ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಪಕ್ಷ ಸಂಘಟನೆ ವಿರುದ್ಧ ಮಾಜಿ ಸಚಿವ ಎಸ್. ಕುಮಾರ್ ಬಂಗಾರಪ್ಪ ಅವರ ಅಪಹಾಸ್ಯಕರ ಮಾಧ್ಯಮ ಹೇಳಿಕೆ ಹಾಸ್ಯಾಸ್ಪದ ಎಂದು ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ನಿರಂಜನ್ ಕುಪ್ಪಗಡ್ಡೆ ಹೇಳಿದರು.
ಸೊರಬ ಪಟ್ಟಣದ ಹೊಸಪೇಟೆ ಬಡಾವಣೆಯ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಸದೃಢವಾಗಿ ಕಟ್ಟಿ ಬೆಳೆಸಲು ಹಾಗೂ ಯುವಕರನ್ನು ಪಕ್ಷಕ್ಕೆ ಸೆಳೆಯಲು ವಿಶೇಷ ಆಸಕ್ತಿ ಹೊಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಬಗ್ಗೆ ಅಪಹಾಸ್ಯ ಮಾಡುವುದನ್ನು ಕುಮಾರ್ ಕೈಬಿಡಬೇಕು. ಕುಮಾರ್ ಶಾಸಕರಾಗಿದ್ದ ಅವಧಿಯಲ್ಲಿ ಪಕ್ಷದ ಸಂಘಟನೆಗೆ ಕೊಡುಗೆ ಏನು?. ಕಾರ್ಯಕರ್ತರನ್ನು ನಿರ್ಲಕ್ಷಿಸಿ ದ್ವೇಷ ಮಾಡಿದ್ದೆ ಅವರ ಸಾಧನೆಯಾಗಿದೆ ಎಂದರು.
ಒಂದು ದಶಕಗಳ ಕಾಲ ರಾಜಕೀಯ ವನವಾಸದಲ್ಲಿದ್ದ ಕುಮಾರ್ ಬಂಗಾರಪ್ಪ ಅವರನ್ನು 2018ರ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಕ್ಷಕ್ಕೆ ಆಹ್ವಾನಿಸಿ ತಮ್ಮ ಮನೆ, ಮಠ ಕೆಲಸ ಬಿಟ್ಟು ಒಗ್ಗಟ್ಟಿನಿಂದ ಗೆಲ್ಲಿಸಿದ್ದರು. ಕೃತಜ್ಞತಾ ಭಾವವಿಲ್ಲದ ಕುಮಾರ್ ಬಂಗಾರಪ್ಪ, ಗೆದ್ದ ನಂತರ ಬಿಜೆಪಿ ಮುಖಂಡರ ಮೇಲೆ ವ್ಯೆಯಕ್ತಿಕ ದ್ವೇಷ ಸಾಧಿಸಿ ದೂರವಿಟ್ಟರು. ನಾಡು ಕಂಡ ಜನಪ್ರಿಯ ಮುಖ್ಯ ಮಂತ್ರಿ ಎಸ್.ಬಂಗಾರಪ್ಪ ಅವರ ಹೆಸರನ್ನು ತಮ್ಮ ಹೆಸರಿನ ಮುಂದೆ ಹೊಂದಿರುವ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಅವರು ತಮ್ಮ ಮೂಲ ನಾಮದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.
ಸಾಗರ ರಸ್ತೆಯಲ್ಲಿ ಮಹಿಳೆಯೋರ್ವರ ಮೇಲೆ ದೌರ್ಜನ್ಯ ಎಸಗಿದ್ದು, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ಮೇಲೆ ದೂರು ದಾಖಲಿಸಿದ್ದು, ಆನವಟ್ಟಿಯಲ್ಲಿ ಮೂಡಿ-ಮೂಗೂರು ಏತ ನೀರಾವರಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಆಯೋಜನೆ ಮಾಡಿದ್ದ ಊಟವನ್ನು ಸಂಪೂರ್ಣ ಹಾಳು ಮಾಡಿದ್ದು ಬಿಟ್ಟರೇ ಪಕ್ಷ ಸಂಘಟನೆಯ ಬಗ್ಗೆ ಯಾವುದೇ ಕೊಡುಗೆ ಇಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಮಾತಾಡುವ ನೈತಿಕತೆಯೂ ಇಲ್ಲ ಎಂದು ಖಡಖ್ ಆಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗಜಾನನರಾವ್ ಉಳವಿ, ಗುರುಪ್ರಸನ್ನಗೌಡ ಬಾಸೂರು, ಎ.ಎಲ್.ಅರವಿಂದ್, ಸುರೇಶ್ ಎಸ್ಎನ್ ಕೊಪ್ಪ, ಹರೀಶ್, ಬೆನವಪ್ಪ, ರಾಮಚಂದ್ರ, ಬಸವರಾಜ್, ಅರುಣಕುಮಾರ್ ಪುಟ್ಟನಹಳ್ಳಿ ಇದ್ದರು.
