ಪ್ರಕೃತಿ ಉಳಿವಿಗಾಗಿ ದೇಶಾದ್ಯಂತ ಜನರನ್ನು ಜಾಗೃತಗೊಳಿಸುವ ಅವಶ್ಯಕತೆ ಇದ್ದು, ಪರಿಸರ ಸಂರಕ್ಷಣೆ ಮಾಡುವುದರಿಂದ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ ಎಂದು ಯೂತ್ ಹಾಸ್ಟೆಲ್ಸ್ ತರುಣೋದಯ ಘಟಕದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ದೇಶಾದ್ಯಂತ ಜಾಥಾ ನಡೆಸುತ್ತಿರುವ ವಿಕ್ರಮಾದಿತ್ಯ ಅವರನ್ನು ಸನ್ಮಾನಿಸಿ ಮಾತನಾಡಿ, ನಿಸ್ವಾರ್ಥದಿಂದ ಮಾನವಕುಲಕ್ಕೆ ಅಗತ್ಯವಾಗಿ ಬೇಕಾಗಿರುವ ವಿಶ್ವ ಶಾಂತಿಗಾಗಿ ಹಾಗೂ ಮನುಷ್ಯನ ದುರಾಸೆಗೆ ಪ್ರಕೃತಿ ಮರುಗುತ್ತಿರುವುದನ್ನು ನೋಡಲಾರದೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡಿಗೆ ಮೂಲಕ ಜನಜಾಗೃತಿ ಮೂಡಿಸಲು ಹೊರಟಿರುವ ವಿಕ್ರಾಮಾದ್ಯಿತ್ಯ ಅವರ ಕಾರ್ಯ ಶ್ಲಾಘನೀಯ. ವಿಕ್ರಮಾದಿತ್ಯ ಅವರ ಶ್ರದ್ಧೆ ಮೆಚ್ಚುವಂತದ್ದು ಎಂದು ತಿಳಿಸಿದರು.
ಯೂತ್ ಹಾಸ್ಟೆಲ್ ಅಸೋಸಿಯೇಷನ್ ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ತಾಂತ್ರಿಕ ಪದವಿ ಹೊಂದಿರುವ ವಿಕ್ರಮಾದಿತ್ಯ ಅವರು ಉತ್ತಮ ಉದ್ಯೋಗ ಪಡೆದು ಜೀವನ ನಡೆಸಬಹುದಾಗಿತ್ತು. ಆದರೆ ಲೋಕ ಕಲ್ಯಾಣದ ಚಿಂತನೆಯೊಂದಿಗೆ ದೇಶ ಪರ್ಯಟಣೆ ಕೈಗೊಂಡಿರುವುದು ಪ್ರಶಂಸನೀಯ ಎಂದು ತಿಳಿಸಿದರು.
ಲಕ್ಷ್ಮೀದೇವಿ ಗೋಪಿನಾಥ್ ಮಾತನಾಡಿ, ಪ್ರಕೃತಿ ಉಳಿವಿನ ಸಂದೇಶದ ಜೊತೆಗೆ ಮಹಿಳಾ ಸಬಲೀಕರಣ, ಭ್ರೂಣಹತ್ಯೆಗಳ ಬಗ್ಗೆಯೂ ಗಮನ ಸೆಳೆಯುವಂತಹ ವಿಚಾರಗಳನ್ನು ಸೇರಿಸಿಕೊಳ್ಳಲಿ ಎಂದು ಆಶಿಸಿದರು.
ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದ ಚೇರ್ಮನ್ ವಾಗೇಶ್ ಮಾತನಾಡಿ, ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಸಂಗಮ ಸ್ಥಳ ನೀಲಗಿರಿಯವರಾದ ಇವರು, ಮಾನವರ ದುರಾಸೆಗೆ ಪ್ರಕೃತಿ ನಶಿಸುತ್ತಿರುವುದನ್ನು ಸಹಿಸಲಾಗದೆ, ತನ್ನ ಕೈಲಾದ ಮಟ್ಟಿಗೆ ದೇಶದ ಜನರನ್ನು ತಲುಪಿ, ಪ್ರಾಕೃತಿಕ ಸಂಪತ್ತು ಉಳಿಯುವುದರಿಂದ ಎಲ್ಲಾ ಪ್ರಾಣಿ ಸಂಕುಲಗಳಿಗೂ ಹಾಗೂ ಮುಂದಿನ ಪೀಳಿಗೆಗೆ ನಾವು ನೀಡಬಹದಾದ ಉತ್ತಮ ಕೊಡಿಗೆಯಾಗುತ್ತದೆ ಎಂಬ ಭಾವನೆಯಿಂದ ಏಕಾಂಗಿಯಾಗಿ ದೇಶ ಸುತ್ತುವ ಕೆಲಸ ಪ್ರಾರಂಭಿಸಿದ್ದಾರೆ. ಇವರಿಗೆ ಎಲ್ಲಾ ಸಂಘ ಸಂಸ್ಥೆಗಳು ಪ್ರೋತ್ಸಾಹಿಸಬೇಕು ಎಂದರು.
ಮೋಹನ್, ಸೆಂತೀಲ್ ವೇಲನ್ ಇದ್ದರು.
ಪ್ರಕೃತಿ ರಕ್ಷಣೆ ಜಾಗೃತಿಗೆ ದೇಶದಾದ್ಯಂತ ಜಾಥಾ ಹೊರಟಿರುವ ವಿಕ್ರಮಾದಿತ್ಯರ ಸಾಹಸ ಅನುಕರಣೀಯ- ಎನ್.ಗೋಪಿನಾಥ್
Date:
