ಯುವಜನರಿಗೆ ಗುಣಮಟ್ಟದ ಶಿಕ್ಣಣ ಮತ್ತು ಕೌಶಲಗಳನ್ನು ಕಲಿಸಿದರೆ ಮತ್ತು ಸದೃಢ ಹಾಗೂ ಸ್ವಾವಲಂಬಿ ಭಾರತವನ್ನು ಕಟ್ಟಲು ಸಾಧ್ಯವಾಗುತ್ತದೆ. ಇದಕ್ಕಾಗಿ ಬಾಕಿ ಉಳಿದಿರುವ 120 ಸರಕಾರಿ ಐಟಿಐಗಳನ್ನು ಉನ್ನತೀಕರಿಸಲಾಗುವುದು ಮತ್ತು ಈ ವರ್ಷ ನೂತನವಾಗಿ 30 ಐಟಿಐಗಳನ್ನು ಸ್ಥಾಪಿಸಲಾಗುವುದು ಎಂದು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಅವರು ತಿಳಿಸಿದ್ದಾರೆ.
ಪೀಣ್ಯದಲ್ಲಿರುವ ಸರಕಾರಿ ಐಟಿಐನಲ್ಲಿ ಏರ್ಪಡಿಸಿದ್ದ ಬೆಂಗಳೂರು ನಗರ ಜಿಲ್ಲಾ ಮಟ್ಟದ ಪ್ರಪ್ರಥಮ ಐಟಿಐ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಅವರು 2021-22ರ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಪ್ರದಾನ ಮಾಡಿದರು.
ಸರಕಾರವು ಐಟಿಐ ಶಿಕ್ಷಣವನ್ನು ಪಿಯುಸಿಗೆ ತತ್ಸಮಾನ ಎಂದು ಪರಿಗಣಿಸಲಾಗುವುದು. ಜತೆಗೆ, ಇಂಗ್ಲಿಷ್ ಭಾಷೆಯ ಕಲಿಕೆಯನ್ನು ಇದರ ಭಾಗವಾಗಿ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.
ಟಾಟಾ ಸಮೂಹದ ನೆರವಿನಲ್ಲಿ ಈಗಾಗಲೇ 150 ಸರಕಾರಿ ಐಟಿಐಗಳನ್ನು ಅಭಿವೃದ್ಧಿ ಪಡಿಸಿ, ಹೊಸ ಕೋರ್ಸುಗಳನ್ನು ಆರಂಭಿಸಲಾಗಿದೆ. ಇದಕ್ಕಾಗಿ 4,500 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಅವರು ನುಡಿದರು.
ಜಪಾನ್, ಚೀನಾ ತರಹದ ದೇಶಗಳು ಉತ್ಪಾದನಾ ವಲಯದಲ್ಲಿ ಸಾಕಷ್ಟು ಸಾಧಿಸಿವೆ. ಭಾರತ ಮತ್ತು ಕರ್ನಾಟಕ ಕೂಡ ಸೇವಾ ವಲಯದ ಜತೆಗೆ ಉತ್ಪಾದನಾ ರಂಗದಲ್ಲಿ ಮುಂಚೂಣಿಗೆ ಬರಬೇಕು. ಇದರಲ್ಲಿ ಐಟಿಐ ಪದವೀಧರರ ಪಾತ್ರವು ನಿರ್ಣಾಯಕವಾಗಿದೆ ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಆಯುಕ್ತೆ ಕೆ.ಜ್ಯೋತಿ, ಐಎಸ್ಡಿಎಸ್ ಪ್ರಾಂತೀಯ ನಿರ್ದೇಶಕ ಬಿ ಎನ್ ಶ್ರೀಧರ್ ಉಪಸ್ಥಿತರಿದ್ದರು.