Friday, March 20, 2026
Friday, March 20, 2026

Book Review ಬಹುಮುಖಿ ಚಿಂತನೆಯ ಕಾಶಿ ಅವರ  ಕೃತಿ,ಬದುಕಿಗೊಂದು ಭಾಷೆ

Date:

ಪುಸ್ತಕ ಪರಿಚಯ:
ಡಾ.ಸುಧೀಂದ್ರ.
ಕೆ ಲೈವ್ ನ್ಯೂಸ್ ಪೋರ್ಟಲ್

Book Review ಸಾಮಾನ್ಯ ನಮ್ಮ ಓದಿನಲ್ಲಿ ಪ್ರಬಂಧಗಳ ಬಗ್ಗೆ ತಿಳಿದುಕೊಂಡಿರುತ್ತೇವೆ. ಅವುಗಳು ವಿಷಯಾಧಾರಿತ ಮತ್ತು ವಿಚಾರಪೂರ್ಣ.ಕೆಲವು ಹರಟೆ, ಲಘುಹಾಸ್ಯ, ಲಾಲಿತ್ಯ,ವೈನೋದ, ಗಾಂಭೀರ್ಯ …ಹೀಗೆ ನಮ್ಮ ಆಂತರ್ಯಕ್ಕೆ ಪ್ರವೇಶಿಸುವಲ್ಲಿ
ರಹದಾರಿ ಪಡೆಯುತ್ತವೆ. ಆ ಕೌಶಲವನ್ನ ಲೇಖಕರು ಮಾಡಿರುತ್ತಾರೆ. ಈ ಧಾಟಿ ವೈವಿಧ್ಯಗಳಲ್ಲಿ ಕೆಲವು , ಕೆಲವರಿಗೆ ಇಷ್ಟವಾಗಬಹುದು,ಆಗದೇ ಇರಬಹುದು
ನನಗೆ ಲಕ್ಷ್ಮೀನಾರಾಯಣ ಕಾಶಿ ಅವರ ಕೃತಿ ‘ ಬದುಕಿಗೊಂದು ಭಾಷೆ’ ಓದುತ್ತಿದ್ದಂತೆ ಕಾಶಿಯವರು ಆಲಂಗಿಸಿಕೊಂಡ ಧಾಟಿ ಇವೆಲ್ಲಕ್ಕೂ ಭಿನ್ನವಾಗಿದೆ.

ಕೃತಿಯಲ್ಲಿ 41 ಪುಟ್ಟಪುಟ್ಟ ಬರಹಗಳಿವೆ.ಅವರು ಮಲೆನಾಡಿನ ಜೀವನ,
ಜೀವಜಾಲ, ಕಾಡುಗಳ ಬಗ್ಗೆ ಬರೆಯುತ್ತಾರೆ.
ಅದೆಷ್ಟು ತಾದಾತ್ಮ್ಯ ಸಾಧಿಸುತ್ತಾರೆಂದರೆ ವಿಷಯದ ಪೂರ್ಪಾಪರ, ಅಂಕಿ ಅಂಶಗಳು, ಹಿಂದಿನವರ ಪರಿಸರ ಕಾಳಜಿ,ಇಂದಿನವರ ತೆಳು ಕಾಳಜಿ, ಸರ್ಕಾರೀಕರಣ 
ಮುಂತಾಗಿ ವಾಕ್ಯದಿಂದ ವಾಕ್ಯಕ್ಕೆ 
ಟೀಕೆ ನೀಡುತ್ತಾ ಜಿಗಿಯುತ್ತಾರೆ.
ಅವರು ನೀಡುವ ಮಾಹಿತಿ‌ ಕೇವಲ‌ ಭಾವನಾತ್ಮಕವಾಗಿರದೇ
ವಾಸ್ತವದ ನೆಲೆಗಟ್ಟಿನ ಮೇಲೆ ಕಟ್ಟಿಕೊಡುತ್ತಾರೆ. 
ಪರಿಸರ ದಿನದ ನೆಪ, ಇಡೀ ನೆನಪಿನಾಳಕ್ಕೆ ಸರಿಯುತ್ತಿರುವ ಹಸಿರು ಸಮೃದ್ಧಿಯ ದುರಂತವನ್ನ ಕಣ್ಣಿಗೆ ಕಟ್ಟುವಂತೆ ಹೇಳುವ ಕೌಶಲ ಬಳಸುತ್ತಾರೆ.
ನೆನಪಾಗುತ್ತಿರುವ ಕಾಡು ಓದುಗರ ಅಂತರಾಳದಲ್ಲಿ ಘನೀಭವಿಸುತ್ತದೆ.
ಪರಿಸರ ಕಾಳಜಿಯೇ ಅವರ ಮೂಲಧ್ವನಿ ಅಂದರೂ ಅತಿಶಯೋಕ್ತಿಯಲ್ಲ. 

ಕಾಶಿ ಅವರನ್ನ ಕಾಡಿದ ವಿಷಯಗಳು ಬಹುಮಖಿಯಾಗಿವೆ. ಸ್ವತಃ ಸಮಾಜಶಾಸ್ತ್ರ ಸ್ನಾತಕೋತ್ತರ ಪದವೀಧರರು. ಅವರ ಎದೆಯಾಳದಿಂದ ಮನುಷ್ಯ, ಸಂಘಜೀವನ, ಸಾಮಾಜಿಕ ಸನ್ನಿವೇಶ, ಕಲಾ ಪ್ರಕಾರಗಳು ,ಸಾಂಸ್ಕೃತಿಕ ಆಚರಣೆ ,ವ್ಯಕ್ತಿಚಿತ್ರಣ,ಜನಸಂಖ್ಯೆ,‌
ಆರೋಗ್ಯ ಒಂದೇಎರಡೆ ? ಅವರು ಲೇಖನಿಯಾಡಿಸಿರುವ ಕ್ಷೇತ್ರಗಳು ವೈವಿಧ್ಯಮಯ.

ಜೀವನದಲ್ಲಿ‌ ಯಶಸ್ಸು‌ ಹೊಂದಬೇಕಾದರೆ ಬೇಕಾದ ಛಲ,ಆತ್ಮಬಲದ ಬಗ್ಗೆ ಪ್ರತ್ಯಕ್ಷ ಮಾದರಿಗಳನ್ನ ನಿರೂಪಿಸುತ್ತಾರೆ.

ಮಲೆನಾಡಿನ ಮಣ್ಣಿನ ವಾಸನೆ
ಅವರ ಬಹುಪಾಲು‌ ಬರಹಗಳಲ್ಲಿ ‌ಸೂಕ್ಷ್ಮವಾಗಿ ಗಮನಿಸಬಹುದು.
ಪರಿಸರದ ಬಗ್ಗೆ ಬರೆಯುವಾಗ
ಕಾಡಿನ ನಾಶ, ಡ್ಯಾಮುಗಳ ಬಗ್ಗೆ 
ನಿರೂಪಿಸುವಾಗ ಮುಳುಗಿದ 
ಜನರ ಆಸ್ತಿಪಾಸ್ತಿ ಜೊತೆಗೆ ಅವರ ಸಾಂಸ್ಕೃತಿಕ ಬದುಕು ಹೇಗೆ ನೀರು ಕುಡಿಯಿತು ಎಂಬುದನ್ನ ವಿಹ್ವಲತೆಯಿಂದ ಕಣ್ಣೆದುರು ನಿಲ್ಲಿಸುತ್ತಾರೆ.

ಒಂದು ಕಣಿವೆ ಯೋಜನೆ ನಿರ್ಮಿಸುವಾಗ ನಾಶವಾಗುವ ಅರಣ್ಯ ಪ್ರದೇಶ, ವನ್ಯಜೀವಿ ಸಂಕುಲ, ವೃಕ್ಷ ಪ್ರಬೇಧಗಳು
ಹೀಗೆ  ನಿರೂಪಿಸುವಾಗ ಮಾಹಿತಗಳನ್ನ ಕೊಡುವ ಕಲೆ ಅದ್ಭುತವಾಗಿದೆ. ಇವೆಲ್ಲವೂ 
Based on Facts & Figures.ಓದುಗ ಮತ್ತೆಲ್ಲೂ ವಿಚಲಿತನಾಗಲಾರ. ಓದಿನ ಸಂಗಡ ಈ ಎಲ್ಲ Reference ಗಳು‌ ಅವರ ಪ್ರತಿಯೊಂದು ಲೇಖನವನ್ನ ಘಟ್ಟಿಗೊಳಿಸಿವೆ.

