Bapuji Institute of Hi-Tech Education ಆಧುನಿಕ ತಂತ್ರಜ್ಞಾನದ ಯಾಂತ್ರೀಕೃತ ಬದುಕಿನಲ್ಲಿ ಭಾವನೆಗಳು ಸಾಯಬಾರದು. ವಿಚಾರಗಳು 0ಸಮೃದ್ಧವಾಗಿದ್ದು ಒಳ್ಳೆಯದನ್ನು ಹುಡುಕುವಲ್ಲಿ ಅಂತರ್ ದೃಷ್ಟಿ ಬೇಕು ಎಂದು ಬರಹಗಾರ ಪ್ರೊ. ಪದ್ಮಣ್ಣ ಹಿರೇಗಿಡ್ಡಪ್ಪನವರ್ ಹೇಳಿದರು.
ಅವರಿಂದು ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್ ನ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಹೃದಯ ಶ್ರೀಮಂತಿಕೆಯು ಅಂತರ್ಜನ್ಯವಾದದ್ದು, ಕಂಪ್ಯೂಟರ್ ಕ್ಷೇತ್ರವನ್ನು ಒಳಗೊಂಡಂತೆ ಇದು ಎಲ್ಲ ಕ್ಷೇತ್ರಗಳಲ್ಲಿ ದುಡಿಯುವವರಲ್ಲೂ ಬೇಕು, ಎಲ್ಲದಕ್ಕೂ ಕಂಪ್ಯೂಟರನ್ನೇ ಅವಲಂಬಿಸದೆ ಆಲೋಚನೆಯ ಲಹರಿಯಲ್ಲಿ ಬದುಕು ಕಟ್ಟಿಕೊಳ್ಳುವ ಹಾಗೂ ಕಟ್ಟಿ ಕೊಡುವ ಬಗೆಗೂ ಮುಂದಾಗಬೇಕು, ನೆನಪುಗಳನ್ನು ಮೆದುಳಿನಲ್ಲಿ ದಾಖಲಿಸಿಕೊಳ್ಳಬೇಕೇ ವಿನಹ ಮೆಮೊರಿ ಕಾರ್ಡಿನಲ್ಲಿ ಇದೆ ಎಂದು ಉಪೇಕ್ಷಿಸಬಾರದು ಎಂದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಕಾಲೇಜಿನ ಚೇರ್ಮನ್ ಅಥಣಿ ಎಸ್ ವೀರಣ್ಣನವರು ಆಧುನಿಕ ತಂತ್ರಜ್ಞಾನದ ಪದವೀಧರರು ಪಾರಂಪರಿಕ ಸಾಹಿತ್ಯ ವೈಭವವನ್ನು ಆಲಕ್ಷಿಸದೆ ಆಸಕ್ತಿ ತೋರಿಸಬೇಕು ಎಂದರು.
Bapuji Institute of Hi-Tech Education ಕಾಲೇಜಿನ ಪ್ರಾಂಶುಪಾಲ ಡಾ. ವೀರಪ್ಪನವರ ಉಪಸ್ಥಿತಿಯಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ರಾಂಕ್ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಮುದ್ಯತಾ ಮತ್ತು ತಂಡದವರು ಪ್ರಾರ್ಥನೆ ಹಾಡಿದರೆ ಪ್ರಶಾಂತಿನಿ ಬಿ ಎಂ ಸ್ವಾಗತ ಕೋರಿದರು. ನವೀನ್ ಹೆಚ್, ಜ್ಯೋತಿ ಎನ್ ಅತಿಥಿಗಳ ಪರಿಚಯ ಮಾಡಿದರೆ, ಕೆ ವೈ ವೀರೇಂದ್ರ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕೆ ಸಿದ್ದಲಿಂಗಪ್ಪ ಅತಿಥಿಗಳನ್ನು ಸನ್ಮಾನಿಸಿದರು. ವಿದ್ಯಾ ಹಾಗೂ ಕಲ್ಯಾಣ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಎಂ ಎಸ್ ಪೂಜಾ ವಂದನೆ ಸಲ್ಲಿಸಿದರು.
-ಚಿತ್ರ ಹಾಗೂ ವರದಿ: ಡಾ. ಎಚ್ ಬಿ ಮಂಜುನಾಥ, ಹಿರಿಯ ಪತ್ರಕರ್ತರು-