ಕೆಲ ವರ್ಷಗಳಿಂದ ಸರ್ಕಾರಿ ನಿವಾಸಗಳಲ್ಲಿ ವಾಸವಾಗಿದ್ದ 90 ವರ್ಷ ವಯಸ್ಸಿನ ಪದ್ಮಶ್ರೀ ಪುರಸ್ಕೃತ ಒಡಿಸ್ಸಿ ನೃತ್ಯಗಾರ ಗುರು ಮಾಯಾಧರ್ ರಾವತ್ ಅವರನ್ನು ಕೇಂದ್ರ ಸರ್ಕಾರ ಮನೆಯಿಂದ ಹೊರಹಾಕಿದೆ.
ಕಲಾವಿದರಿಗೆ ಕೆಲ ವರ್ಷಗಳ ಹಿಂದೆ ಸರ್ಕಾರಿ ವಸತಿಗಳನ್ನು ಮಂಜೂರು ಮಾಡಲಾಗಿತ್ತು. ಆದರೆ ಮಂಜೂರಾತಿಯನ್ನು 2014ರಲ್ಲಿ ರದ್ದುಗೊಳಿಸಲಾಯಿತು. ಪರಿಣಾಮವಾಗಿ ಎಲ್ಲರೂ ವಸತಿಗಳನ್ನು ಖಾಲಿ ಮಾಡಬೇಕು ಎಂದು ನೋಟಿಸ್ ನೀಡಲಾಯಿತು. 90 ವರ್ಷ ವಯಸ್ಸಿನ ಒಡಿಸ್ಸಿ ನೃತ್ಯಗಾರ ರಾವುತ್ ಅವರನ್ನು ವಸತಿಯಿಂದ ಹೊರಹಾಕಿದ ನಂತರ ಉಳಿದ ಕಲಾವಿದರಿಗೂ ನೋಟಿಸ್ ನೀಡಲಾಗಿದೆ. ಮೇ 2ರೊಳಗೆ ನಿವಾಸ ಖಾಲಿ ಮಾಡುವಂತೆ ಅವರಿಗೆ ಗಡುವು ನೀಡಲಾಗಿದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಹಲವು ಬಾರಿ ನೋಟಿಸ್ ಕೊಟ್ಟರೂ 28 ಕಲಾವಿದರ ಪೈಕಿ ಸುಮಾರು ಎಂಟು ಮಂದಿ ಇನ್ನೂ ತಮ್ಮ ಸರ್ಕಾರಿ ವಸತಿಗಳನ್ನು ಖಾಲಿ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಈ ಎಂಟು ಕಲಾವಿದರು ತಮ್ಮ ವಸತಿಗಳನ್ನು ಖಾಲಿ ಮಾಡುವ ಪ್ರಕ್ರಿಯೆಯಲ್ಲಿದ್ದಾರೆ.
ಮೇ 2 ರೊಳಗೆ ನಿವಾಸ ಖಾಲಿ ಮಾಡುವುದಾಗಿ ಲಿಖಿತವಾಗಿ ಭರವಸೆ ನೀಡಿದ್ದು, ಅಲ್ಲಿಯವರೆಗೆ ಕಾಲಾವಕಾಶ ನೀಡಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ.
ಇವರಂತೆಯೇ ಸರ್ಕಾರಿ ವಸತಿಗಳಲ್ಲಿ ವಾಸವಾಗಿದ್ದ ಎಂಟು ಮಂದಿ ಪ್ರಖ್ಯಾತ ಕಲಾವಿದರಿಗೆ ಮನೆ ಖಾಲಿ ಮಾಡುವಂತೆ ಕೇಂದ್ರ ಸರ್ಕಾರ ನೋಟಿಸ್ ನೀಡಲಾಗಿದೆ.
ಫೆಬ್ರವರಿಯೊಳಗೆ ಆದೇಶ ಪಾಲನೆಯಾಗದಿದ್ದಲ್ಲಿ ಕಲಾವಿದರ ವಿಚಾರವಾಗಿ ಮುಕ್ತ ಕ್ರಮಕೈಗೊಳ್ಳಲು ಕೇಂದ್ರಕ್ಕೆ ಅಧಿಕಾರವಿದೆ ಎಂದು ದೆಹಲಿ ಹೈಕೋರ್ಟ್ ಸ್ಪಷ್ಟಪಡಿಸಿತ್ತು.
ತಿಂಗಳಿಗೆ 20,000 ರೂ.ಗಿಂತ ಕಡಿಮೆ ಗಳಿಸುವ 40 ಕಲಾವಿದರಿಗೆ ಸಂಸ್ಕೃತಿ ಸಚಿವಾಲಯದ ಶಿಫಾರಸಿನ ಮೇರೆಗೆ ಜನರಲ್ ಪೂಲ್ ವಸತಿ ಸೌಕರ್ಯ ವಿಶೇಷ ಕೋಟಾದಡಿ ವಸತಿ ಮಂಜೂರು ಮಾಡಲಾಗಿತ್ತು. ವಸತಿ ಖಾಲಿ ಮಾಡಲು ಕೇಂದ್ರವು 2020 ರ ಡಿಸೆಂಬರ್ 31ಕ್ಕೆ ಗಡುವನ್ನು ನೀಡಿತ್ತು. ಆದರೆ ಅರ್ಜಿಗಳನ್ನು ಸಲ್ಲಿಸಿದ ನಂತರ ಹೈಕೋರ್ಟ್, ಕೇಂದ್ರದ ನೋಟಿಸ್ಗೆ ತಡೆ ನೀಡಿತ್ತು.