- ರಮೇಶ್ ಭಟ್, ಹಿರಿಯ ಕಲಾವಿದರು.
ನಮ್ಮ ಪೂರ್ವಜರು ಗುಲಾಮ ಗಿರಿಯಲ್ಲಿ ಬದುಕಿದ್ದು ನಂತರ ನಮ್ಮ ಹಿರಿಯರು ಹೋರಾಟದಿಂದಾಗಿ ಬ್ರಿಟೀಷ ಆಡಳಿತದಿಂದ ಮುಕ್ತರಾಗಿ ಸ್ವತಂತ್ರರಾದೆವು. ಸ್ವತಂತ್ರರಾಗಿ ೮೦ವರ್ಷಗಳಾದ ಈ ದಿನವನ್ನು ನಮ್ಮ ಹಿರಿಯರ ತ್ಯಾಗ ಬಲಿದಾನಗಳಿಂದ ಪಡೆದ ಸ್ವಾತಂತ್ರವನ್ನು ನಾವು ಅನುಭವಿಸಿಕೊಂಡು ಬರುತ್ತಿದ್ದೇವೆ. ಇವೆಲ್ಲವುಗಳನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಕಾಲೇಜಿನಲ್ಲಿ ಶಿಕ್ಷಣ ಪಡೆದಿರುವ ಸಾವಿರಾರು ವಿದ್ಯಾರ್ಥಿಗಳು ಸಮಾಜದ ನಾನಾ ಕ್ಷೇತ್ರಗಳಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಹಲವರು ದೇಶ ವಿದೇಶಗಳಲ್ಲಿ ನೆಲೆಸಿ ಉನ್ನತ ಗೌರವವನ್ನು ಪಡೆದಿರುವುದನ್ನು ಕೇಳಿ ನನಗೆ ಸಂತೋಷವಾಯಿತು.
ನಮ್ಮ ದೇಶ ಕಂಡ ಅಪ್ರತಿಮ ಪ್ರಧಾನಿ ಶ್ರೀ ಲಾಲ್ಬಹದ್ದೂರ್ ಶಾಸ್ತಿçಯವರು ಈ ಕಾಲೇಜಿಗೆ ಅಡಿಗಲ್ಲನ್ನಿಟ್ಟಿರುವುದು ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡುವಂತಹದ್ದಾಗಿದೆ. ಇಲ್ಲಿ ಓದುತ್ತಿರುವ ನೀವೆಲ್ಲರೂ ಭಾಗ್ಯವಂತರು. ಇಲ್ಲಿ ನೀಡುತ್ತಿರುವ ಆಧುನಿಕ ಶಿಕ್ಷಣ ವ್ಯವಸ್ಥೆಯನ್ನು ಕಂಡು ನಾನು ಪ್ರಭಾವಿಯಾಗಿದ್ದೇನೆ. ಮಲೆನಾಡಿನ ಸ್ವಚ್ಛ ಸುಂದರ ಪರಿಸರ, ಸುಸಂಸ್ಕೃತ ಜನರ ಆಶೋತ್ತರದ ಈ ಕಾಲೇಜು ಕಂಡು ಪುಳಕಿತನಾಗಿದ್ದೇನೆ.
ನಾನೊಬ್ಬ ಸಾಮಾನ್ಯ ಕಲಾವಿದನಾಗಿದ್ದು, ನನ್ನ ಬದುಕು ರಂಗಭೂಮಿ ಮತ್ತು ಚಲನಚಿತ್ರದ ಮೂಲಕ ಕಟ್ಟಿಕೊಂಡಿದ್ದು. ನಾನು ಹೆಚ್ಚು ಓದಿದವನಲ್ಲದಿದ್ದರೂ ಕಾಲೇಜಿನ ಛದ್ಮವೇಷಗಳಲ್ಲಿ ದೇಶದ ಮಹಾನಾಯಕ ನೆಹರೂ, ಸಮಾಜದ ಗಣ್ಯರಾದ ಡಾಕ್ಟರ್, ಜಡ್ಜ್ ಮುಂತಾದ ಪಾತ್ರಗಳನ್ನು ಮಾಡಿ ಸೈ ಎನ್ನಿಸಿಕೊಂಡವನು. ನೀವೂಸಹ ಓದಿನ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕಾಲೇಜಿನ ಹೆಸರಿನ ಜೊತೆ ನಿಮ್ಮ ಹೆಸರನ್ನು ಪ್ರಪಂಚದಲ್ಲಿ ಮೂಡಿಸುವಂತಾಗಬೇಕು. ವಿದ್ಯಾರ್ಥಿ ಜೀವನ ಜೀವನದ ಅತ್ಯಂತ ಪ್ರಮುಖ ಹಂತ. ಇಲ್ಲಿಯೇ ನಿಮ್ಮ ಸರ್ವಾಂಗೀಣ ಪ್ರಗತಿಯನ್ನು ಕಂಡುಕೊಳ್ಳಬೇಕು. ಈ ದಿನದ ಹೆಜ್ಜೆ ನಿಮ್ಮ ಬದುಕಿನ ಕೊನೆಯವರೆಗೂ ನಡೆಯುವ ದಾರಿಯನ್ನು ತೋರಿಸುತ್ತದೆ.
