Basava Jayanti ಬಸವ ಜಯಂತಿ ಆತ್ಮಾವಲೋಕನ ಮಾಡಿಕೊಳ್ಳುವ ದಿನವಾಗಬೇಕು.ಬಸವಣ್ಣನರು ಸೇರಿದಂತೆ ದಾರ್ಶನಿಕರನ್ನು ದೇವರನ್ನಾಗಿ ಮಾಡದೇ ನಮ್ಮ ಜೊತೆಗೆ ಇಟ್ಟುಕೊಂಡು ಸಾಗಬೇಕು. ನಮ್ಮ ನಡುವಿನ ಎಚ್ಚರ, ಬುದ್ದಿಯಾಗಿಸಿಕೊಳ್ಳಬೇಕು ಎಂದು
ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ಹಿರಿಯ ಪ್ರಾಧ್ಯಾಪಕ ಡಾ|| ಜಿ. ಪ್ರಶಾಂತ್ ನಾಯ್ಕ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ವಿಶ್ವಮಾನವ, ಮಹಾನ್ ಮಾನವತಾವಾದಿ, ಸಾಂಸ್ಕೃತಿಕ ನಾಯಕ, ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
Basava Jayanti 800 ವರ್ಷಗಳ ಹಿಂದೆಯೇ ವಿಶ್ವ ಪ್ರಜ್ಞೆ ಮೂಡಿಸಿದವರು, ಸಾಂಸ್ಕೃತಿಕ ಚಳವಳಿ ಕಟ್ಟಿಕೊಟ್ಟವರು ಬಸವಣ್ಣ. ಸಮಾಜದಲ್ಲಿನ ಅಸಮಾನತೆ, ಅವೈಜ್ಞಾನಿಕತೆ, ಮೌಢ್ಯತೆ ನಡುವೆ
ಸಮ ಸಮಾಜದ ವಿಶ್ವ ಪ್ರಜ್ಞೆ ಮೂಡಿಸಿದ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಕರೆಯಲು ೮೦೦ ವರ್ಷ ಬೇಕಾಯಿತು.
ಈ ಜಯಂತಿ ಆಚರಣೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ದಿನವಾಗಬೇಕು. ಯುವಜನತೆ ಮುಖ್ಯವಾಗಿ ಆತ್ಮಾವಲೋಕನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು.
ಸಮಾಜದಲ್ಲಿ ಬದುಕನ್ನು ಸಂಕೀರ್ಣಗೊಳಿಸಿ, ಅಸಮಾನತೆಯನ್ನು ವಿಜೃಂಭಿಸಿ, ತಾರತಮ್ಯ ಹೆಚ್ಚಿಸಿ, ಜಾತಿ ಅಹಂಕಾರ ಮೆರೆಯುತ್ತಿರುವುದು ನಮ್ಮ ಮೊದಲ ಸೋಲು. ಮತ್ತು ವಚನಕಾರರನ್ನು ದೂರ ಇಡುವ ಪ್ರಜ್ಞೆ ಕಾಣುತ್ತಿದ್ದೇವೆ. ನಮ್ಮ ರಾಜ್ಯದ ಜನ ಬಸವಾದಿ ಶರಣರನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದರೆ ಇಡೀ ವಿಶ್ವಕ್ಕೆ ವಿಶ್ವ ಮಾನವತೆ, ಜಾತ್ಯಾತೀತತೆ ಬೋಧಿಸುವ ಗುರು ಆಗಬಹುದಿತ್ತು. ವರ್ಣಾಶ್ರಮ ಮತ್ತು ಅದರಿಂದ ಉಂಟಾಗುತ್ತಿರುವ ಮೌಢ್ಯ, ಅಸಮಾನತೆ ವಿರುದ್ದ ಹೋರಾಡಲು ಈ ನೆಲವನ್ನೇ ಪ್ರಯೋಗಶಾಲೆ ಆಗಿಸಿಕೊಂಡಿದ್ದರು ಬಸವ. ಮುಕ್ತವಾದ ಅಭಿವ್ಯಕ್ತಿಯ ವೇದಿಕೆಯಾದ ಅನುಭವ ಮಂಟಪಕ್ಕೆ ಅಲ್ಲಮಪ್ರಭು ರನ್ನು ನಾಯಕನನ್ನಾಗಿ ಮಾಡುತ್ತಾರೆ.
ಅರಿವೇ ಗುರು. ಮಾತು ಜ್ಯೋತಿರ್ಲಿಂಗವಾಗಿರಬೇಕು. ಮಾತು ದೇವರಾಗಿರಬೇಕು ಎಂದಿದ್ದರು ಬಸವಣ್ಣ. ಪ್ರೀತಿಯಿಂದ, ವಿಶ್ವಾಸದಿಂದ ಮಾತನಾಡಬೇಕು. ಆದರೆ ಈಗ ಎಚ್ಚರಿಕೆಯಿಂದ ಮಾತನಾಡುವ ಸ್ಥಿತಿಯಿದೆ.
