Uttaradi Mutt ಶ್ರೀಕೃಷ್ಣ ಪರಮಾತ್ಮ ಲೋಕ ದೃಷ್ಟಿಯಿಂದ ಬೆಳೆದಂತೆ ತೋರುತ್ತಾನೆಯೇ ಹೊರತು ಬಾಲ್ಯ, ಯೌವ್ವನ, ವೃದ್ಧಾಪ್ಯ ಹೀಗೆ ಗತಿಗಳು ದೇವರಿಗೆ ಇರುವುದಿಲ್ಲ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥರು ಸಂತಸ ವ್ಯಕ್ತಪಡಿಸಿದರು.
ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆಯುತ್ತಿರುವ ಶ್ರೀ ಸತ್ಯಧರ್ಮ ತೀರ್ಥ ಶ್ರೀಪಾದಂಗಳವರ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
ಅನಾದಿ ಕಾಲದಿಂದಲೂ ದೇವರು ಏಕಪ್ರಕಾರವಾಗಿಯೇ ಇದ್ದಾನೆ. ಅವನಿಗೆ ವೃದ್ಧಿ ಅಥವಾ ಬೇರೆ ಯಾವುದೇ ಗತಿ ಇರುವುದಿಲ್ಲ. ಯಾವ ರೀತಿಯಲ್ಲಿ ದೇವರು ಅವತಾರ ಮಾಡುತ್ತಾನೆಯೋ ಆ ಅವತಾರಕ್ಕೆ ತಕ್ಕಂತೆ ಲೋಕದಲ್ಲಿ ವೃದ್ಧಿಯನ್ನು ಹೊಂದಿದಂತೆ ತೋರುತ್ತಾನೆ. ನಿಜವಾಗಿ ದೇವರು ಮೂಲ ಸ್ವರೂಪದಲ್ಲಿ ಏಕಪ್ರಕಾರವಾಗಿಯೇ ಇದ್ದಾನೆ ಎಂದರು.
ಪ್ರವಚನ ನೀಡಿದ ಪಂಡಿತ ಗೋಪಾಲಾಚಾರ್ಯ, ಶ್ರೀಕೃಷ್ಣ ಪರಮಾತ್ಮ ಅವನ ಕಾರ್ಯ, ಅವನ ಗುಣಗಳು ಮತ್ತು ನಡೆನುಡಿ ಪ್ರತಿಯೊಂದೂ ಕೂಡ ಜೀವನದ ಆದರ್ಶವಾಗಿದೆ. ಅನುಕರಣೀಯವಾಗಿದೆ ಮತ್ತು ಚಿಂತನೆಗೆ ಯೋಗ್ಯವಾಗಿದೆ ಎಂದರು.
Uttaradi Mutt ಶ್ರೀಕೃಷ್ಣನ ಅನುಗ್ರಹದ ಬಲದಿಂದ ಇಲಿ ಹುಲಿಯಾಗಬಹುದು, ದಡ್ಡ ಜ್ಞಾನಿಯಾಗಬಹುದು, ಸಂಸಾರಿ ಮುಕ್ತನಾಗಬಹುದು. ಆದ್ದರಿಂದ ಶ್ರೀಕೃಷ್ಣನ ಕಥಾ ಶ್ರವಣವನ್ನು ನಿತ್ಯದಲ್ಲಿ ಮಾಡಲೇಬೇಕು ಎಂಬುದನ್ನು ಭಾಗವತ ಹೇಳುತ್ತದೆ ಎಂದರು.
ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಕುಲಪತಿಗಳಾದ ಗುತ್ತಲ ರಂಗಾಚಾರ್ಯ, ಶ್ರೀಮಠದ ದಿವಾನರಾದ ಶಶಿ ಆಚಾರ್ಯ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಜಿಲ್ಲಾ ಮಠಾಧಿಕಾರಿ ಬಾಳಗಾರು ಜಯತೀರ್ಥಾಚಾರ್ಯ ಮೊದಲಾದವರಿದ್ದರು.