ಕಳೆದ ಒಂದು ವರ್ಷದಿಂದ ನಡೆದ ರೈತರ ಪ್ರತಿಭಟನೆಗೆ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿಯವರು ಮೂರು ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯುವ ಘೋಷಣೆಯನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ.
ಮೋದಿಯವರ ಘೋಷಣೆಯ ನಂತರದ ಮೊದಲ ಸಂಪುಟ ಸಭೆಯಲ್ಲೇ ಕೃಷಿ ಕಾನೂನು ರದ್ಧತಿಗೆ ಅಗತ್ಯ ವಿಧೇಯಕ ಮಂಡನೆ ನಿರ್ಧಾರವು ಸ್ವಾಗತಾರ್ಹ. ಇದು ನಮ್ಮ ಸರಕಾರದ ಬದ್ಧತೆಯನ್ನು ತೋರಿಸುತ್ತದೆ. ಮಾತಿಗೆ ತಪ್ಪದಿರುವುದು ನಮ್ಮ ಸರ್ಕಾರದ ಸಂಕಲ್ಪ ಮಂತ್ರ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಕೃಷಿ ಕಾನೂನು ರದ್ದು ವಿಧೇಯಕ -2021ರ ಮಂಡನೆಗೆ ಸಂಪುಟ ಸರ್ವಸಮ್ಮತ ಒಪ್ಪಿಗೆ ನೀಡಿದೆ. ಮುಂಬರುವ ಚಳಿಗಾಲದ ಸಂಸತ್ ಅಧಿವೇಶನದಲ್ಲಿಯೇ ಈ ರದ್ದು ವಿಧೇಯಕ ಮಂಡನೆಯಾಗಲಿದೆ. ಈ ಬಗ್ಗೆ ಸಭೆ ಬಳಿಕ ಪ್ರತಿಕ್ರಿಯೆ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು, ಮುಂಬರುವ ಅಧಿವೇಶನದಲ್ಲಿ ಕೃಷಿ ಕಾನೂನುಗಳ ರದ್ಧತಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡಲಿದೆ ಎಂದರು.
ನವಂಬರ್ 29ರಿಂದ ಡಿಸೆಂಬರ್ 23 ರವರೆಗೆ ಚಳಿಗಾಲದ ಸಂಸತ್ ಅಧಿವೇಶನ ನಡೆಯಲಿದೆ. ರೈತರ ಪ್ರತಿಭಟನೆಗೆ ಮನ್ನಣೆ ನೀಡಿ ಕೃಷಿ ಕಾನೂನು ರದ್ದು ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 19ರಂದು ಪ್ರಕಟಿಸಿದ್ದರು. ನವೆಂಬರ್ 21ರಂದು ಸಂಯುಕ್ತ ಕಿಸಾನ್ ಮೋರ್ಚಾದಿಂದ ಪ್ರಧಾನಿ ಮೋದಿಯವರಿಗೆ ಪತ್ರ ಬರೆಯಲಾಗಿತ್ತು.
2020ರ ನವೆಂಬರ್ ನಿಂದ ಆರಂಭಗೊಂಡಿರುವ ಸುಮಾರು 40 ರೈತ ಸಂಘಟನೆಗಳ ಪ್ರತಿಭಟನೆಯು ದಿಲ್ಲಿಯ ಗಡಿಯಲ್ಲಿ ನಿರಂತರವಾಗಿ ಸಾಗುತ್ತಿದೆ. ಪಂಜಾಬ್, ಹರಿಯಾಣ, ರಾಜಸ್ಥಾನ ಉತ್ತರಪ್ರದೇಶದಿಂದ ಸಾವಿರಾರು ರೈತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.