ಅಖಂಡ ಜೀವನ ಪ್ರೀತಿಯ ಬಸವಣ್ಣನವರನ್ನು ನಾವೆಲ್ಲ ದಕ್ಕಿಸಿಕೊಳ್ಳಬೇಕಿದೆ. ವ್ಯಕ್ತಿ ನಿಷ್ಟತೆ ಅರಿಯಬೇಕೆಂದರೆ ಬಸವಣ್ಣನ ಬಳಿಗೆ ಸಾಗಬೇಕು. ನಮ್ಮ ವಿಕಾರತೆ, ಆತಂಕಗಳಿಗೆ ವಚನಗಳಲ್ಲಿ ಉತ್ತರವಿದೆ. ಎಲ್ಲರೂ ವಚನ ಓದುವ ಅರ್ಥೈಸಿಕೊಂಡು ಬಾಳುವ ಅವಶ್ಯಕತೆ ಇದೆ. ಬಸವ, ಅಕ್ಕ, ಅಲ್ಲಮ, ಶರಣರ, ಬುದ್ದ, ದಾರ್ಶನಿಕರ ಚರಿತ್ರೆ ತಿಳಿದು, ಅವರ ವಚನ, ತತ್ವಗಳನ್ನು ಅರಿಯಬೇಕಿದೆ. ಇವರನ್ನು ದೇವರನ್ನಾಗಿ ಮಾಡದೇ ನಮ್ಮ ಜೊತೆಗೆ ಇಟ್ಟುಕೊಂಡು ಸಾಗಬೇಕು. ನಮ್ಮನಡುವಿನ ಎಚ್ಚರ, ಬುದ್ದಿಯಾಗಿರಬೇಕು.
ಪ್ರಸ್ತುತ ಮಾತನ್ನು ದೇವರಾಗಿಸುವ ಬದಲು, ಶಬ್ದ ಸೂತಕ ಮಾಡಿಕೊಂಡು ಉತ್ಕರ್ಷ ಹೆಚ್ಚಿಸಿಕೊಳ್ಳುತ್ತಿದ್ದೇವೆ. ಈ ಸಂದರ್ಭದಲ್ಲಿ ಬಸವಣ್ಣನವರ ಹತ್ತಿರ ನಾವು ಹೋಗಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಈ ದಿನವನ್ನು ಇಡೀ ನಾಗರೀಕ ಸಮಾಜ ನೆನಪು ಮಾಡಿಕೊಳ್ಳಬೇಕು. ಇಡೀ ಮನುಕುಲದ ಮಾರ್ಗದರ್ಶಕ ಬಸವಣ್ಣ.ವಿಶ್ವ ಗುರು ಬಸವಣ್ಣನವರ ಸಂದೇಶಗಳು ನಮ್ಮೆಲ್ಲರ ಜೀವನಕ್ಕೆ ದಾರಿದೀಪವಾಗಿದ್ದು ಅವರು ರಾಷ್ಟ್ರ, ಇಡೀ ಪ್ರಪಂಚಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಬಿದ್ದವರನ್ನು ಮೇಲೆತ್ತೋಣ, ಎಲ್ಲರೂ ನಮ್ಮವರು ಎಂದು ಸಾರುತ್ತಾ ಎಲ್ಲರಿಗೂ ಅರ್ಥವಾಗುವ ವಚನಗಳ ಮೂಲಕ ಸಮಾಜದ ಅಂಕು ಡೊಂಕು ತಿದ್ದುವ ಕೆಲಸ ಮಾಡಿದ ಅವರು ನಮ್ಮೆಲ್ಲರಿಗೆ ಆದರ್ಶ. ನಮ್ಮ ದೇಶ ಭಾರತ ಗುರು ಪರಂಪರೆಯಿಂದಾಗಿ ಭಾರತವಾಗಿ ಉಳಿದಿದೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ , ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ರಾದ ಚಂದ್ರಭೂಪಾಲ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ,
ಮಾತನಾಡಿದರು.
ಬಸವ ಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ, ಬೆಕ್ಕಿನಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ಚನ ನೀಡಿದರು.
ವೀರಶೈವ ಸಮಾಜ ಸೇವಾ ಸಂಘ ಅಧ್ಯಕ್ಷರಾದ ಜ್ಯೋತಿ ಪ್ರಕಾಶ್, ಉಪಾಧ್ಯಕ್ಷರಾದ ಎಸ್ ಪಿ ದಿನೇಶ್, ಬಳ್ಳೆಕೆರೆ ಸಂತೋಷ್, ಹೆಚ್.ಸಿ.ಯೋಗೇಶ್, ತಾರಾನಾಥ್, ಅನಿತಾ ರವಿಶಂಕರ್
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಸಮಾಜದ ಮುಖಂಡರು, ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು.
Basava Jayanti ಬಸವಣ್ಣನಂಥವರನ್ನ ನಮ್ಮ ನಡುವಿನ ಎಚ್ಚರ ಬುದ್ಧಿಯಾಗಿಸಿಕೊಳ್ಳಬೇಕು- ಡಾ.ಪ್ರಶಾಂತ್.ಜಿ ನಾಯಕ್
Date: