Sunday, August 23, 2026
Sunday, August 23, 2026

ರಾಷ್ಟ್ರದ ಸಮಗ್ರತೆ ಕಾಪಾಡಲು ನಿಸ್ವಾರ್ಥ ಸೇವಾಮನೋಭಾವನೆ ಬೇಕು-ಸತೀಷ್ ಜಿ

Date:

ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು ನಿಸ್ವಾರ್ಥ ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಮಾಧವ ನೆಲೆಯ ಸಂಚಾಲಕ ಸತೀಶ್ ಜೀ ಹೇಳಿದರು.
ಅವರು ಯುವಾ ಬ್ರಿಗೇಡಿನ ಸಂಚಾರಿ ಕನ್ನಡ ತೇರು ತಮ್ಮ ಸಂಸ್ಥೆಗೆ ಆಗಮಿಸಿದ ಸಂದರ್ಭದಲ್ಲಿ ಸೋದರಿ ನಿವೇದಿತಾ ಪ್ರತಿಷ್ಠಾನವು ಕಮಲಾ ನೆಹರು ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ಕೊವಿಡ್-19 ಲಸಿಕಾ ಸಮೀಕ್ಷೆ ಮತ್ತು ಅಲೆಮಾರಿ ಜನಾಂಗದ ಮಕ್ಕಳಿಗೆ ಪಾಠ ಮಾಡುವ ಸೇವಾ ಕಾರ್ಯದಲ್ಲಿ ಪಾಲ್ಗೊಂಡ ಸ್ವಯಂಸೇವಕಿಯರಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡುತ್ತಿದ್ದರು.
ಕಾಲೇಜು ವಿದ್ಯಾರ್ಥಿಗಳು ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಪಾಠಕ್ಕೆ ಮಾತ್ರ ಸೀಮಿತವಾಗಬಾರದು. ಅದರಾಚೆಯೂ ಪ್ರಪಂಚವಿದೆ ಎಂಬುದನ್ನು ಅರಿತುಕೊಳ್ಳಬೇಕು. ಸಾಮಾಜಿಕ ಸೇವಾ ಮನೋ ಭಾವನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಸ್ತುತ ಬಹುತೇಕ ಯುವಕ ಯುವತಿಯರು ಸೋಷಿಯಲ್ ಮೀಡಿಯಾದಲ್ಲಿ ಮುಳುಗಿ ಹೋಗುತ್ತಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆ ಎಂದ ಅವರು ಸಾಮಾಜಿಕ ಸೇವಾಕಾರ್ಯದಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಮಾನಸಿಕ ನೆಮ್ಮದಿ ಪಡೆದುಕೊಳ್ಳಿ. ಜೀವನದಲ್ಲಿ ಹೊಸ ಹೊಸ ಪಾಠ ಕಲಿತುಕೊಳ್ಳಿ ಎಂದು ಕವಿಮಾತು ಹೇಳಿದರು.
ಸೋದರಿ ನಿವೇದಿತಾ ಪ್ರತಿಷ್ಠಾನದ ಹಿರಿಯ ಸ್ವಯಂಸೇವಕಿ ಶ್ರೀಮತಿ ವದ್ಯಾ ರಾಘವೇಂದ್ರ ಮಾತನಾಡಿ ಕೊವಿಡ್ ಲಸಿಕಾ ಅಭಿಯಾನದ ಸಮೀಕ್ಷೆಗೆ ವಿದ್ಯಾರ್ಥಿನಿಯರು ಬರುತ್ತಾರೋ ಇಲ್ಲವೋ ಎಂಬ ಆತಂಕ ತಮ್ಮಲ್ಲಿ ಇತ್ತು. ಅದರೆ ಕಮಲಾ ನೆಹರು ಕಾಲೇಜಿನ ಎನ್.ಎಸ್.ಎಸ್.