ಬಿಜೆಪಿ ನೇತೃತ್ವದ ಆಡಳಿತವು ಭ್ರಷ್ಟಾಚಾರ ನಿರ್ಮೂಲನೆ ಮಾಡಿದೆ. ಕಳೆದ 8 ವರ್ಷಗಳಲ್ಲಿ ದೇಶವು ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಕಂಡಿದೆ ಎಂದು ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ನಿನ್ನೆ ಮಂಗಳವಾರ ಶಿಮ್ಲಾದಲ್ಲಿ ನಡೆದ ಜಾಥಕ್ಕೂ ಮುಂಚೆ ಕೇಂದ್ರದ ಹಲವಾರು ಯೋಜನೆಗಳ ಫಲಾನುಭವಿಗಳ ಜೊತೆ ಮೋದಿ ಅವರು ಸಂವಾದ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮೋದಿಜಿ ಅವರು,2014ರ ಮುಂಚೆ ಭ್ರಷ್ಟಾಚಾರವನ್ನು ಸರ್ಕಾರದ ಅತ್ಯಗತ್ಯ ಭಾಗವಾಗಿ ಪರಿಗಣಿಸಲಾಗಿತ್ತು ಎಂದು ಆರೋಪಿಸಿದ್ದಾರೆ.
ಕಿಸಾನ್ ಸಮ್ಮಾನ್ ನಿಧಿಯ 11ನೇ ಕಂತಾಗಿ 80 ಕೋಟಿ ರೈತರಿಗೆ ₹21,000 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ.
2014ಕ್ಕೂ ಮುಂಚೆ ಅನೇಕ ಹಗರಣಗಳಿಂದ ಸರ್ಕಾರ ಸುದ್ದಿಯಾಗುತ್ತಿತ್ತು. ಆದರೆ, ಈಗ ಭ್ರಷ್ಟಾಚಾರ ಸಹಿಸದಿರುವುದು ಹಾಗೂ ಅಭಿವೃದ್ಧಿ ಯೋಜನೆಗಳ ಚರ್ಚೆ ನಡೆಯುತ್ತಿದೆ. ದೇಶದಲ್ಲಿ ಬಡತನವೂ ತಗ್ಗಿದೆ. ಇದನ್ನು ಅಂತರರಾಷ್ಟ್ರೀಯ ಏಜೆನ್ಸಿಗಳು ಸಹ ಒಪ್ಪಿಕೊಳ್ಳುತ್ತಿವೆ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರ ಸಹಿಸದೇ, ವಿವಿಧ ಯೋಜನೆಗಳ 9 ಕೋಟಿ ನಕಲಿ ಫಲಾನುಭವಿಗಳನ್ನು ಪಟ್ಟಿಯಿಂದ ಕೈಬಿಟ್ಟಿದ್ದೇವೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ, ವಿದ್ಯಾರ್ಥಿ ವೇತನ ಅಥವಾ ಯಾವುದೇ ಯೋಜನೆಯಾಗಿರಲಿ, ಅರ್ಹರಿಗೆ ನೇರ ವರ್ಗಾವಣೆಯ ಮೂಲಕ ಸರ್ಕಾರದ ಪ್ರಯೋಜನವನ್ನು ತಲುಪಿಸಿ, ಭ್ರಷ್ಟಾಚಾರದ ವ್ಯಾಪ್ತಿಯನ್ನು ಹತ್ತಿಕ್ಕಿದ್ದೇವೆ. 22 ಲಕ್ಷ ಕೋಟಿ ರೂಪಾಯಿಗಳನ್ನು ನೇರ ನಗದು ವರ್ಗಾವಣೆ ಮೂಲಕ ವಿವಿಧ ಯೋಜನೆಗಳ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದ್ದೇವೆ ಎಂದು ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
ಕೊರೋನಾ ಸಾಂಕ್ರಾಮಿಕ ಎದುರಿಸಲು ಕೈಗೊಂಡ ಸರ್ಕಾರ ಕ್ರಮಗಳನ್ನು ಪ್ರಶಂಸಿದ್ದಾರೆ. ದೇಶದಲ್ಲಿ ಇದುವರೆಗೆ ಸುಮಾರು 200 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಅಲ್ಲದೆ, ಹಲವು ದೇಶಗಳಿಗೆ ಕೊರೋನಾ ಲಸಿಕೆಗಳನ್ನು ಪೂರೈಸುವ ಮೂಲಕ ಭಾರತವು ಸ್ನೇಹದ ಹಸ್ತ ಚಾಚಿದೆ ಎಂದು ಮೋದಿ ಅವರು ಹೇಳಿದ್ದಾರೆ.
