ಸರ್ಕಾರ ರೈತರು ಕೃಷಿ ಭೂಮಿ ಮಾರಾಟ ಮಾಡಲು ಹಲವು ನಿರ್ಬಂಧಗಳನ್ನು ವಿಧಿಸಿದೆ. ಇದು ರೈತರಿಗೆ ಮಾರಕವಾಗಿ ಪರಿಣಮಿಸಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಮೂರು ಗುಂಟೆ ಹಾಗೂ ಉಳಿದ ಜಿಲ್ಲೆಗಳಲ್ಲಿ ಕನಿಷ್ಠ 5 ಗುಂಟೆಗಿಂತ ಕಡಿಮೆ ಜಮೀನನ್ನು ಮಾರಾಟ ಮಾಡುವಂತಿಲ್ಲ ಎಂಬುದನ್ನು ಆದೇಶದಲ್ಲಿ ತಿಳಿಸಲಾಗಿದೆ.
ಮಕ್ಕಳ ಮದುವೆ, ವಿದ್ಯಾಭ್ಯಾಸ, ಆರೋಗ್ಯ ಸಮಸ್ಯೆ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಹಣಕಾಸು ಹೊಂದಿಸಲು ಅನೇಕ ರೈತರು ತಮ್ಮ ಜಮೀನುಗಳನ್ನು ಮಾರಾಟ ಮಾಡಿ ಹಣ ಹೊಂದಿಸುತ್ತಾರೆ. ಆದರೆ ಹೊಸ ಕಾನೂನಿನಿಂದ ಸಮಸ್ಯೆಯ ಸುಳಿಯಲ್ಲಿ ಸಿಲುಕಲಿದ್ದಾರೆ.
ಇನ್ನು 10 ಸೆಂಟ್ಸ್ ಜಮೀನು ಇದ್ದು, ಅದರಲ್ಲಿ ಅರ್ಧ ಜಮೀನನ್ನು ಮಾರಾಟ ಮಾಡುವ ಸ್ಥಿತಿ ಬಂದರೂ ಇದಕ್ಕೆ ಅವಕಾಶ ಇರುವುದಿಲ್ಲ. ಒಂದೋ ಜಮೀನು ಮಾರಾಟ ಮಾಡದೆ ಇರುವ ನಿರ್ಧಾರಕ್ಕೆ ಬರಬೇಕು.
ಇಲ್ಲವಾದರೆ ಸಂಪೂರ್ಣ ಜಮೀನನ್ನು ಮಾರಾಟ ಮಾಡಬೇಕಾದ ಸ್ಥಿತಿ ಎದುರಾಗಬಹುದು.
ರಸ್ತೆ, ಚರಂಡಿ, ಉದ್ಯಾನವನ ಸಹಿತ ಇತರ ಮೂಲಸೌಕರ್ಯ ಕಲ್ಪಿಸಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಈ ರೀತಿ ಮಾಡಲಾಗಿದೆ ಎಂಬುದು ಸರಕಾರದ ಸಮರ್ಥನೆ. ಆದರೆ ಇದು ಸಣ್ಣ ರೈತರಿಗೆ ಹೊಡೆತ ನೀಡಲಿದೆ.
ಕರ್ನಾಟಕ ಭೂಕಂದಾಯ ಅಧಿನಿಯಮ 1964ರ 108ರಡಿ ಕೃಷಿ ಉದ್ದೇಶಕ್ಕಾಗಿ ಬಳಸಲಾಗುವ ಭೂಮಿಯನ್ನು ಒಳಗೊಂಡ ಸರ್ವೆ ನಂಬರ್ ನ ಕನಿಷ್ಠ ವಿಸ್ತೀರ್ಣ ನಿಗದಿಪಡಿಸಲಾಗಿದೆ. ಇದರಿಂದ ತುಂಡು ಭೂಮಿ ಹೊಂದಿದ್ದ ರೈತರಿಗೆ ಇನ್ನು ಮುಂದೆ ತಮ್ಮ ಕೃಷಿ ಭೂಮಿ ಮಾರಾಟ ಮಾಡಲು ಅವಕಾಶ ಇಲ್ಲ. ಒಂದು ವೇಳೆ ಮಾರಾಟ ಮಾಡುವುದಿದ್ದರೆ ನಿಗದಿತ ಭೂಮಿಗಿಂತ ಕಡಿಮೆ ಇದ್ದರೆ ಅದಕ್ಕೆ 11ಇ ನಕ್ಷೆ ಕೊಡಲು ಅವಕಾಶ ಇಲ್ಲ. ಸದ್ಯ ಭೂಮಿ ಸಾಫ್ಟ್ ವೇರ್ ನಲ್ಲೇ ಇದಕ್ಕೆ ಅವಕಾಶ ನಿರಾಕರಿಸಲಾಗಿದೆ.
ಅನೇಕ ರೈತರಿಗೆ ತಮ್ಮ ಕುಟುಂಬ ವಿಸ್ತಾರವಾದಂತೆ ಒಂದೇ ಜಮೀನಿನಲ್ಲಿ ಬೇರೆ ಬೇರೆ ಮನೆ ಕಟ್ಟಿಕೊಳ್ಳುವ ಸಂದರ್ಭ ಬರುತ್ತದೆ. ಈ ಹಂತದಲ್ಲೂ ನಿಗದಿತ ಪ್ರಮಾಣಕ್ಕಿಂತ ಕಡಿಮೆ ವಿಸ್ತೀರ್ಣದ ಭೂಮಿಯಿದ್ದರೆ ಅದಕ್ಕೆ 11ಇ ನಕ್ಷೆ ಕೊಡಲು ಸಾಫ್ಟ್ ವೇರ್ ನಲ್ಲಿ ಅವಕಾಶವೇ ಇರುವುದಿಲ್ಲ. ಇದರಿಂದ ಮುಂದೆ ಮನೆ ಕಟ್ಟಿಕೊಳ್ಳಲು ಕೂಡ ಸಣ್ಣ ರೈತರು ಪರದಾಡುವ ಸ್ಥಿತಿ ಬರಲಿದೆ ಎಂದು ಮಂಗಳೂರಿನ ವಕೀಲ ಪ್ರವೀಣ್ ಅದ್ಯಪಾಡಿ ತಿಳಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.