ಶರಾವತಿ ಸಂತ್ರಸ್ತರ ಸಮಸ್ಯೆ ಇಂದು ನಿನ್ನೆಯದಲ್ಲ. ಸುಮಾರು 64 ವರ್ಷಗಳಿಂದ ಈ ಸಮಸ್ಯೆ ಇದೆ. 1980ರ ಮೊದಲು ರಾಜ್ಯ ಸರ್ಕಾರವೇ ಅರಣ್ಯ ಭೂಮಿ ಡಿನೋಟಿಫಿಕೇಷನ್ ಮಾಡಲು ಅವಕಾಶ ಇತ್ತು. ಆದರೆ, ಆಗಿನ ಸರ್ಕಾರ ನಿರ್ಲಕ್ಷ್ಯ ವಹಿಸಿತ್ತು. ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ಬಳಿಕ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯ ಡಿನೋಟಿಫೈ ಮಾಡಬೇಕಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಆಗ್ರಹಿಸಿದರು.
ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಈ ವಿಷಯ
ಪ್ರಸ್ತಾಪಿಸಿದ ಅವರು,
ಶರಾವತಿ ಜಲ ವಿದ್ಯುತ್ ಯೋಜನೆಯಿಂದ ಸಂತ್ರಸ್ತರಾದವರು ಅರಣ್ಯ ಪ್ರದೇಶದಲ್ಲಿ ಕೃಷಿ ಮಾಡುತ್ತಿದ್ದು, ಆ ಜಾಗವನ್ನು ಡಿನೋಟಿಫೈ ಮಾಡಲು ಕೇಂದ್ರ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದರು.
‘ಶಿವಮೊಗ್ಗ ಜಿಲ್ಲೆಯ 31 ಅರಣ್ಯ ಪ್ರದೇಶಗಳಲ್ಲಿ ಸಂತ್ರಸ್ತರು ಕೃಷಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಬೇಡಿಕೆ ಮುಂದಿಟ್ಟಿದ್ದಾರೆ. ಈಡಿಗ ಸಮುದಾಯ, ಇತರ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರೇ ಹೆಚ್ಚು ಸಮಸ್ಯೆಗೆ ಸಿಲುಕಿದ್ದಾರೆ ಎಂದು ತಿಳಿಸಿದರು.
‘ಈ ಅರಣ್ಯ ಪ್ರದೇಶಗಳ ಡಿನೋಟಿಫೈ ಮಾಡಲು ಕರ್ನಾಟಕ ಸರ್ಕಾರ
ವಿಸ್ಕೃತ ಪ್ರಸ್ತಾವನೆ ಕಳುಹಿಸಬೇಕು. ಕೇಂದ್ರ ಸರ್ಕಾರ ಡಿನೋಟಿಫೈ ಮಾಡಿ
ಸಾವಿರಾರು ರೈತರಿಗೆ ನೆರವಾಗಬೇಕು’ ಎಂದು ಅವರು ಆಗ್ರಹಿಸಿದರು.
1959ರಿಂದಲೂ ಈ ರೈತರ ಹೆಸರು ಕಂದಾಯ ದಾಖಲೆಗಳಲ್ಲಿ ಸೇರ್ಪಡೆಯಾಗಿಲ್ಲ. ಇದರಿಂದಾಗಿ, ಕಿಸಾನ್ ಸಮ್ಮಾನ್ ಯೋಜನೆ ಹಾಗೂ ಇತರ ಯೋಜನೆಗಳ ಲಾಭದಿಂದ ಈ ರೈತರು ವಂಚಿತರಾಗಿದ್ದಾರೆ” ಎಂದು ಗಮನ ಸೆಳೆದರು.