Rotary Club Shivamogga “ಮಳೆಗಾಲದಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳು ಉಲ್ಬಣಗೊಳ್ಳುವುದರಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂನ್ ತಿಂಗಳನ್ನು ಮಲೇರಿಯಾ ವಿರೋಧಿ ಮಾಸವನ್ನಾಗಿ ಆಚರಿಸಲಾಗುತ್ತದೆ. ಸಮುದಾಯದ ಸಕ್ರಿಯ ಭಾಗವಹಿಸುವಿಕೆ ಹಾಗೂ ವೈಜ್ಞಾನಿಕ ಕ್ರಮಗಳ ಮೂಲಕ ಮಲೇರಿಯಾವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಗುಡದಪ್ಪ ಕಸಬಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ, ಶ್ರೀರಾಮನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಇವರ ಸಹಯೋಗದಲ್ಲಿ ಶಿವಮೊಗ್ಗ ನಗರದ ಬಿಜಿಎಸ್ ವಸತಿಯುತ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ‘ಜಿಲ್ಲಾ ಮಟ್ಟದ ಮಲೇರಿಯಾ ವಿರೋಧಿ ಮಾಸಾಚರಣೆ 2026’ ರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ವರ್ಷ “ಮಲೇರಿಯಾವನ್ನು ಕೊನೆಗೊಳಿಸಲು ಅಗತ್ಯ ಕ್ರಮಗಳ ಚಾಲನೆಯನ್ನು ಈಗ ನಾವು ಮಾಡೋಣ ಹಾಗೂ ನಾವು ಮಾಡುತ್ತೇವೆ” ಎಂಬ ಘೋಷವಾಕ್ಯದೊಂದಿಗೆ ಈ ಮಾಸಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು, ಮಲೇರಿಯಾ ತಡೆಗಟ್ಟುವಿಕೆಯ ನಾಲ್ಕು ಮೂಲಭೂತ ತತ್ವಗಳನ್ನು ವಿವರಿಸಿದರು:
ಸೊಳ್ಳೆಗಳ ಚಟುವಟಿಕೆ ಮತ್ತು ಅಪಾಯಗಳ ಬಗ್ಗೆ ನಿರಂತರ ಅರಿವು ಮೂಡಿಸುವುದು.
ಕೀಟನಾಶಕ ಸಂಸ್ಕರಿಸಿದ ಬಲೆಗಳು ಹಾಗೂ ಉದ್ದನೆಯ ಬಟ್ಟೆಗಳನ್ನು ಧರಿಸುವ ಮೂಲಕ ರೋಗ ತಡೆಗಟ್ಟುವಿಕೆ.
ದುರ್ಬಲ ಗುಂಪುಗಳಿಗೆ ಅಗತ್ಯ ಮಲೇರಿಯಾ ತಡೆಗಟ್ಟುವ ಔಷಧಿಗಳ ವಿತರಣೆ.
ಜ್ವರ ತರಹದ ಲಕ್ಷಣಗಳು ಕಂಡುಬಂದರೆ ತಕ್ಷಣವೇ ರೋಗನಿರ್ಣಯ ಮತ್ತು ತ್ವರಿತ ಚಿಕಿತ್ಸೆ ಪಡೆಯುವುದು ಅತ್ಯಗತ್ಯ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ನಾದಮಯಾನಂದನಾಥ ಸ್ವಾಮೀಜಿ ಅವರು ಆಶೀರ್ವಚನ ನೀಡಿ, “ಅನಾಫಿಲೀಸ್ ಹೆಣ್ಣು ಸೊಳ್ಳೆಗಳ ವಂಶಾಭಿವೃದ್ಧಿಯನ್ನು ತಡೆಗಟ್ಟಲು ಮಳೆಗಾಲದಲ್ಲಿ ಕೆರೆ, ಕುಂಟೆ, ಬಾವಿ ಹಾಗೂ ಸಣ್ಣಪುಟ್ಟ ತಗ್ಗು ಪ್ರದೇಶಗಳಲ್ಲಿ ಮಳೆನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ,” ಎಂದರು.
