ಆಂಧ್ರ ಪ್ರದೇಶ ಕ್ರೀಡಾ ಪ್ರಾಧಿಕಾರದ ಎಂಡಿ ಎನ್. ಪ್ರಭಾಕರ ರೆಡ್ಡಿ ಅವರು ಆಂಧ್ರಪ್ರದೇಶದ ಎನ್ಟಿಆರ್ ಜಿಲ್ಲೆಯ ವಿಜಯವಾಡದಲ್ಲಿರುವ ಪಟಮಟಾ ಕೊನೇರು ಬಸವಯ್ಯ ಚೌಧರಿ ಜಿಲ್ಲಾ ಪರಿಷತ್ ಪ್ರೌಢಶಾಲೆಗೆ ತಮ್ಮ ಇಬ್ಬರು ಮಕ್ಕಳನ್ನು ಸೇರಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಕಾರ್ಪೊರೇಟ್ ಸ್ಟೈಲಿನ ಶಾಲೆಗಳಿಗೆ ಕಳುಹಿಸಲು ಆದ್ಯತೆ ನೀಡುತ್ತಾರೆ. ಆದರೆ ಇವರು ಇದಕ್ಕೆ ತದ್ವಿರುದ್ಧವಾಗಿ ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ.
ಅನೇಕರು ಫೀಸು ಕಟ್ಟಲು ಹಣಕಾಸು ಶಕ್ತಿ ಇಲ್ಲದಿದ್ದರೂ ಸಾಲ ಮಾಡಿ, ಪ್ರೈವೇಟ್ ಶಾಲೆಗಳಲ್ಲಿ ಮಕ್ಕಳನ್ನು ಓದಿಸುತ್ತಾರೆ. ಆದರೆ ವಿಜಯವಾಡದ ಐಎಎಸ್ ಅಧಿಕಾರಿಯೊಬ್ಬರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಈ ಹಿಂದೆ ನೆಲ್ಲೂರು ಜಿಲ್ಲೆಯ ಜಂಟಿ ಕಲೆಕ್ಟರ್ ಆಗಿದ್ದ ಅವಧಿಯಲ್ಲಿ ಕೂಡ ಪ್ರಭಾಕರ ರೆಡ್ಡಿ, ತಮ್ಮ ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿಯೇ ಓದಿಸಿದ್ದರು. ಆಗ ಪ್ರಭಾಕರ ರೆಡ್ಡಿ ಅವರ ಪತ್ನಿ ಲಕ್ಷ್ಮಿ ತಮ್ಮ ಇಬ್ಬರು ಮಕ್ಕಳೊಂದಿಗೆ ಶಾಲೆಗೆ ಬಂದು ಅಡ್ಮಿಷನ್ ತೆಗೆದುಕೊಂಡಿದ್ದರು. ಆ ಸಂದರ್ಭದಲ್ಲಿ ಮಾತನಾಡಿದ್ದ ಅವರು, ಶಾಲೆಯಲ್ಲಿ ಸೌಲಭ್ಯ, ತರಗತಿ ಕೊಠಡಿ, ಆಟದ ಮೈದಾನ ಎಲ್ಲವೂ ಉತ್ತಮವಾಗಿವೆ. ಈ ಶಾಲೆಯಲ್ಲಿ ಮಗನಿಗೆ ಆರನೇ ತರಗತಿಗೆ ಮತ್ತು ಮಗಳಿಗೆ 8ನೇ ತರಗತಿಗೆ ಪ್ರವೇಶ ತೆಗೆದುಕೊಂಡಿದ್ದೇವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.