ನಮ್ಮ ಭಾರತೀಯ ಭೂಮಿ ಎಲ್ಲ ಧರ್ಮಗಳ ನೆಲೆಬೀಡು. ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ ಎಂದು ಅತ್ಯಂತ ವಿಶಾಲ ಮನೋಭಾವ ರೂಪಿಸಿದ ತಾಣ. ಕೇಶವ ಅಂದರೆ ಹರಿ ಎಂದೇ ಆಗಬೇಕಿಲ್ಲ .ಅವರವರ ಪಾಲಿಗೆ ಅವರು ನಂಬಿದ ಉನ್ನತ ದೈವ ಅಷ್ಟೆ. ಹೀಗೆ ಮುಂಚಿನಿಂದಲೂ ಈ ರೀತಿಯ ಭಾವೈಕ್ಯತೆ ಬೀಜ ನಮ್ಮ ನೆಲದಲ್ಲಿದೆ.
ಈಗ ಅಂತಹ ಸ್ವಾರಸ್ಯ ತಾಣವೊಂದರ ಪರಿಚಯ ನಿಮಗೆ ಮಾಡಿಕೊಡಲಿದ್ದೇವೆ.
ತಾವರಗೇರಾ ಪಟ್ಟಣದ ಆರಾಧ್ಯ ದೈವ ಶ್ಯಾಮೀದ್ ಅಲಿ ದರ್ಗಾ ಹಿಂದೂ-ಮುಸ್ಲಿಮರ ಸಾಮರಸ್ಯದ ತಾಣವಾಗಿದೆ.
ಪಟ್ಟಣದ ಹಿಂದೂ ಸಮುದಾಯದರು ತಮ್ಮ ಮಕ್ಕಳಿಗೆ ಮೊದಲಿನಿಂದಲೂ ಶ್ಯಾಮಣ್ಣ, ಶ್ಯಾಮಪ್ಪ, ಶ್ಯಾಮ್, ಶ್ಯಾಮ್ ಸುಂದರ, ಶ್ಯಾಮೂರ್ತಿ, ಸಣ್ಣ ಶ್ಯಾಮಣ್ಣ, ದೊಡ್ಡ ಶ್ಯಾಮಣ್ಣ….
ಹೆಣ್ಣು ಮಕ್ಕಳಾದರೆ ಶ್ಯಾಮವ್ವ, ಶ್ಯಾಮಲಾ, ಶ್ಯಾಮಲಾಬಾಯಿ, ಸಣ್ಣ ಶ್ಯಾಮವ್ವ, ದೊಡ್ಡ ಶ್ಯಾಮವ್ವ ಎಂದು ಹೆಸರಿಡುತ್ತಾರೆ.
ಮುಸ್ಲಿಂ ಸಮುದಾಯದವರು ಶ್ಯಾಮೀದ್ ಸಾಬ್, ಶ್ಯಾಮೀದ್ ಅಲಿ, ಶ್ಯಾಮೀದ್, ಶ್ಯಾಮೀದ್ ಬೀ… ಎಂಬ ಹೆಸರನ್ನು ತಮ್ಮ ಮಕ್ಕಳಿಗೆ ಇಡುತ್ತಾರೆ. ಈ ಮೂಲಕ ಎರಡೂ ಧರ್ಮೀಯರು ಶ್ಯಾಮೀದ್ ಅಲಿಯನ್ನು ಆರಾಧಿಸಿ ಪೂಜಿ ಸುತ್ತಾರೆ. ಬೇಡಿದ ವರ ಕರುಣಿಸುತ್ತಾನೆ ಎಂಬ ನಂಬಿಕೆ ದರ್ಗಾ ಭಕ್ತರದು.
ಐತಿಹಾಸಿಕ ದರ್ಗಾದಲ್ಲಿ ಹಿಂದೂ- ಮುಸ್ಲಿಮರ ಏಕತೆ ಸಾರುವ ಸಂಪ್ರದಾಯವನ್ನು ಶತಮಾನಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ.
600ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಶ್ಯಾಮೀದ್ ಅಲಿ ದರ್ಗಾಕ್ಕೆ ಹಿಂದೂ-ಮುಸ್ಲಿಂ ಸೇರಿದಂತೆ ಎಲ್ಲಾ ಧರ್ಮದವರು ಭೇಟಿ ನೀಡುತ್ತಾರೆ. ಎಲ್ಲಾ ಸಮುದಾಯವರ ಪಾಲಿಗೆ ಇದೊಂದು ಸಾಮರಸ್ಯದ ನೆಲೆಯಾಗಿದೆ.
ಉರುಸ್ ಆಚರಣೆಗೆ ಸುತ್ತಲಿನ ಜಿಲ್ಲೆ, ನೆರೆಯ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ಪ್ರತಿ ಗುರುವಾರ ಹಾಗೂ ಅಮವಾಸ್ಯೆಯಂದು ಭಕ್ತರ ದಟ್ಟಣೆ ಹೆಚ್ಚಿರುತ್ತದೆ.
ಮೂರು ದಿನ ನಡೆಯುವ ಉರುಸ್ಗೆ ಸಾವಿರಾರು ಭಕ್ತರು ಬಂದು ತಮ್ಮ ಹರಕೆ ತೀರಿಸುತ್ತಾರೆ. ಶ್ಯಾಮೀದ್ ಅಲಿ ಪವಾಡ ಮತ್ತು ಭಕ್ತರ ಕಷ್ಟಗಳನ್ನು ಪರಿಹರಿಸುವ ದೈವ ಎಂಬ ನಂಬಿಕೆಯಿಂದ ಭಕ್ತರು ನಮಿಸುತ್ತಾರೆ ಎಂದು ಭಕ್ತಾದಿಗಳು ತಿಳಿಸಿದ್ದಾರೆ.