ಬಿಟ್ ಕಾಯಿನ್ ಹಗರಣ ದೇಶದಲ್ಲೆಡೆ ಸದ್ದು ಮಾಡಿದೆ.ಇದರ ಬೆನ್ನಲ್ಲೇ, ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಯಿತು. ಬಿಟ್ ಕಾಯಿನ್ ಮತ್ತು ಕ್ರಿಪ್ಟೋ ಕರೆನ್ಸಿ ಬಗ್ಗೆ ಹೂಡಿಕೆ ಹಿನ್ನೆಲೆಯಲ್ಲಿ ಉಂಟಾದ ಆತಂಕದ ಬಗ್ಗೆ ಚರ್ಚಿಸಲಾಯಿತು.
ಕೇಂದ್ರ ಹಣಕಾಸು ಮತ್ತು ಗೃಹಸಚಿವ ಇಲಾಖೆಯು ಬಹುಕೋಟಿ ಮೌಲ್ಯದ ಬಿಟ್ ಕಾಯಿನ್ ಹಗರಣದ ಬಗ್ಗೆ ತನಿಖೆ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಕಲೆ ಹಾಕಿದೆ. ಬಹುಕೋಟಿ ಮೌಲ್ಯದ ಈ ಹಗರಣದ ಬಗ್ಗೆ ಹಣಕಾಸು ಮತ್ತು ಗೃಹ ಇಲಾಖೆಯ ಹಿರಿಯ ಅಧಿಕಾರಿಗಳು, ಆರ್ ಬಿ ಐ ನ ಮುಖ್ಯಸ್ಥರು ಭಾಗಿಯಾಗಿದ್ದಾರೆ.
ಜಾರಿ ನಿರ್ದೇಶನಾಲಯ ಮತ್ತು ಕೇಂದ್ರ ತನಿಖಾ ದಳ ಹಾಗೂ ಕೇಂದ್ರೀಯ ಗುಪ್ತದಳದ ಅಧಿಕಾರಿಗಳು ಶನಿವಾರ ನಡೆದ ಸಭೆಯಲ್ಲಿ ಪ್ರಧಾನಿಯವರ ಬಳಿ ಚರ್ಚಿಸಿದ್ದಾರೆ.
ಕ್ರಿಪ್ಟೋ ಕರೆನ್ಸಿಯಿಂದ ದಿಢೀರ್ ಲಾಭಗಳಿಕೆ ಸಾಧ್ಯ ಎಂಬ ಅತಿಯಾದ ನಂಬಿಕೆ ಮೂಡಿಸಲಾಗಿದೆ. ಪಾರದರ್ಶಕವಲ್ಲದ ಜಾಹೀರಾತಿನ ಮೂಲಕ ಯುವಜನತೆ ದಾರಿ ತಪ್ಪಿಸುವ ಪ್ರಯತ್ನವನ್ನು ತಪ್ಪಿಸಬೇಕಾಗಿದೆ. ಇಂತಹ ದಾರಿ ತಪ್ಪಿಸುವ ಪ್ರಯತ್ನ ತಡೆಯುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳುಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಪ್ರಧಾನಿ ಕಚೇರಿಯ ಮೂಲಗಳು ತಿಳಿಸಿವೆ.
ಈ ಸಭೆಯಲ್ಲಿ ನಿರ್ಧರಿಸಿದ ದಿಟ್ಟ ಕ್ರಮಗಳು ಸರ್ಕಾರ ಕೈಗೊಳ್ಳುವ ಪ್ರಗತಿಪರ ಹಾಗೂ ಮುಂದುವರೆದ ದೃಷ್ಟಿಯಿಂದ ಕೂಡಿರುತ್ತದೆ ಎಂದು ಮೂಲಗಳು ಹೇಳಿವೆ.
ಇದಕ್ಕೆ ಸಂಬಂಧಿಸಿದಂತೆ ಆರ್ ಬಿ ಐ ಗೌರ್ನರ್ ಶಕ್ತಿಕಾಂತ್ ದಾಸ್ ಅವರು ‘ ಕ್ರಿಪ್ಟೋ ಕರೆನ್ಸಿ ಗಳು ಅನಿಯಂತ್ರಿತವಾಗಿವೆ, ಯಾವುದೇ ಆರ್ಥಿಕ ವ್ಯವಸ್ಥೆಗೆ ಇವುಗಳಿಂದ ಗಂಭೀರ ಅಪಾಯವಿದೆ ಎಂದು ಹೇಳಿದ್ದಾರೆ.
‘ಬಿಟ್ ಕಾಯಿನ್ ಹಗರಣ ದೊಡ್ಡದು ಆದರೆ ಅದನ್ನು ಮುಚ್ಚಿ ಹಾಕುವುದು ಇನ್ನೂ ದೊಡ್ಡ ಹಗರಣ. ಈ ಮೂಲಕ ಯಾರದೋ ಹುಸಿ ಅಹಂಕಾರವನ್ನು ರಕ್ಷಿಸಲಾಗುತ್ತಿದೆ’ ಎಂದು ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.