ಭಾರತ ಆರ್ಥಿಕ ಮತ್ತು ಕೈಗಾರಿಕಾ ಬೆಳವಣಿಗೆಯಿಂದ 2047ರ ಒಳಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ದೃಢ ಹೆಜ್ಜೆ ಹಾಕುತ್ತಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.
ಜಿಲ್ಲಾ ಮತ್ತು ವಾಣಿಜ್ಯ ಕೈಗಾರಿಕಾ ಸಂಘದ ಆವರಣದಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ನೇತಾಜಿ ಸುಭಾಷ್ಚಂದ್ರ ಬೋಸ್, ಭಗತ್ ಸಿಂಗ್, ಮಹಾತ್ಮ ಗಾಂಧಿ ಸೇರಿದಂತೆ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರು ಸ್ವಾತಂತ್ರ್ಯ ಗಳಿಸಲು ಹೋರಾಟ ಮಾಡಿ ಸ್ವಾತಂತ್ರ್ಯ ಪಡೆದುಕೊಂಡರು. ನಾವೆಲ್ಲರೂ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಗಳನ್ನು ಗೌರವಿಸಬೇಕು ಎಂದು ತಿಳಿಸಿದರು.
ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ಎಂದು ಕರೆಯಲ್ಪಡುವ ಆರ್ಥಿಕ ಸುಧಾರಣೆಗಳ ನೀತಿಯಿಂದ ಭಾರತದ ಆರ್ಥಿಕತೆಯು ಜಾಗತಿಕ ಮಾರುಕಟ್ಟೆಗೆ ತೆರೆದುಕೊಂಡಿದೆ. 1965ರಲ್ಲಿ ಆರಂಭವಾದ ಹಸಿರು ಕ್ರಾಂತಿ ಮತ್ತು ಇತರ ಕೃಷಿ ತಂತ್ರಜ್ಞಾನಗಳ ಅಳವಡಿಕೆಯಿಂದ ಭಾರತವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ ಎಂದರು.
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ತ್ವರಿತ ಬೆಳವಣಿಗೆಯು ಭಾರತವನ್ನು ಜಾಗತಿಕ ವೇದಿಕೆಗೆ ಏರಿಸಿದೆ. 2017ರಲ್ಲಿ ಪ್ರಾರಂಭವಾದ ಸರಕು ಮತ್ತು ಸೇವಾ ತೆರಿಗೆಯಿಂದ ಸರ್ಕಾರದ ಬೊಕ್ಕಸಕ್ಕೆ ಆದಾಯವು ಸಾಕಷ್ಟು ಬಂದಿದೆ. ಅಭಿವೃದ್ಧಿ ಕಾರ್ಯಗಳಿಗೆ ತುಂಬಾ ಪ್ರಯೋಜನಕಾರಿ ಆಗಿದೆ. ಹೊಸ ಆದಾಯ ತೆರಿಗೆ ಕಾಯ್ದೆ ಡಿಜಿಟಲ್ ಕ್ರಾಂತಿ, ಏಕೀಕೃತ ಪಾವತಿ ಇಂಟರ್ಫೇಸ್, ಮೂಲಸೌಕರ್ಯ ಅಭಿವೃದ್ಧಿ ಪರಮಾಣು ಶಕ್ತಿ, ಬಾಹ್ಯಾಕಾಶ ಪರಿಶೋಧನೆ, ಜೈವಿಕ ತಂತ್ರಜ್ಞಾನ , ರಕ್ಷಣಾ ಮೂಲಸೌಕರ್ಯ, ಸಾಮಾಜಿಕ , ಆರೋಗ್ಯ ಶಿಕ್ಷಣ ,ವಿದ್ಯುತ್ ಉತ್ಪಾದನೆ, ಪ್ರಸರಣ ‘ಮೇಕ್ ಇನ್ ಇಂಡಿಯಾ’ ಮತ್ತು ಉತ್ಪಾದನೆ ಸಂಬಂಧಿತ ಪ್ರೋತ್ಸಾಹಕ ಯೋಜನೆ, ಇ-ಕಾಮರ್ಸ್, ಕ್ವಿಕ್ ಕಾಮರ್ಸ್ ಮತ್ತು ಆಹಾರ ವಿತರಣಾ ವೇದಿಕೆ, ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಗಳ ಕ್ಷೇತ್ರಗಳಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದರು.
