ದಿಂಗಾಲೇಶ್ವರ ಸ್ವಾಮಿಗಳು ಸರ್ಕಾರದ ಕಮಿಷನ್ ಬಗ್ಗೆ ವಿವರಗಳನ್ನು ನೀಡಿದರೆ ಸಂಪೂರ್ಣವಾಗಿ ತನಿಖೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಠಗಳಿಗೆ ಅನುದಾನ ಬಿಡುಗಡೆ ಮಾಡುವುದಕ್ಕೆ ಕಮಿಷನ್ ನೀಡಿರುವ ಕುರಿತು ದಿಂಗಾಲೇಶ್ವರ ಸ್ವಾಮಿಗಳು ಮಾಡಿರುವ ಗಂಭೀರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.
ದಿಂಗಾಲೇಶ್ವರರು ಪರಮಪೂಜ್ಯರು, ಮಹಾತ್ಮರು, ತಪಸ್ವಿಗಳು. ಮಠಾಧೀಶರು ಹೇಳಿಕೆ ನೀಡಿದರೆ ಸಾಲುವುದಿಲ್ಲ. ಅವರು ಯಾರು, ಯಾರಿಗೆ, ಯಾವುದಕ್ಕಾಗಿ ಎಷ್ಟು ಪರ್ಸೆಂಟ್ ಹಣ ಕೊಟ್ಟಿದ್ದಾರೆ ಎಂದು ವಿವರಗಳನ್ನು ನೀಡಿದರೆ ಅದರ ಆಳಕ್ಕೆ ಹೋಗಿ ಸಂಪೂರ್ಣವಾಗಿ ತನಿಖೆ ಮಾಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಬೀಳಗಿ ತಾಲೂಕಿನ ಬಾಡಗಂಡಿಯಲ್ಲಿ ಉತ್ತರ ಕರ್ನಾಟಕ ಸ್ವಾಭಿಮಾನಿ ವೇದಿಕೆ ಆಯೋಜಿಸಿದ್ದ ಕೃಷ್ಣಾ-ಮಹಾದಾಯಿ-ನವಲಿ ಸಂಕಲ್ಪಯಾತ್ರೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ದಿಂಗಾಲೇಶ್ವರ ಶ್ರೀಗಳು,”ಮಠಗಳಿಗೆ ಸರ್ಕಾರ ಬಿಡುಗಡೆ ಮಾಡುವ ಅನುದಾನ ಪಡೆಯಲು ಶೇ. 30 ಕಮಿಷನ್ ನೀಡಬೇಕಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಇಲ್ಲಿಗೆ ಬಂದು ನಿಂತಿದೆ. ಅನುದಾನ ಪರ್ಸೆಂಟೇಜ್ ಕಡಿತ ಆದ ನಂತರವಷ್ಟೇ ಕಟ್ಟಡದ ಕೆಲಸ ಆರಂಭವಾಗುತ್ತದೆ ಎಂದು ಶ್ರೀಗಳು, ಸರಕಾರದ ವಿರುದ್ದ ಆರೋಪಿಸಿದ್ದರು.
ರಾಜ್ಯ ಸರ್ಕಾರದಿಂದ ಮೊದಲು ರೈತರ ಜಮೀನಿಗೆ ನೀರು ಕೊಡುವ ಕೆಲಸವಾಗಬೇಕಿದೆ. ಅದಕ್ಕಾಗಿಯೇ ಉತ್ತರ ಭಾರತದಲ್ಲಿ ಒಂದು ವರ್ಷ ಯಾವುದಕ್ಕೂ ಅಂಜದೇ ರೈತರು ನಡೆಸಿದ ಹೋರಾಟದ ರೀತಿಯಲ್ಲೇ ಪ್ರತಿರೋಧ ತೋರಿದರೆ ಮಾತ್ರ ರೈತರಿಗೆ ಅನ್ನ ಸಿಕ್ಕೀತು,ಎಂದು ದಿಂಗಾಲೇಶ್ವರ ಸ್ವಾಮಿಗಳು ಹೇಳಿದ್ದರು.
ಸರ್ಕಾರದಲ್ಲಿ ಕಮಿಷನ್ ನೀಡದಿದ್ದರೆ ಯಾವುದೇ ಕಾರಣಕ್ಕೂ ಹಣ ಬಿಡುಗಡೆ ಆಗುವುದಿಲ್ಲ. ಇಂತಿಷ್ಟು ಹಣವನ್ನು ನೀಡದಿದ್ದರೆ ಅನುದಾನ ಬಿಡುಗಡೆ ಆಗುವುದಿಲ್ಲ ಎಂದು ಅಧಿಕಾರಿಗಳೇ ನೇರವಾಗಿ ಹೇಳುತ್ತಾರೆ. ನಾಡಿನಲ್ಲಿ ಬುದ್ದಿಗೇಡಿ ಸರ್ಕಾರವಿದೆ ಎಂದಿದ್ದರು.