ಮೈಸೂರಿನಲ್ಲಿ ನಡೆದ ಲೋಕ್ ಅದಾಲತ್ನಲ್ಲಿ 18 ಜನ ದಂಪತಿಗಳು ಒಂದಾಗಿದ್ದಾರೆ. ಬೇರ್ಪಟ್ಟಿದ್ದ ತಂದೆ,ಮಗಳು ಒಂದಾಗಿದ್ದಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮತ್ತು ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಂ.ಎಲ್ ರಘುನಾಥ್ ಅವರು ತಿಳಿಸಿದ್ದಾರೆ.
ಮೈಸೂರಿನ ಜಯನಗರದ ಮಳಲವಾಡಿಯಲ್ಲಿರುವ ನ್ಯಾಯಾಲಯದ ಸಂಕೀರ್ಣದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ನಗರ ಹಾಗೂ ತಾಲ್ಲೂಕುಗಳಲ್ಲಿ ಒಟ್ಟು 1,50,633 ಪ್ರಕರಣಗಳು ವಿಚಾರಣೆ ನಡೆಸಲಾಗಿದೆ. ಈ ಪೈಕಿ 59059 ಸಿವಿಲ್ ಪ್ರಕರಣಗಳು, 91,574 ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆದಿದೆ. ಸದರಿ ಪ್ರಕರಣಗಳಲ್ಲಿ 70,281 ಪ್ರಕರಣಗಳು ಇತ್ಯರ್ಥವಾಗುವ ಸಂಭವವಿದೆ. ಈಗಾಗಲೇ 52,695 ಪ್ರಕರಣಗಳನ್ನು ರಾಜಿ ಆಗುವ ಸಾಧ್ಯವಿರುವ ಪ್ರಕರಣಗಳೆಂದು ಪರಿಗಣನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಈ ಬಾರಿ ಮೈಸೂರು ನ್ಯಾಯಾಲಯದಲ್ಲಿ 98 ಕೌಟುಂಬಿಕ ಕಲಹದ ಪ್ರಕರಣಗಳು ಇತ್ಯರ್ಥವಾಗಿದೆ. 18 ದಂಪತಿಗಳು ಕಲಹವನ್ನು ಮರೆತು ಲೋಕ್ ಅದಾಲತ್ ನಲ್ಲಿ ರಾಜಿಯಾಗಿ, ಮತ್ತೆ ಒಂದಾಗಿದ್ದಾರೆ. ಈ ಬಾರಿ ವಿಶೇಷವಾಗಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಇತ್ಯರ್ಥವಾಗಿದ್ದು, 45 ಲಕ್ಷ ದಂಡ ವಸೂಲಿ ಮಾಡಲಾಗಿದೆ.
ತಂದೆ ಮಗಳ ನಡುವೆ ಇದ್ದ ವಿಶೇಷ ಪ್ರಕರಣವೂ ಲೋಕ್ ಅದಾಲತ್ ಮೂಲಕ ಇತ್ಯರ್ಥವಾಗಿದೆ. ವೀಡಿಯೋ ಕಾನ್ಫರೆನ್ಸ್ ಮೂಲಕ ದೆಹಲಿಯಲ್ಲಿದ್ದ ತಂದೆಯನ್ನು ಸಂಪರ್ಕಿಸಿ ರಾಜಿ ಮಾಡಲಾಗಿದೆ. ತಾಯಿ ಸತ್ತ ನಂತರ ತಂದೆಯು ಮಗಳ ಜವಾಬ್ದಾರಿ ಹೊರದೆ ಅಜ್ಜಿ ಮನೆಯಲ್ಲಿ ಬಿಟ್ಟು ಹೋಗಿದ್ದರು. ಆದ್ದರಿಂದ, ತಂದೆಯಿಂದ ಜೀವನಾಂಶ ಕೋರಿ ಮಗಳು ಕೋರ್ಟ್ ಮೆಟ್ಟಿಲೇರಿದ್ದಳು. ಕೊನೆಗೆ ಲೋಕ್ ಅದಾಲತ್ ನಲ್ಲಿ ಇದು ಇತ್ಯರ್ಥವಾಗಿದೆ ಎಂದು ಹೇಳಿದ್ದಾರೆ.