ಸ್ವಯಂಸೇವಕಿಯರು ನಾಗವೇಣಿ ಮತ್ತು ಸತ್ಯವತಿ ಅವರ ನೇತೃತ್ವದಲ್ಲಿ ಹಾಗೂ ಕ್ರಿಯಾಶೀಲ, ಚೈತನ್ಯದ ಚಿಲುಮೆಯಾದ ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿಗಳಾದ ಡಾ.ಬಾಲಕೃಷ್ಣ ಹೆಗಡೆ ಅವರ ಮಾರ್ಗದರ್ಶನದಲ್ಲಿ ಹೆಚ್ಚಿನ ಸಂಖ್ಯೆಯ ಸ್ವಯಂಸೇವಕಿಯರು ನಿವೇದನಾ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಟ್ಯಾಂಕ್ ಮೊಹಲ್ಲಾ, ಪೆನ್ಷನ್ ಮೊಹಲ್ಲಾ, ಕಂಟ್ರಿ ಕ್ಲಬ್, ವಿದ್ಯಾನಗರ ಮೊದಲಾದೆಡೆ ಸರ್ವೆ ಕಾರ್ಯ ನಡೆಸಿ ಉತ್ತಮವಾದ ವರದಿಯನ್ನು ನೀಡಿದ್ದಾರೆ. ಈ ವಿದ್ಯಾರ್ಥಿನಿಯರು ಇದೇ ರೀತಿ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ನಿರತವಾಗಿರಲಿ ಎಂದು ಆಶಿಸಿದರು.
ಹಿರಿಯ ಸ್ವಯಂಸೇವಕಿಯಾದ ಭಾಗೀರತಿ ಬಾಯಿ, ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿ ಡಾ.ಬಾಲಕೃಷ್ಣ ಹೆಗಡೆ ಮತ್ತಿತರರಿದ್ದರು.
ಇನ್ ಪುಟ್ಸ್:
ಕೊವಿಡ್-19 ಲಸಿಕಾ ಸಮೀಕ್ಷಾ ಕಾರ್ಯ ಮಾಡಿಕೊಡುವಂತೆ ಸೋದರಿ ನಿವೇದಿತಾ ಪ್ರತಿಷ್ಠಾನದವರು ಕೇಳಿಕೊಂಡಾಗ ಸಾರ್ವಜನಿಕ ಸ್ಥಳಕ್ಕೆ ಹೋಗಿ ಈ ಕೆಲಸ ಹೇಗೆ ಮಾಡ್ಳಪಾ ಅಂತಾ ಹೆದರಿಕೆ ಶುರುವಾಗಿತ್ತು. ನಮ್ಮ ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿಗಳಾದ ಡಾ.ಬಾಲಕೃಷ್ಣ ಹೆಗಡೆಯವರು ನಾಗವೇಣಿ ನೀವು ಹೋಗಿ. ನಾನಿದ್ದೇನೆ. ಏನೂ ಹೆದರಬೇಡಿ. ಒಳ್ಳೆಯ ಅನುಭವ ಆಗುತ್ತೆ ಅಂತಾ ಧೈರ್ಯ ತುಂಬಿದರು. ಫೀಲ್ಡಿಗೆ ಇಳಿದೇ ಬಿಟ್ಟೆ. ಮನೆ ಮನೆ ಸರ್ವೆ ಮಾಡಿದೆವು. ತರಾವರಿ ಅನುಭವ ಆಯಿತು. ಜೀವನದಲ್ಲಿ ಏನನ್ನೂ ಸಾಧಿಸಬಲ್ಲೆ ಎಂಬ ಧೈರ್ಯ ಬಂತು. ಅಲೆಮಾರಿ ಜನಾಂಗದ ಮಕ್ಕಳಿಗೆ ಪಾಠ ಮಾಡುವಾಗ ಅವರ ಜತೆ ಚಿಕ್ಕ ಮಗುವಾಗಿದ್ದೆ. ಅವರ ಜತೆ ಹಾಡು, ಡಾನ್ಸು, ಕಿಣಿತ ಮಾಡ್ದೆ. ಆ ಮಕ್ಕಳಿಂದ ಕೆಲ ಹೊಸ ವಿಚಾರ ತಿಳಿದುಕೊಂಡೆ. ಇಂಥಹ ವಿರಳ ಅವಕಾಶ ಕಲ್ಪಿಸಿಕೊಟ್ಟ ಡಾ.ಹೆಗಡೆ ಸರ್ ಅವರಿಗೆ, ಪ್ರತಿಷ್ಠಾನದವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.
—ನಾಗವೇಣಿ ಎನ್. ಸ್ವಯಂಸೇವಕಿ.

ಪಾಲಕರು ನನ್ನನ್ನು ಕಾಲೇಜಿಗೆ ಹೊರತುಪಡಿಸಿ ಮನೆಯಿಂದ ಹೊರಗೆ ಕಳಿಸಿದ ದಾಖಲೆಯೇ ಇರಲಿಲ್ಲಿ. ಆದರೆ ಡಾ.ಹೆಗಡೆ ಸರ್ ಅವರ ಮತ್ತು ನಿವೇದಿತಾ ಪ್ರತಿಷ್ಠಾನದವರ ಮಾತಿಗೆ ಓ ಗುಟ್ಟು ಸೇವಾ ಕಾರ್ಯದಲ್ಲಿ ತೊಡಗಿಕೊಂಡೆ. ಆರಂಭದಲ್ಲಿ ಮನೆ ಮನೆಗೆ ಹೋಗುವುದು, ಅವರನ್ನು ಭೇಟಿ ಮಾಡಿ ಬಂದ ಉದ್ಧೇಶ ತಿಳಿಸುವುದು ಕಷ್ಟವಾಗಿ ಪರಿಣಮಿಸಿತ್ತು. ಕ್ರಮದ ಣ ಹೊಂದಿಕೊಂಡೆ. ಒಂದೊಂದು ಮನೆಗೆ ಹೋದಾಗಲೂ ನಾವು ಅವರನ್ನು ಮಾತನಾಡಿಸುವ ರೀತಿ, ಅದಕ್ಕವರು ಸ್ಪಂದಿಸುವ ರೀತಿ ವಿಭಿನ್ನವಾಗಿತ್ತು. ಎಲ್ಲಿಂದ ಬಂದವರು? ಯಾಕೆ ಬಂದಿದ್ದೀರಿ ಅಂತಾ ಕೇಳ್ತಾ ಇದ್ರು.ಕೆಲವರು ಉತ್ತಮ ಆತಿಥ್ಯವನ್ನೂ ನೀಡುತ್ತಿದ್ದರು. ಕೆಲ ಮನೆಗಳಲ್ಲಿ ಯಾರೂ ಇರ್ತಿರಲಿಲ್ಲ. ಕೇವಲ ನಾಯಿ ಮಾತ್ರ ಉರುತ್ತಿತ್ತು. ಅದರಿಂದ ಕಚ್ಚಿಸಿಕೊಂಡಿದ್ದೂ ಇದೆ. ಏನೂ ಅಪಾಯ ಅಗಿಲ್ಲ. ಉತ್ತಮ ಜೀವನ ಪಾಠ ಕಲಿತೆ. ಇಂಥಹ ಸುಯೋಗ ಕಲ್ಲಿಸಿಕೊಟ್ಟ ನಮ್ಮ ಡಾ.ಹೆಗಡೆ ಸರ್ ಅವರಿಗೆ ಮತ್ತು ನಿವೇದನಾ ಅವರಿಗೆ ಆಭಾರಿ ಆಗಿದ್ದೇನೆ.
— ಲತಾ ಪಿ. ಸ್ವಯಂಸೇವಕಿ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka Nataka Academy 2026-27 ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ‌ ಪ್ರಶಸ್ತಿ‌ ಘೋಷಣೆ

Karnataka Nataka Academy ಕರ್ನಾಟಕ ನಾಟಕ ಅಕಾಡೆಮಿಯ 2026-27ನೇ ಸಾಲಿನ ಜೀವಮಾನ...

Paripurna Educational Charitable Trust ನಿತ್ಯ ದೇಹಕ್ಕೆ ಅಗತ್ಯವಿರುವಷ್ಟು ನೀರು ಸೇವಿಸಿ. ಸದೃಢ ಆರೋಗ್ಯ ಸಾಧಿಸಿ- ಸತೀಶ್ ಚಂದ್ರ

ಮಕ್ಕಳು ಪ್ರತಿ ದಿನ ದೇಹಕ್ಕೆ ಅಗತ್ಯ ಇರುವಷ್ಟು ನೀರು ಕುಡಿಯಬೇಕು. ಅಗತ್ಯವಿರುವಷ್ಟು...