ನಾನು ಕಳೆದ ೫೨ ವರ್ಷಗಳಲ್ಲಿ ೭೦೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದೇನೆ ಎಂಬುದು ಹೆಗ್ಗಳಿಕೆಯಾಗಿದೆ. ಇವುಗಳಲ್ಲಿ ನೋಡಿ ಸ್ವಾಮೀ ನಾವಿರೋದೇ ಹೀಗೆ ಸಿನಿಮಾದಂತಹ ಯುವಜನರ ಕಣ್ತೆರೆಸಿದ ಸಿನೇಮಾಗಳೂ ಇವೆ. ನನ್ನ ಜೀವನದಲ್ಲಿ ನಾನು ಕಳೆದುಕೊಂಡ ಅನರ್ಘ್ಯ ರತ್ನ ಗೆಳೆಯ ಶಂಕರ್ನಾಗ್ ಅವರೊಂದಿಗಿನ ಒಡನಾಟ ಸದಾ ನೆನಪಿಸಿಕೊಳ್ಳುತ್ತೇನೆ. ಹಾಗೇ ನಿಮ್ಮ ಜೀವನದಲ್ಲಿ ಉತ್ತಮ ತಿರುವು ನೀಡಿದ ಗೆಳೆಯರನ್ನು, ಹಿತೈಷಿಗಳನ್ನು, ಸಂಸ್ಥೆಗಳನ್ನು ಸದಾ ನೆನಪಿಸಿಕೊಂಡು ಅವರ ಋಣ ತೀರಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಹಿರಿಯ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದ ರಮೇಶ್ ಭಟ್ ಅವರು ಇಲ್ಲಿನ ಲಾಲ್ಬಹದ್ದೂರ್ ಕಾಲೇಜಿನಲ್ಲಿ ೮೦ನೇ ಸ್ವಾತಂತ್ರೋತ್ಸವ ದಿನದ ಸಮಾರಂಭದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜಿನ ಎನ್ಸಿಸಿ ಘಟಕವು ಕವಾಯ್ತು ಮೂಲಕ ಧ್ವಜ ವಂದನೆ ಸಲ್ಲಿಸಿತು. ಅತಿಥಿಗಳಿಗೆ ಕಾಲೇಜು ಆಡಳಿತಮಂಡಳಿಯು ಹಾರ ಹಾಕಿ ಶಾಲು ಹೊದೆಸಿ ಗೌರವಿಸಿತು.
ಎಂಡಿಎಫ್ ಅಧ್ಯಕ್ಷ ಬಿ.ಆರ್. ಜಯಂತ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಿರ್ದೇಶಕ ನಿರ್ಮಾಪಕ ಧನಂಜಯ ಗಾರ್ಗಿ, ವಿವೇಕಾನಂದ ಸ್ವಾಯತ್ತ ಕಾಲೇಜಿನ ನಿಕಟಪೂರ್ವ ಕುಲಪತಿ ಶ್ರೀಧರ್ ಮುಂಡಿಗೆಹಳ್ಳ, ಬಿಎಡ್ ಕಾಲೇಜು ಪ್ರಾಂಶುಪಾಲ ಡಾ| ಶಿಲ್ಪಾ, ಸಹಕಾರ್ಯದರ್ಶಿ ಸತ್ಯನಾರಾಯಣ ಅವರುಗಳು ಭಾಗವಹಿಸಿದ್ದರು. ಕಾಲೇಜಿನ ಎನ್ಸಿಸಿ, ಎನ್ಎಸ್ಎಸ್ ಘಟಕದ ಸದಸ್ಯರು, ಪದಾಧಿಕಾರಿಗಳು, ವಿದ್ಯಾರ್ಥಿಗಳು, ಅಧ್ಯಾಪಕವೃಂದ, ಸಿಬ್ಬಂದಿಗಳು ಭಾಗವಹಿಸಿದ್ದರು. ಕಾಲೇಜು ಪ್ರಾಂಶುಪಾಲ ಡಾ| ಲಕ್ಷ್ಮೀಶ ಅವರು ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು, ಖಜಾಂಚಿ ಕವಲಕೋಡು ಕೆ. ವೆಂಕಟೇಶ್ ವಂದಿಸಿದರು.
ಬದುಕಿಗೆ ಭದ್ರತೆ ನೀಡಿದ ಹಿರಿಯರನ್ನು, ಸಂಸ್ಥೆಯನ್ನು ಮರೆಯಬಾರದು
Date:
