District Consumer Disputes Redressal Commission ದೂರುದಾರರಾದ ಕಾಶಿಪುರದ ಎಸ್.ಮನೋಜ್ ಇವರು ಬ್ರ್ಯಾಂಚ್ ಮ್ಯಾನೇಜರ್, ರಿಲಯನ್ಸ್ ರಿಟೇಲ್ ಲಿಮಿಟೆಡ್, ಶಿವಮೊಗ್ಗ ಹಾಗೂ ರೀಜನಲ್ ಮ್ಯಾನೇಜರ್, ರಿಲಯನ್ಸ್ ರಿಟೇಲ್ ಲಿಮಿಟೆಡ್, ಬೆಂಗಳೂರು ಇವರುಗಳ ವಿರುದ್ಧ ಲ್ಯಾಪ್ಟಾಪ್ ರಿಪೇರಿಗೆ ಸಂಬಂಧಿಸಿದ ಸೇವಾನ್ಯೂನ್ಯತೆ ಕುರಿತು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಸಲ್ಲಿಸಿದ ದೂರನ್ನು ಆಲಿಸಿದ ಆಯೋಗ 45 ದಿನಗಳ ಒಳಗೆ ರಿಪೇರಿ ಮಾಡಿಕೊಡುವಂತೆ ಇಲ್ಲವಾದಲ್ಲಿ ಸೂಕ್ತ ಪರಿಹಾರ ನೀಡುವಂತೆ ಆದೇಶಿಸಿದೆ.
ದೂರುದಾರರು ತಮ್ಮ ಮಗನ ವಿದ್ಯಾಭ್ಯಾಸಕ್ಕಾಗಿ 1ನೇ ಎದುರುದಾರರಿಂದ ದಿನಾಂಕ:12/05/2022 ರಂದು ಒಂದು ಹೆಚ್ಪಿ ಲ್ಯಾಪ್ಟಾಪ್ನ್ನು ರೂ. 61,397 ಗಳನ್ನು ಪಾವತಿಸಿ ಖರೀದಿಸಿದ್ದು, ಒಂದು ವರ್ಷದ ವಾರಂಟಿ ಮತ್ತು ರೆಸ್ಕ್ಯೂ ಕೇರ್ ಪ್ಲಾನ್ನಡಿಯಲ್ಲೂ ಸಹ ವಾರಂಟಿ ನೀಡಿರುತ್ತಾರೆ.
ರೆಸ್ಕ್ಯೂ ಪ್ಲಾನ್ನಡಿಯಲ್ಲಿ ಲ್ಯಾಪ್ಟಾಪ್ ರಿಪೇರಿ ಆಗದಿದ್ದ ಪಕ್ಷದಲ್ಲಿ ಲ್ಯಾಪ್ಟಾಪ್ ಶೇ.80 ರಷ್ಟು ಬೆಲೆಯನ್ನು ಎದುರುದಾರರು ನೀಡಬೇಕಾಗಿರುತ್ತದೆ.
ದಿನಾಂಕ:13/03/2024 ರಂದು ಲ್ಯಾಪ್ಟಾಪ್ ಕೆಲಸ ನಿರ್ವಹಿಸದೇ ಡೆಡ್ ಆಗಿರುವ ವಿಷಯವನ್ನು 1 ನೇ ಎದುರುದಾರರ ಬಳಿ ತಿಳಿಸಿದಾಗ, 1 ನೇ ಎದುರುದಾರರು ಲ್ಯಾಪ್ಟಾಪ್ ರಿಪೇರಿಗಾಗಿ ಜಾಬ್ಶೀಟ್ ಸಂಖ್ಯೆ;6004300005ನ್ನು ದಿ:13/03/2024 ರಂದು ನೀಡಿರುತ್ತಾರೆ. ಸದರಿ ಲ್ಯಾಪ್ಟಾಪ್ನ್ನು ರಿಪೇರಿ ಮಾಡದೇ ತಡ ಮಾಡಿದಾಗ, ದೂರುದಾರರು ಎದುರುದಾರರಿಗೆ ಅನೇಕ ಬಾರಿ ದೂರವಾಣಿ ಮೂಲಕ ಮತ್ತು ಇ-ಮೇಲ್ ಮೂಲಕ ಕೇಳಿಕೊಂಡರೂ ಎದುರುದಾರರು ಲ್ಯಾಪ್ಟಾಪನ್ನು ರಿಪೇರಿ ಮಾಡಿಕೊಡದೆ ಇರುವ ಕಾರಣ, ರೆಸ್ಕ್ಯೂ ಕೇರ್ ಪ್ಲಾನ್ನಂತೆ ಲ್ಯಾಪ್ಟಾಪ್ನ ಶೇ.80ರಷ್ಟು ಹಣ ಕೊಡಿಸಲು ಹಾಗೂ ಇತರೆ ಪರಿಹಾರಗಳನ್ನು ಕೋರಿ ದೂರನ್ನು ಸಲ್ಲಿಸಿರುತ್ತಾರೆ.
ಆಯೋಗವು ದೂರುದಾರರು ಮತ್ತು ಎದುರುದಾರರು ಸಾಕ್ಷ್ಯ ಪ್ರಮಾಣ ಪತ್ರ, ದಾಖಲೆಗಳನ್ನು ಪರಿಶೀಲಿಸಿ ಉಭಯ ಪಕ್ಷಗಾರರ ವಾದ- ವಿವಾದಗಳನ್ನು ಆಲಿಸಿ ಎದುರುದಾರರು ಸೇವಾ ನ್ಯೂನತೆ ಎಸಗಿರುವುದಾಗಿ ಪರಿಗಣಿಸಿ ಈ ಆದೇಶವಾದ ದಿನಾಂಕದಿಂದ 45 ದಿನಗಳ ಒಳಗಾಗಿ ಎದುರುದಾರರು ದೂರುದಾರರ ಲ್ಯಾಪ್ಟಾಪ್ನ್ನು ಸರಿಯಾದ ರೀತಿಯಲ್ಲಿ ರಿಪೇರಿ ಮಾಡಿಕೊಡಬೇಕಾಗಿ ಅಥವಾ ಈ ಆದೇಶವಾದ 45 ದಿನಗಳೊಗಾಗಿ ರೂ.41,625 ಗಳನ್ನು ಶೇ.90 ರಂತೆ ಬಡ್ಡಿಯನ್ನು ಸೇರಿಸಿ ದಿನಾಂಕ;13/3/2024 ರಿಂದ ಪಾವತಿಸಬೇಕೆಂದು ತಿಳಿಸಿದೆ.
ತಪ್ಪಿದ್ದಲ್ಲಿ ಸದರಿ ಮೊತ್ತಕ್ಕೆ ಶೇ.11 ರಂತೆ ಬಡ್ಡಿಯನ್ನು ಪೂರ್ಣ ಹಣ ನೀಡುವವರೆಗೆ ನೀಡಬೇಕಾಗಿ ಹಾಗೂ ರೂ. 10,000 ಗಳನ್ನು ಮಾಸಿಕ ಹಾನಿಗೆ ಮತ್ತು ರೂ. 10,000 ಗಳನ್ನು ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತಾಗಿ ಪಾವತಿಸಬೇಕೆಂದು ನಿರ್ದೇಶಿಸಿ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ದಿನಾಂಕ;25/04/2025 ರಂದು ಆದೇಶಿಸಿದೆ.