Global Marketing ಜಾಗತಿಕ ಮಾರುಕಟ್ಟೆಯಲ್ಲಿ ಮೇಲ್ಗೈ ಸಾಧಿಸಲು ವಿಶ್ವದ ಅನೇಕ ದೇಶಗಳಲ್ಲಿ ಪೈಪೋಟಿ ಇದ್ದು ನಿಯಂತ್ರಿತ ಅಥವಾ ರಕ್ಷಣಾತ್ಮಕ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶ ಕಡಿಮೆ ಎಂಬುದು ಅರಿವಾಗಿದ್ದು ಭವಿಷ್ಯದ ಜಗತ್ತು ಮುಕ್ತ ಮಾರುಕಟ್ಟೆಯ ಮುಂಗಟ್ಟಿನಂತಾಗಲಿದೆ ಎಂದು ಹಿರಿಯ ಪತ್ರಕರ್ತ ಎಚ್.ಬಿ. ಮಂಜುನಾಥ್ ಅಭಿಪ್ರಾಯ ಪಟ್ಟರು.
ಬಾಪೂಜಿ ಹೈಟೆಕ್ ಎಜುಕೇಷನ್ನಿನ ಬಿಕಾಂ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನೆರವೇರಿಸಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ವಾಣಿಜ್ಯಶಾಸ್ತ್ರವು ವ್ಯಾಪಾರೋದ್ಯಮ, ಲೆಕ್ಕಪತ್ರ, ಅಂಕಿ ಅಂಶ, ಆರ್ಥಿಕ ತತ್ವಗಳು, ತೆರಿಗೆ ವಿಧಾನ,ವಿಮೆ, ಮಾರುಕಟ್ಟೆ ಹಾಗೂ ಕಾನೂನು ಕಾಯ್ದೆಗಳು ಎಲ್ಲ ವಿಷಯಗಳನ್ನೂ ಒಳಗೊಂಡಂತಿದ್ದು ಬಿಕಾಂ ಪದವಿಗೆ ಹೆಚ್ಚು ಬೇಡಿಕೆ ಇದೆ, ಭಾರತದಲ್ಲಿ ಪ್ರತಿವರ್ಷ ಹೊರಬರುವ ಸಾಮಾನ್ಯ ಪದವೀಧರರುಗಳಲ್ಲಿ ಶೇಕಡಾ 70 ರಷ್ಟು ಬಿಕಾಂ ಪದವೀಧರರೇ ಆಗಿರುತ್ತಾರೆ.
Global Marketing ದೇಶದ 962 ವಿಶ್ವವಿದ್ಯಾನಿಲಯಗಳ ಸುಮಾರು 38200 ಕಾಲೇಜುಗುಳಿಂದ ಪ್ರತಿ ವರ್ಷ ಕನಿಷ್ಠ ನಾಲ್ಕು ಲಕ್ಷ ಬಿಕಾಂ ಪದವೀಧರರು ಹೊರ ಬರುತ್ತಿದ್ದು ಸ್ವಉದ್ಯೋಗ ಮಾಡಲಿಕ್ಕಾಗಲಿ ಅಥವಾ ಉದ್ಯೋಗಿಗಳಾಗಿ ಹೋಗಲಿಕ್ಕಾಗಲಿ ಈ ಶಿಕ್ಷಣ ಅನುಕೂಲಕರವಾಗಿದೆ, ಭಾರತವು ವಿಶ್ವದ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವಲ್ಲಿ ವಾಣಿಜ್ಯಶಾಸ್ತ್ರ ಪದವೀಧರ ಜವಾಬ್ದಾರಿಯೂ ಮಹತ್ವದ್ದಾಗಿದೆ ಎಂದರು.
ಅಭಿವೃದ್ಧಿಶೀಲ ರಾಷ್ಟ್ರ’ವೆಂಬ ದೀರ್ಘಕಾಲದ ಹಣೆ ಪಟ್ಟಿಯಿಂದ ಭಾರತವು ‘ಅಭಿವೃದ್ಧಿ ಹೊಂದಿದ ರಾಷ್ಟ್ರ’ ಎಂಬ ಹೆಗ್ಗಳಿಕೆಗೆ ದಾಪುಗಾಲುಡುತ್ತಿದ್ದು ವಿಶ್ವದ ವಾಣಿಜ್ಯಾತ್ಮಕ ವ್ಯವಸ್ಥೆಯು ಭಾರತದ ಹಿಡಿತಕ್ಕೆ ಬರುವ ಕಾಲ ದೂರವಿಲ್ಲ, ಇದಕ್ಕಾಗಿ ನಮ್ಮ ವಾಣಿಜ್ಯ ಶಾಸ್ತ್ರ ಪದವೀಧರ ವಿದ್ಯಾರ್ಥಿಗಳು ಪ್ರಯತ್ನಶೀಲತೆಯಿಂದ ಈ ಅವಕಾಶದ ಸದುಪಯೋಗ ಪಡಿಸಿಕೊಂಡು ಭಾರತದ ಕೀರ್ತಿಯನ್ನು ಉತ್ತುಂಗಕ್ಕೇರಿಸಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಪ್ರಾಂಶುಪಾಲ ಡಾ. ಬಿ ವೀರಪ್ಪನವರು ಒಂದೇ ಪದವಿಗೆ ತೃಪ್ತರಾಗಿ ಉದ್ಯೋಗ ಅರಸಿಕೊಂಡು ಹೋಗುವ ಬದಲು ಇನ್ನಷ್ಟು ಪದವಿಗಳನ್ನು ಪಡೆದು ಜ್ಞಾನಿಗಳಾಗಿ ಸ್ವಉದ್ಯೋಗದ ಕಡೆಗೆ ಗಮನ ಕೊಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ತ್ರಿಭುವನಾನಂದ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತ ಕೋರಿದರು. ಶೈಕ್ಷಣಿಕ ವರದಿಯನ್ನು ಪ್ರೊ. ಶ್ವೇತಾ ಬಿ.ವಿ. ವಾಚಿಸಿದರು ಅತಿಥಿಗಳ ಪರಿಚಯವನ್ನು ಪ್ರೊ. ವೀಣಾ ಹೆಚ್.ಎಸ್. ಹಾಗೂ ಪ್ರೊ. ನಾಗರಾಜ್ ಎಂ ಎಸ್ ಮಾಡಿದರು. ಪ್ರತಿಭಾ ಪುರಸ್ಕೃತರ ಹಾಗೂ ಪದವೀಧರರ ನಾಮಘೋಷಣೆಗಳನ್ನು ಪ್ರೊ. ನಿಶಾರಾಣಿ ಡಿ.ಪಿ. ಹಾಗೂ ಪ್ರೊ.ಓ.ಹೆಚ್. ಲತಾ ಮಾಡಿದರೆ ಪದವೀಧರರಿಗೆ ಪ್ರಮಾಣವಚನವನ್ನು ಪ್ರೊ. ಜ್ಞಾನೇಶ್ವರ ಆರ್ ಎಸ್ ಬೋಧಿಸಿದರು.
ಪ್ರೊ. ಮಂಜುನಾಥ್ ಬಿ ಬಿ ವಂದನೆಗಳನ್ನು ಸಮರ್ಪಿಸಿದರು.