ಬೇಲೂರು, ಹಳೇಬೀಡು ಹಾಗೂ ಸೋಮನಾಥಪುರದ ಹೊಯ್ಸಳ ದೇವಸ್ಥಾನಗಳು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಲಿವೆ. 2022-23 ನೇ ಸಾಲಿನ ಕರ್ನಾಟಕದ ಮೂರು ದೇವಸ್ಥಾನಗಳು ಶಿಫಾರಸು ಪಟ್ಟಿಯಲ್ಲಿದೆ.
ಈ ದೇವಾಲಯಗಳು ಕಲೆ ಹಾಗು ವಾಸ್ತುಶಿಲ್ಪ, ಸಂಸ್ಕೃತಿಯ ಪ್ರತೀಕವಾಗಿದೆ. ಹೊಯ್ಸಳರ ಕಾಲದಲ್ಲಿ ಇವುಗಳನ್ನು ನಿರ್ಮಾಣ ಮಾಡಲಾಗಿದೆ. 2015ರಿಂದ ಈ ಮೂರು ದೇವಸ್ಥಾನಗಳು ತಾತ್ಕಾಲಿಕ ಪಟ್ಟಿಯಲ್ಲಿದ್ದವು. ಈ ದೇವಸ್ಥಾನಗಳನ್ನು ಕಾಯಂ ಪಟ್ಟಿಗೆ ಸೇರಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ.
ಯುನೆಸ್ಕೋದ ಭಾರತದ ಕಾಯಂ ಪ್ರತಿನಿಧಿ ವಿಶಾಲ್ ವಿ. ಶರ್ಮಾ ಔಪಚಾರಿಕವಾಗಿ ತಂಡಕ್ಕೆ ಭಾರತದ ಪಟ್ಟಿಯನ್ನು ನೀಡಿದ್ದಾರೆ. ಮುಂದಿನ ಹಂತವಾಗಿ ಯುನೆಸ್ಕೋದ ಸಮಿತಿ ಪಟ್ಟಿ ಪರಿಶೀಲನೆ ನಡೆಸಲಿದೆ. ಅನಂತರ ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ತಜ್ಞರ ಸಮಿತಿ ಪಟ್ಟಿಯನ್ನು ಪರಿಶೀಲನೆ ಮಾಡಿ ಭಾರತದ ಜೊತೆ ಮತ್ತೆ ಮಾತುಕತೆ ನಡೆಸಲಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ಮೌಲ್ಯಮಾಪನ ನಡೆಯಲಿದೆ. 2023ರ ಜುಲೈ ಅಥವಾ ಆಗಸ್ಟ್ ತಿಂಗಳಿನಲ್ಲಿ ದೇವಾಲಯಗಳನ್ನು ಯುನೆಸ್ಕೋ ಪಟ್ಟಿಗೆ ಸೇರಿಸುವ ಕುರಿತು ಅಂತಿಮ ಘೋಷಣೆಯಾಗಲಿದೆ.
12ನೇ ಶತಮಾನದಲ್ಲಿ ನಿರ್ಮಾಣವಾದ ಎಲ್ಲಾ ದೇವಾಲಯಗಳು ಪ್ರಸ್ತುತ ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಸಂರಕ್ಷಿತ ಸ್ಮಾರಕಗಳಾಗಿವೆ. ಭಾರತೀಯ ಪುರಾತತ್ವ ಇಲಾಖೆಯೇ ದೇವಸ್ಥಾನಗಳ ಉಸ್ತುವಾರಿ ನೋಡಿಕೊಳ್ಳುತ್ತಿದೆ