದು ಅತ್ಯಂತ ಉಪಯುಕ್ತವಾಗಿದೆ. ಈ ತಂತ್ರಾಂಶವನ್ನು ಅರಿತು ಅಳವಡಿಸಿಕೊಂಡಲ್ಲಿ ಆಡಳಿತ ವ್ಯವಸ್ಥೆ ಸುಗಮವಾಗಲಿದೆ ಎಂದವರು ನುಡಿದರು.
ಪ್ರಸ್ತುತ ವಿನ್ಯಾಸಗೊಳಿಸಲಾಗಿರುವ ಹೆಚ್.ಆರ್.ಎಂ.ಎಸ್.ತಂತ್ರಾಂಶ-2.0ವನ್ನು ವಿಷಯ ನಿರ್ವಾಹಕರು ಸರಳವಾಗಿ ಅರಿತು ನಿರ್ವಹಿಸಲು ಅನುಕೂಲವಾಗುವಂತೆ ರೂಪಿಸಲಾಗಿದೆ. ಅದರಲ್ಲಿ ನೌಕರರ ಎಲ್ಲಾ ದಾಖಲೆಗಳನ್ನು ನಿರ್ವಹಿಸಲು ಹಾಗೂ ದಾಖಲಿಸಲು ವಿಶೇಷ ಗಮನಹರಿಸಲಾಗಿದೆ. ಈ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಅಕ್ಟೋಬರ್ಮಾಸಾಂತ್ಯದವರೆಗೆ ನಡೆಯಲಿದೆ. ನಂತರದ ಕಾಲದಲ್ಲಿ ಎಲ್ಲರೂ ತಂತ್ರಾಂಶವನ್ನು ಸರಳವಾಗಿ ಬಳಸಿಕೊಳ್ಳಬಹುದಾಗಿದೆ. ತಂತ್ರಾಂಶದ ಬಳಕೆ ಕುರಿತು ತರಬೇತಿ ಪಡೆದವರು ತರಬೇತಿ ಪಡೆಯದ ಇತರೆ ಅಧಿಕಾರಿ-ಸಿಬ್ಬಂಧಿಗಳಿಗೂ ತಿಳಿಸುವಂತಾಗಬೇಕೆಂದವರು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಮಾತನಾಡಿ, ಈ ತಂತ್ರಾಂಶ ಬಳಕೆಯ ಕುರಿತು ರಾಜ್ಯ ಸರ್ಕಾರಿ ನೌಕರರ ಸಂಘವು ಇದೇ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ನೌಕರರಿಗಾಗಿ ಕಾರ್ಯಾಗಾರವನ್ನು ಆಯೋಜಿಸಿದ್ದು, ನೌಕರರ ವಲಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದ ಸಹಯೋಗದೊಂದಿಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಯೋಜಿಸುವ ಉದ್ದೇಶ ಹೊಂದಲಾಗಿದೆ. ನೌಕರರು ಈ ಸದವಕಾಶದ ಲಾಭ ಪಡೆದುಕೊಳ್ಳಬೇಕೆಂದವರು ನುಡಿದರು.
ಈ ತಂತ್ರಾಂಶದ ಬಳಕೆಯಿಂದ ನೌಕರರ ದಾಖಲೆಗಳನ್ನು ನಿರ್ವಹಿಸಲು ಹಾಗೂ ವ್ಯವಸ್ಥಿತವಾಗಿ ದಾಖಲಿಸುವಲ್ಲಿ ಸಮಸ್ಯೆಗಳಿಂದ ಮುಕ್ತಗೊಂಡು ಸುಧಾರಣೆ ಕಾಣಬಹುದಾಗಿದೆ. ಉಪನ್ಯಾಸ, ಚರ್ಚೆ, ಸಂವಾದ ಮತ್ತು ಪ್ರಾತ್ಯಕ್ಷಿತೆಗಳ ಮೂಲಕ ನಡೆಯುವ ತರಬೇತಿ ಕಾರ್ಯಾಗಾರವು ಅತ್ಯುಪಯುಕ್ತವಾಗಿದೆ. ಅದಕ್ಕಾಗಿ ವಿಷಯಾಧಾರಿತ ಸಂಪನ್ಮೂಲ ವ್ಯಕ್ತಿಗಳೇ ಮಾಹಿತಿ ನೀಡುತ್ತಿರುವುದು ವಿಶೇಷವಾಗಿದೆ ಎಂದರು.
Gurudatta Hegde KASS ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರ ಎಲ್ಲಾ ಇಲಾಖೆಗಳ ನೌಕರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಲಾಭ ಪಡೆದುಕೊಳ್ಳಬೇಕು. ಬಹುಸಂಖ್ಯಾತ ನೌಕರರು ಈವರೆಗೆ ಹೆಸರು ನೋಂದಾಯಿಸಿಕೊಳ್ಳದಿರುವುದು ಬೇಸರದ ಸಂಗತಿಯಾಗಿದೆ. ಕೂಡಲೇ ನೌಕರರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಆರೋಗ್ಯ ಸಂಜೀವಿನಿ ಯೋಜನೆಯ ಫಲಾನುಭವಿಗಳು ಮತ್ತು ಅವರ ಕುಟುಂಬದ ಅವಲಂಬಿತರ ಅನಾರೋಗ್ಯಕ್ಕೆ ಚಿಕಿತ್ಸೆ ನೀಡುವಲ್ಲಿ ಜಿಲ್ಲೆಯ ಪ್ರತಿಷ್ಠಿತ ಆಸ್ಪತ್ರೆಗಳು ಹೆಸರು ನೋಂದಾಯಿಸಿಕೊಂಡಿವೆ
- ಸಿ.ಎಸ್.ಷಡಾಕ್ಷರಿ, ರಾಜ್ಯಾಧ್ಯಕ್ಷರು, ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು.
ಕಾರ್ಯಾಗಾರದಲ್ಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್ಕುಮಾರ್, ಸಂಪನ್ಮೂಲ ವ್ಯಕ್ತಿಗಳಾಗಿದ್ದ ಯೋಜನಾಧಿಕಾರಿ ಶ್ರೀಮತಿ ನಿರ್ಮಲಾ, ತಾಂತ್ರಿಕ ತರಬೇತುದಾರ ಸುಮಂತ್ಮತ್ತು ಯೋಜನಾಧಿಕಾರಿ ಶ್ರೀಮತಿ ಸುಧಾರಾಣಿ, ನೌಕರರ ಸಂಘದ ಗೌರವಾಧ್ಯಕ್ಷ ಆರ್.ಪಾಪಣ್ಣ, ರಾಜ್ಯ ಪರಿಷತ್ಸದಸ್ಯ ಎನ್.ಎಂ.ರಂಗನಾಥ್ಸೇರಿದಂತೆ ನೌಕರರ ಸಂಘದ ಪದಾಧಿಕಾರಿಗಳು, ತಾಲೂಕು ಘಟಕಗಳ ಅಧ್ಯಕ್ಷರು ಮತ್ತಿತರರು ಉಪಸ್ಥಿತರಿದ್ದರು.