Aurobindo Independent Pre-Graduate College ಇಂದಿನ ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಒಂದು ಒಳ್ಳೆಯ ಗುರಿ ಇಟ್ಟುಕೊಂಡು ಸಾಧನೆಯತ್ತ ನಿರಂತರ ಶ್ರಮಿಸಬೇಕು ಎಂದು ರಾಷ್ಟ್ರ ಮಟ್ಟದ ಯುಪಿಎಸ್ಸಿ ಪರೀಕ್ಷೆಯಲ್ಲಿ 421ನೇ ರಾಂಕ್ ಪಡೆದ ಜಾವಳ್ಳಿಯ ಶ್ರೀ ಅರಬಿಂದೋ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಬಿ.ಎಂ.ಮೇಘನಾ ಹೇಳಿದರು.
ತಾಲೂಕಿನ ಜಾವಳ್ಳಿಯ ಶ್ರೀ ಅರಬಿಂದೋ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸಂವಾದ ಕರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ನಂತರ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ವಿದ್ಯಾರ್ಥಿ ದಿಸೆಯಲ್ಲಿ ದೊಡ್ಡ ಗುರಿ ಹೊಂದಿದರೆ ಸಾಲದು. ಅದರ ಸಾಧನೆಯ ಬೆನ್ನತ್ತಿ ಸಾಗಬೇಕು. ಆಗ ನಮಗೆ ಕಲಿಕೆಯ ಹಂಬಲ ಹೆಚ್ಚುತ್ತದೆ. ಪ್ರತಿಯೊಬ್ಬರೂ ಸಾಮಾನ್ಯ ಜ್ಞಾನ ಹೊಂದಿರುತ್ತಾರೆ. ಆದರೆ ಅದನ್ನು ಅಸಮಾನ್ಯಗೊಳಿಸಲು ಸತತ ಅಭ್ಯಾಸ ಹಾಗೂ ಪ್ರಯತ್ನದಿಂದ ಮಾತ್ರ ಸಾಧ್ಯವಾಗುತ್ತದೆ. ಒಮ್ಮೆಲೆ ಗುರಿ ಸಾಧನೆ ಮಾಡಲು ಸಾಧ್ಯವಾಗದೆ ಇದ್ದಾಗ ವಿಚಲಿತರಾಗದೆ ಸಾಧಿಸುವ ವರೆಗೆ ಇನ್ನಷ್ಟು ಶ್ರಮ ವಹಿಸಿದಾಗ ಖಂಡತವಾಗಿ ಯಶಸ್ಸು ದೊರೆಯುತ್ತದೆ. ವಿದ್ಯಾರ್ಥಿಗಳು ಅಮೂಲ್ಯ ಸಮಯವನ್ನು ವ್ಯರ್ಥ ಮಾಡದೆ ಸದುಪಯೋಗ ಮಾಡಿಕೊಂಡು ಉಜ್ವಲ ಭವಿಷ್ಯ ಹಾಗೂ ಉತ್ತಮ ಸಮಾಜ ರೂಪಿಸಬಹುದು.
ಈ ದಿಸೆಯಲ್ಲಿ ನನಗೆ ಶ್ರೀ ಅರಬಿಂದೋ ಕಾಲೇಜು ಸಂಪೂರ್ಣ ಸಹಕಾರ ನೀಡಿದೆ ಎಂದು ಸ್ಮರಿಸಿದರು.
ಕಾಲೇಜು ಪ್ರಾಂಶುಪಾಲ ಕೆ.ನಾಗರಾಜ್ ಮಾತನಾಡಿ, ಬಿ.ಎಂ.ಮೇಘನಾ ಅವರು ಶ್ರೀ ಅರಬಿಂದೋ ಕಾಲೇಜಿನಲ್ಲಿ 2012-13ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದಾರೆ. ಈಗ ಪ್ರತಿಷ್ಠಿತ ಯುಪಿಎಸ್ಸಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದಿರುವುದು ನಮ್ಮ ಸಂಸ್ಥೆ ಹಾಗೂ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿ ಇನ್ನಷ್ಟು ಸಮಾಜಮುಖಿ ಕಾರ್ಯ ಮಾಡಿ ರಾಷ್ಟ್ರದ ಆಸ್ತಿ ಆಗಲಿ ಎಂದು ಹಾರೈಸಿದರು.
Aurobindo Independent Pre-Graduate College ಕಾಲೇಜಿನ ಉಪ ಪ್ರಾಂಶುಪಾಲರಾದ ಎಸ್.ಎಂ.ಜೋಸೆಫ್, ವಿದ್ಯಾ ಸಂಸ್ಥೆಯ ಕರ್ಯದರ್ಶಿ ಬಿ.ಎಲ್.ನೀಲಕಂಠಮೂರ್ತಿ, ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಶ್ರೀಕಾಂತ್ ಎಂ.ಹೆಗಡೆ, ಬಿ.ಎಂ.ಮೇಘನಾ ಅವರ ಪೋಷಕರಾದ ವಕೀಲ ಮೋಹನ್, ನಿವೃತ್ತ ಕನ್ನಡ ಉಪನ್ಯಾಕಿ ವತ್ಸಲಾ, ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.