ಪ್ರಸಕ್ತ ವಿಶ್ವದ ಆರನೇ ಅತಿ ದೊಡ್ಡ ಆರ್ಥಿಕತೆಯಿಂದ 2027ಕ್ಕೆ 5 ಟ್ರಿಲಿಯನ್ ಆರ್ಥಿಕತೆಯನ್ನು ತಲುಪುವ ಗುರಿಯನ್ನು ಇಟ್ಟುಕೊಳ್ಳುವುದರ ಮೂಲಕ ವಿಶ್ವದ ಮೂರನೇ ದೊಡ್ಡ ಆರ್ಥಿಕತೆಯಾಗುವತ್ತ ಸಾಗುತ್ತಿದ್ದೇವೆ. ಭಾರತದ ಯೋಗ, ಆಯುರ್ವೇದ, ಸಿನಿಮಾ, ಸಾಂಸ್ಕೃತಿಕ ಮುದ್ರೆ ಜಾಗತಿಕವಾಗಿ ಬೆಳೆದಿದೆ ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಸಹ ಕಾರ್ಯದರ್ಶಿ ಕೆ.ಎಸ್.ಸುಕುಮಾರ್, ಖಜಾಂಚಿ ಆರ್.ಮನೋಹರ, ನಿರ್ದೇಶಕರಾದ ಗಣೇಶ್ ಎಂ.ಅಂಗಡಿ, ಪ್ರದೀಪ್ ವಿ.ಎಲಿ, ವಿ.ಕೆ.ಜೈನ್, ಎಸ್.ಎಸ್.ಉದಯ್ ಕುಮಾರ್, ಎಸ್.ಪಿ.ಶಂಕರ್, ಬಿ.ವಿ.ಲಕ್ಷ್ಮೀ ಗೋಪಿನಾಥ್, ಸಹನ ಸುಭಾಷ್, ಆರ್.ಸುರೇಶ್ ಕುಮಾರ್, ಕೆ.ಎನ್.ರಾಜಶೇಖರ್, ವಿನೋದ್ ಕುಮಾರ್ ಗುಜ್ಜಾಡಿ, ರವಿಪ್ರಕಾಶ್ ಜನ್ನಿ, ಮಾಜಿ ಅಧ್ಯಕ್ಷರಾದ ಕೆ.ವಿ.ವಸಂತ್ ಕುಮಾರ್, ಡಿ.ಎಂ.ಶಂಕರಪ್ಪ, ಸಾಗರ ರಸ್ತೆ ಕೈಗಾರಿಕಾ ಸಂಘದ ಉಮೇಶ್ ಶಾಸ್ತ್ರಿ, ಡಿ.ಎಸ್.ನಟರಾಜ್, ದೇವರಾಜ್, ಪ್ರಶಾಂತ್ ಶಾಸ್ತ್ರಿ, ಕಾರ್ಯನಿರ್ವಾಹಕ ಕಾರ್ಯದರ್ಶಿ ಕಮಲಾಕ್ಷರಪ್ಪ, ಸಿಬ್ಬಂದಿ ಚೆನ್ನವೀರಪ್ಪ ಮತ್ತು ಕೈಗಾರಿಕಾ ಉದ್ಯಮಿಗಳು ಭಾಗವಹಿಸಿದ್ದರು.
2047 ಕ್ಕೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗುವತ್ತ ದೃಢ ಹೆಜ್ಜೆ ಹಾಕುತ್ತಿದೆ- ಬಿ.ಗೋಪಿನಾಥ್
Date:
