ದಾಖಲೆಯ ಪ್ರಮಾಣದಲ್ಲಿ ಕೃಷಿ ಉತ್ಪನ್ನಗಳ ಖರೀದಿ, ದೇಶದ ಆಂತರಿಕ ಭದ್ರತೆಗೆ ಕ್ರಮ, ಕೋವಿಡ್ ನ ಪರಿಣಾಮಕಾರಿ ನಿರ್ವಹಣೆ ಸೇರಿ ಹಲವು ಸಾಧನೆಗಳನ್ನು ಪಟ್ಟಿ ಮಾಡಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್, ಅಭಿವೃದ್ಧಿ ಗುರಿ ಸಾಧನೆ ಹಾದಿಯಲ್ಲಿ ಎಲ್ಲವೂ ಸಮಷ್ಟಿ ಸಾಧನೆಗಳು ಎಂದು ಶ್ಲಾಘಿಸಿದ್ದಾರೆ.
ಸೋಮವಾರ ಬಜೆಟ್ ಅಧಿವೇಶನಕ್ಕೆ ಚಾಲನೆ ನೀಡಿ, ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾಡಿದ 50 ನಿಮಿಷದ ಭಾಷಣದಲ್ಲಿ ಅವರು , ಉತ್ತರಪ್ರದೇಶ ಸೇರಿದಂತೆ ಶೀಘ್ರದಲ್ಲಿಯೇ ಚುನಾವಣೆ ನಡೆಸಲಿರುವ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿಶೇಷವಾಗಿ ಉಲ್ಲೇಖಿಸಿದರು.
ಸಾಧನೆಗಳ ಉಲ್ಲೇಖದ ಹಿಂದೆ ಎಲ್ಲಾ ಸಾಧನೆಗಳ ಶ್ರೇಯ ಒಂದು ಸಂಸ್ಥೆ, ವ್ಯವಸ್ಥೆಯದಲ್ಲ. ಇದರ ಬದಲಿಗೆ ಅವು ಸಮಷ್ಟಿ ಸಾಧನೆ. ಇದರಲ್ಲಿ ದೇಶದ ಎಲ್ಲ ನಾಗರಿಕರು ಭಾಗಿಯಾಗಿದ್ದಾರೆ ಎಂದರು. ಭವ್ಯ, ಆಧುನಿಕ ಮತ್ತು ಅಭಿವೃದ್ಧಿ ಭಾರತವನ್ನು 2017ರ ವೇಳೆಗೆ ನಿರ್ಮಿಸಲು ಎಲ್ಲರೂ ಶಕ್ತಿಮೀರಿ ಶ್ರಮಿಸಬೇಕು ಎಂದು ಕರೆ ನೀಡಿದ್ದಾರೆ.
ಇದರಲ್ಲಿ ನಮ್ಮೆಲ್ಲರ ಪಾಲು ಇದೆ. ಈ ಪ್ರಯಾಣದಲ್ಲಿ ನಮ್ಮಗಳಿಗೆ ಸಮಾನ ಪಾಲು ಎಂದರು. ಸಂಸದರನ್ನು ಉದ್ದೇಶಿಸಿ ನೀವುಗಳು ದೇಶದ ಕೋಟ್ಯಾಂತರ ಜನರ ಭರವಸೆಗೆ ಚುಕ್ಕಾಣಿ. ಭವಿಷ್ಯದಲ್ಲಿಯೂ ಉತ್ಸಾಹದಿಂದ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಗೋವಾ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ, ಅಫ್ಘಾನಿಸ್ತಾನದಿಂದ ಗುರು ಗ್ರಂಥ ಸಾಹಿಬ್ ಅವರ ಎರಡು ವಿಶೇಷ ವಸ್ತುಗಳನ್ನು ಮರಳಿ ತಂದಿದ್ದು, ಕೃಷಿಕರ ಸಬಲೀಕರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ರಾಷ್ಟ್ರಪತಿ ಕೋವಿಂದ್ ಅವರು ವಿಶೇಷವಾಗಿ ಉಲ್ಲೇಖಿಸಿದ್ದಾರೆ.
ರಕ್ಷಣಾ ಇಲಾಖೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳನ್ನು ಪಟ್ಟಿ ಮಾಡಿದ ಅವರು, ರಕ್ಷಣಾ ಪರಿಕರಗಳ ಆಧುನೀಕರಣಕ್ಕೆ ನೀಡಲಾದ ಶೇಕಡ 87 ರಷ್ಟು ಅನುಮೋದನೆಗಳು ಸ್ವಾವಲಂಬನೆಗೆ ಒತ್ತು ನೀಡಬೇಕು ಎಂದು ಹೇಳಿದ್ದಾರೆ.
ಕೋವಿಡ್ ಪರಿಸ್ಥಿತಿ ನಿರ್ವಹಣೆಯನ್ನು ಉಲ್ಲೇಖಿಸಿ ಆರೋಗ್ಯ ಕಾರ್ಯಕರ್ತರು, ವಿಜ್ಞಾನಿಗಳು, ಉದ್ಯಮಿಗಳ ಸೇವೆ ಶ್ಲಾಘನೀಯ. ಇದರ ಪರಿಣಾಮ ಒಂದೇ ವರ್ಷದಲ್ಲಿ 150 ಕೋಟಿ ಡೋಸ್ ಲಸಿಕೆ ನೀಡಲಾಯಿತು ಎಂದು ಹೇಳಿದರು