ವಿದ್ಯಾರ್ಥಿಗಳು, ಯುವಸ್ಪರ್ಧಿಗಳು ತಮ್ಮಲ್ಲಿರುವ ವಿವಿಧ ಪ್ರತಿಭೆಯನ್ನು ಅನಾವರಣಗೊಳಿಸಲು ಯುವಜನೋತ್ಸವ ಉತ್ತಮ ವೇದಿಕೆಯಾಗಿದ್ದು, ಉತ್ತಮ ಸ್ಪರ್ಧೆ ನೀಡಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲೆಗೆ ಒಳ್ಳೆಯ ಹೆಸರನ್ನು ತರಬೇಕೆಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹಾರೈಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ, ಶಿವಮೊಗ್ಗ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಮಾತನಾಡಿ, ಇಂದಿನ ಪೀಳೆಯಲ್ಲಿ ದೇಶದ ಮುಂದಿನ ಭವಿಷ್ಯ ಅಡಗಿದ್ದು, ಯುವಜನತೆ ಓದಿನೊಂದಿಗೆ ಇತರೆ ಸಾಂಸ್ಕೃತಿಕ, ಸಾಹಿತ್ಯಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಇತರೆ ಸಾಂಸ್ಕೃತಿಕ, ಜಾನಪದ, ಶಾಸ್ತ್ರೀಯ ಚಟುವಟಿಕೆಗಳನ್ನು ಉತ್ತೇಜಿಸಲು ಇಂತಹ ಯುವಜನೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಇದು ಯುವಜನತೆಯ ಜೀವನದ ಸರ್ವತೋಮುಖ ಬೆಳವಣಿಗೆಗೆ ಕೂಡ ಸಹಕರಿಸುತ್ತದೆ ಎಂದರು.
ಕುವೆಂಪು ವಿವಿಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ನಾಗರಾಜ್ ಪರಿಸರ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಅಭಿವ್ಯಕ್ತಿಗೊಳಿಸಲು ಇದೊಂದು ಒಳ್ಳೆಯ ವೇದಿಕೆಯಾಗಿದ್ದು ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಸ್ವಯಂ ಸೇವಕರು ಪಾಲ್ಗೊಂಡಿದ್ದು, ರಾಷ್ಟ್ರಮಟ್ಟದಲ್ಲಿ ಹೆಸರು ತರಬೇಕೆಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಟಿ.ಮಂಜುನಾಥಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮಗಳನ್ನು ಕುವೆಂಪು ರಂಗಮಂದಿರ ಮತ್ತು ಸರ್ಕಾರಿ ನೌಕರರ ಭವನ ಈ ಎರಡು ವೇದಿಕೆಗಳಲ್ಲಿ 15 ರಿಂದ 29 ವರ್ಷದೊಳಗಿನ ಯುವಜನತೆಗೆ ಜಾನಪದ ನೃತ್ಯ(ಗುಂಪು), ಜಾನಪದ ಗೀತೆ(ಗುಂಪು), ಏಕಪಾತ್ರಾಭಿನಯ ವೈಯಕ್ತಿಕ(ಇಂಗ್ಲಿಷ್/ಹಿಂದಿ), ಶಾಸ್ತ್ರೀಯ ಸಂಗೀತ(ಹಿಂದೂಸ್ತಾನಿ ಮತ್ತು ಕರ್ನಾಟಿಕ್), ಶಾಸ್ತ್ರೀಯ ವಾದ್ಯ(ಸಿತಾರ, ಕೊಳಲು, ತಬಲಾ, ವೀಣಾ, ಮೃದಂಗಂ), ಹಾರ್ಮೋನಿಯಂ, ಗಿಟಾರ್, ಶಾಸ್ತ್ರೀಯ ನೃತ್ಯಗಳು(ಮಣಿಪುರಿ, ಒಡಿಸ್ಸಿ, ಕಥಕ್, ಕೂಚುಪುಡಿ, ಭರತನಾಟ್ಯ) ಮತ್ತು ಆಶುಭಾಷಣ (ಹಿಂದಿ/ಇಂಗ್ಲಿಷ್) ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನೆಹರು ಯುವ ಕೇಂದ್ರದ ಸಂಯೋಜಕ ಉಲ್ಲಾಸ್ ಕೆ.ಟಿ.ಕೆ ಇತರೆ ಇಲಾಖೆಯ ಅಧಿಕಾರಿಗಳು, ಯುವ ಸ್ಪರ್ಧಿಗಳು, ನಿರ್ಣಾಯಕರು ಉಪಸ್ಥಿತರಿದ್ದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.