ಭದ್ರಾವತಿ ನಗರದ ಭೋವಿ ಕಾಲೊನಿಯ ನಿವಾಸಿ ಅಶೋಕ ಆತ್ಮಹತ್ಯೆಗೆ ಯತ್ನಿಸಿದ್ದು, ಅದಕ್ಕೂ ಮುನ್ನ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೊದಲ್ಲಿ ಪಾಪಣ್ಣ, ಕುಳ್ಳಿ ರಾಜೇಶ್, ಅಣ್ಣಪ್ಪ ಹಾಗೂ ಧೃವ ಎಂಬವರ ಹೆಸರನ್ನು ಉಲ್ಲೇಖಿಸಿರುವ ಅಶೋಕ, ಇಸ್ಪೀಟು ಆಡಲು ದುಬಾರಿ ಬಡ್ಡಿಗೆ ಹಣ ನೀಡಿಸಿ, ಬಳಿಕ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಾಲ ಹಾಗೂ ಬಡ್ಡಿ ಹಣವನ್ನು ಕೂಡಲೇ ವಾಪಸ್ ನೀಡುವಂತೆ ಒತ್ತಡ ಹೇರಿ, ಹಣ ಕೊಡದಿದ್ದರೆ ಮನೆಗೆ ಬಂದು ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ವಿಡಿಯೊದಲ್ಲಿ ತಿಳಿಸಿದ್ದಾರೆ.
ಪಾಪಣ್ಣ ಅವರು ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಗೇಶ್ವರ್ ಅವರ ಸಹೋದರ ಎಂದು ಕೂಡ ಅಶೋಕ ಉಲ್ಲೇಖಿಸಿದ್ದಾರೆ.
ಇದೇ ವೇಳೆ, “ನನಗೂ ಕೆಲವರಿಂದ ಹಣ ಬರಬೇಕಿದೆ. ಡೊಳ್ಳ ಸೂರಿ ಸೇರಿದಂತೆ ಹಲವರು ಹಣ ವಾಪಸ್ ನೀಡಿಲ್ಲ. ಆದರೆ ಆ ಹಣ ಸಿಗದಿದ್ದರೂ ನನ್ನನ್ನೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ಈ ನಿರಂತರ ಕಿರುಕುಳ ಮತ್ತು ಅವಮಾನದಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸುತ್ತಿದ್ದೇನೆ. ನನ್ನ ಸಾವಿಗೆ ಇವರೇ ಕಾರಣ” ಎಂದು ಅಶೋಕ ವಿಡಿಯೊದಲ್ಲಿ ಆರೋಪಿಸಿದ್ದಾರೆ.
ಈ ಘಟನೆ ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣದ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