ಪ್ರಗತಿ ಪರಿಸರದ ಉಳಿವಿನೊಂದಿಗಿರಬೇಕು. ಪರಿಸರ ನಾಶ ಮಾಡುವ ಪ್ರಗತಿ‌ಬೇಕಿಲ್ಲ ಎಂಬ ನಿಷ್ಠುರತೆ ಇಲ್ಲಿವೆ. 
ಎಲ್ಲ ಲೇಖಕರನ್ನ ಕಾಡುವಂತೆ ಸಮಾಜದ ಸಮಸ್ಯೆಗಳು ಇವರನ್ನು ಕಾಡಿವೆ. ಆದರೆ ಕಾಶಿ ಅವರ Attempt ಮತ್ತು Attention ಭಿನ್ನವಾಗಿವೆ.
ಒಣವಾದ ಮಂಡಿಸದೇ ಅತ್ಯಂತ ಆಪ್ತವೆನಿಸುವ ಧಾಟಿಯಲ್ಲಿ ಇಡೀ ವಸ್ತುವಿನ 
ಹಿನ್ನೆಲೆಯನ್ನ ಮನಸ್ಸೊಪ್ಪುವ ರೀತಿ ತೆರೆದಿಡುತ್ತಾರೆ. ಇದು ಕಾಶಿ ಅವರ ಬರಹಗಳ Success.
ಇದಕ್ಕೆ ಪರಿಸರ, 
ನದಿ ಜೋಡಣೆ ,ತಾಂತ್ರಿಕತೆಯ ದುರಹಂಕಾರ ಎಂಬ ಬರಹದಲ್ಲಿ 
ದುರಂತವಾಗ ಬಹುದಾದ ಪರಿಸರನಾಶ ನಮ್ಮನ್ನ ಎಚ್ಚರಿಸುತ್ತದೆ.
ಪಶ್ಚಿಮಘಟ್ಟ ಉಳಿಸಿ ಎಂಬ ಆಂದೋಲನದ ನಿರೂಪಣೆಯಲ್ಲಿ ಸಮುದಾಯಕ್ಕೆ ವಿವರ ತಿಳಿಸದೇ ಕೇವಲ ಜನಪ್ರತಿನಿಧಿ ಸರ್ಕಾರಗಳು ಮೇಲ್ನೋಟಕ್ಕೆ 
ಕಣ್ಣುಮುಚ್ಚಾಲೆಯಾಡುವ ಪ್ರಸಂಗದ ಬಗ್ಗೆ ಧೈರ್ಯವಾಗಿ ಬರೆದಿದ್ದಾರೆ.
ಪಶ್ಚಿಮ ಘಟ್ಟ ಉಳಿಸಿ ಪಾದಯಾತ್ರೆಯ ಅನುಭವ 
,ಕಾಳಜಿ‌ ಎಂಥವರಿಗೂ ಸ್ಪಂದಿಸುವಂತಿದೆ. ಇನ್ನು ಕೌಶಲತೆ , ಭಾರತೀಯ ಹಳ್ಳಿಗಳ 
ಆರ್ಥಿಕತೆಯನ್ನ ಹೇಗೆ ಸದೃಢಗೊಳಿಸಬಹುದು ಎಂಬುದನ್ನ ಯಶಸ್ವಿ ಮಹಿಳೆಯ‌
ಮೂಲಕ ಕಟ್ಟಿಕೊಡುತ್ತಾರೆ.

Book Review ಹದಿಹರೆಯದವರ ಆರೋಗ್ಯದ ಬಗ್ಗೆ ಕಾಶಿ ಅವರದ್ದು ಕ್ಷೇತ್ರಕಾರ್ಯದ ಅನುಭವ ಅನನ್ಯವಾಗಿ ನಿರೂಪಿಸಲಾಗಿದೆ.
ಲೈಂಗಿಕ ಆರೋಗ್ಯ, ಶಿಕ್ಷಣದಲ್ಲಿ ಅದರ ಪಾತ್ರ, ಬೋಧನಾ ಪರಿಕರಗಳು ,ಸಂಘ ಸಂಸ್ಥೆ, ಅಧಿಕಾರಿಗಳ ಉತ್ಸಾಹ , ಸಾಮಾಜಿಕ‌ ಪ್ರತಿಕ್ರಿಯೆ
ಎಲ್ಲದಕ್ಕೂ ಅವರ ಬರವಣಿಗೆಯ ಬತ್ತಳಿಕೆಯಲ್ಲಿ 
ಯಥೇಚ್ಛ ಮಾಹಿತಿಗಳಿವೆ .
ಸಂದೇಹಕ್ಕೆಡೆಯೇ ಇಲ್ಲ.
ನೀನಾಸಂ ಹೆಗ್ಗೋಡು,ಕಾಶಿ ಅವರ ತಾರುಣ್ಯದ ದಿನಗಳೊಂದಿಗೆ ತಳುಕು ಹಾಕಿಕೊಂಡಿದೆ. ರಂಗ ವಾಮನ‌
ಜಗರಂಗದ ತ್ರಿವಿಕ್ರಮನಾಗಿ ಬೆಳೆದ ಸುಬ್ಬಣ್ಣನವರೊಂದಿಗೆ 
ಕಳೆದ ದಿನ, ಆಡಿದ ಮಾತು , ಘಟನಾವಳಿ ಎಲ್ಲವೂ ಪರಿಣಾಮಕಾರಿಯಾಗಿದೆ.
ನಗರಕ್ಕೆ ಹೋಗಿ ಅಲ್ಲಿ ಬೆಳಗೋಕಿಂತ ,ನಗರದವರೇ ಹಳ್ಳಿಗೆ ಬರಬೇಕು ಎನ್ನುವ 
ಸುಬ್ಬಣ್ಣನವರ ತರಹ ಯುವಜನತೆಯನ್ನ ಪ್ರೇರೇಪಣೆ ಮಾಡುವವರು ಈಗ ವಿರಳ.
ಯಕ್ಷರಂಗದ ದಂತಕತೆ ಚಿಟ್ಟಾಣಿ‌, ಕೆರೆಮನೆ ಶಂಭು ಹೆಗ್ಗಡೆ ಹೀಗೆ ಗುಣವಂತೆಯಲ್ಲಿನ
ಯಕ್ಷಕಲಾರಂಗದ ಚಟುವಟಿಕೆಗಳನ್ನ ಅತೀ ಸಮೀಪದಿಂದ ಕಂಡ ಅವರ ಬರವಣಿಗೆ ಈ ಕಲಾವಂತಿಕೆ, ಸಾಹಸಗಳ ಬಗ್ಗೆ ಮೆಚ್ಚುಗೆ ಸೂಸುವಂತಿದೆ.

ಲಕ್ಷ್ಮೀನಾರಾಯಣ ಕಾಶಿ ,ವಾಗ್ಮಿ.
ಅವರ ಲೇಖನಗಳೆಲ್ಲ ಅವರಂತೆಯೇ ಮಾತಾಡುತ್ತಾ ಸಾಗುತ್ತವೆ. ಜೀವನಾನುಭವ
ಮತ್ತು ದಂತದರಮನೆ ಈ ಎರಡರಲ್ಲಿ ಅವರದ್ದು ಜೀವನಾನುಭವದಿಂದ ಮೂಡಿಬಂದ ಕೃತಿ ” ಬದುಕಿಗೊಂದು ಭಾಷೆ”
ಮಾಹಿತಿ ಪೂರ್ಣ ಬರಹಗಳ 
ಸಾಲಿನಲ್ಲಿ ಪ್ರಥಮವಾಗಿ ನಿಲ್ಲುವ ಎಲ್ಲ ಅರ್ಹತೆಗಳೂ
ಈ ಕೃತಿಗಿದೆ.  ಚಿಂತನೆಗಳ ಕಾಶಿ
ಲಕ್ಷ್ಮೀನಾರಾಯಣ ಕಾಶಿ.
ಬಹುಮುಖಿ  ಚಿಂತನೆಗಳ
ಹೂರಣವನ್ನ ನಮಗೆ ಉಣಬಡಿಸಿದ್ದಾರೆ.
ಕೊನೆಯಲ್ಲಿ ಅನಿಸಿದ್ದು. ಇಷ್ಟು ವಿಷಯ ವೈವಿಧ್ಯವುಳ್ಳ ಲೇಖಕರು ಇಲ್ಲಿನ ಬಹುಪಾಲು ವಿಷಯಗಳನ್ನ ಪ್ರತ್ಯೇಕ ಪುಸ್ತಕರೂಪದಲ್ಲೇ ಬರೆಯುವಷ್ಟು ಸಾಮಗ್ರಿ‌ ಇಟ್ಟುಕೊಂಡಿದ್ದಾರೆ. ಆದಷ್ಟೂ ಅವುಗಳನ್ನ ಆಗಾಗಲೇ ಸಂಕಲನ ಅಥವಾ ಗ್ರಂಥವಾಗಿ 
ಪ್ರಕಟಣೆ ಮಾಡಬಹುದಿತ್ತು.
ಕಾಶಿ ಅವರ ಮುಂದಿನ ಪುಸ್ತಕವನ್ನ ಕುತೂಹಲದಿಂದ ನಿರೀಕ್ಷಿಸುವ ಓದುಗರಲ್ಲಿ ನಾನೂ ಒಬ್ಬ ಸೇರ್ಪಡೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...