Rotary Club Shivamogga ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್ ಜಿ.ಬಿ ಮಾತನಾಡಿ, “ಭಾರತವು ಮಲೇರಿಯಾ ಮುಕ್ತ ದೇಶ ನಿರ್ಮಾಣದತ್ತ ಬಲವಾದ ಪ್ರಗತಿ ಸಾಧಿಸುತ್ತಿದೆ. 2027 ರ ವೇಳೆಗೆ ಸ್ಥಳೀಯ ಮಲೇರಿಯಾ ಪ್ರಕರಣಗಳನ್ನು ಶೂನ್ಯಗೊಳಿಸುವ ಮತ್ತು 2030 ರ ವೇಳೆಗೆ ರಾಷ್ಟ್ರೀಯ ಮಲೇರಿಯಾ ನಿರ್ಮೂಲನೆಯನ್ನು ಪೂರ್ಣಗೊಳಿಸುವ ಗುರಿಯನ್ನು ದೇಶ ಹೊಂದಿದೆ. ಜಾಗತಿಕವಾಗಿ ಈಗಾಗಲೇ 47 ದೇಶಗಳು ಮಲೇರಿಯಾ ಮುಕ್ತವೆಂದು ಪ್ರಮಾಣೀಕರಿಸಲ್ಪಟ್ಟಿದ್ದು, 2000 ನೇ ಇಸವಿಯಿಂದ ಈವರೆಗೆ ಅಂದಾಜು 14 ಮಿಲಿಯನ್ ಸಾವುಗಳನ್ನು ತಪ್ಪಿಸಲಾಗಿದೆ ಎಂದು ಅಂಕಿ-ಅಂಶಗಳನ್ನು ಹಂಚಿಕೊಂಡರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರು ಹಾಗೂ ರೋಟರಿ ಮಾಜಿ ಸಹಾಯಕ ಗವರ್ನರ್ ವಿಜಯ್ ಕುಮಾರ್ ಮಾತನಾಡಿ, “ಲಕ್ಷಾಂತರ ಮಕ್ಕಳಿಗೆ ಮಲೇರಿಯಾ ಲಸಿಕೆಗಳನ್ನು ವಿತರಿಸುವಂತಹ ಆಧುನಿಕ ಆವಿಷ್ಕಾರಗಳ ಹೊರತಾಗಿಯೂ, ಮಲೇರಿಯಾ ಇಂದಿಗೂ ಒಂದು ಪ್ರಮುಖ ಆರೋಗ್ಯ ಸವಾಲಾಗಿ ಉಳಿದಿದೆ ಎಂದರು.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಉಮಾ ಅವರು ಮಾತನಾಡಿ, ಮಲೇರಿಯಾ ರೋಗದ ಲಕ್ಷಣಗಳು, ಅದು ಹರಡುವ ವಿಧಾನ ಹಾಗೂ ನಿಯಂತ್ರಣ ಮತ್ತು ಚಿಕಿತ್ಸಾ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ನಿರಂತರ ಜಾಗೃತಿ ಮೂಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಡಿಹೆಚ್ ಓ ಡಾ. ನಟರಾಜ್ ಕೆ.ಎಸ್, ಲೆಕ್ಕ ಪರಿಶೋಧಕರಾದ ಆರ್. ಮನೋಹರ, ಶಾಲೆಯ ಪ್ರಾಂಶುಪಾಲರಾದ ಗಿರೀಶ್ ಬಿ.ಎ., ದ್ರಾಕ್ಷಾಯಿಣಿ, ಚೈತ್ರ, ಶ್ರೀ ಓಬಯ್ಯ, ಪ್ರಮೋದ್, ಹಿರಿಯ ಆರೋಗ್ಯ ನಿರೀಕ್ಷಕರುಗಳಾದ ರಾಜು, ಬಸವರಾಜ್, ಜಾಕೀರ್ ಹುಸೇನ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Rotary Club Shivamogga ಮಲೇರಿಯಾವನ್ನ ವೈಜ್ಞಾನಿಕ ಕ್ರಮಗಳಿಂದ ನಿರ್ಮೂಲನೆ ಮಾಡಲು ಸಾಧ್ಯ. ಈ ಕಾರ್ಯದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅನಿವಾರ್ಯ- ಡಾ.ಗುಡದಪ್ಪ ಕಸಬಿ
Date:
