ಗೋಮಾತೆಯ ಗೌರವದ ಅಭಿಯಾನದ ಅಂಗವಾಗಿ ಪಟ್ಟಣದಲ್ಲಿ ಗೋ ಸಂರಕ್ಷಣಾ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ಪಟ್ಟಣದ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಮುಖಾಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಗೋ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಮಾತನಾಡಿ, ಗೋವು ಭಾರತೀಯ ಸಂಸ್ಕೃತಿಯಲ್ಲಿ ಪೂಜ್ಯ ಸ್ಥಾನ ಹೊಂದಿದ್ದು, ಕೃಷಿ ಹಾಗೂ ಗ್ರಾಮೀಣ ಆರ್ಥಿಕತೆಯ ಪ್ರಮುಖ ಭಾಗವಾಗಿದೆ. ಹಾಲು, ಗೊಬ್ಬರ, ಗೋಮೂತ್ರ ಸೇರಿದಂತೆ ಹಲವು ರೀತಿಯಲ್ಲಿ ಮಾನವ ಜೀವನಕ್ಕೆ ಉಪಯುಕ್ತವಾಗಿರುವ ಗೋವುಗಳನ್ನು ಕಾಪಾಡುವುದು ಪ್ರತಿಯೊಬ್ಬ ಹಿಂದುವಿನ ಕರ್ತವ್ಯವಾಗಿದೆ ಎಂದರು.
ಗೋಮಾತೆಯನ್ನು ರಾಷ್ಟ್ರ ಮಾತೆಯೆಂದು ಘೋಷಿಸಬೇಕು. ಗೋ ಸೇವೆಗೆ ಸಂಬಂಧಿಸಿದಂತೆ ಕೇಂದ್ರಿಯ ಮಟ್ಟದಲ್ಲಿ ಸಮಗ್ರ ಕಾನೂನು ಜಾರಿಗೆ ತರಬೇಕು ಹಾಗೂ ದೇಶದಾದ್ಯಂತ ಗೋಹತ್ಯೆಯನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಗೋ ಹತ್ಯೆಯಲ್ಲಿ ತೊಡಗಿದವರಿಗೆ ಜೀವಾವಧಿ ಶಿಕ್ಷೆ ನೀಡಬೇಕು. ಗೋ ಸಾಗಾಣೆಯಲ್ಲಿ ತೊಡಗುವ ವಾಹನಗಳನ್ನು ಶಾಶ್ವತವಾಗಿ ಮುಟ್ಟುಗೋಲು ಹಾಕಬೇಕು. ಪ್ಲಾಸ್ಟಿಕ್ ಕವರ್ಗಳ ಬಳಕೆಯನ್ನು ಕಡ್ಡಾಯವಾಗಿ ನಿಷೇಧ ಹೇರಬೇಕು. ಪ್ರಾಣಿಗಳ ಜಾತ್ರೆಯ ಹೆಸರಲ್ಲಿ ನಡೆಯುವ ಅಕ್ರಮ ಗೋ ಸಾಗಾಣೆ ನಿಯಂತ್ರಿಸಲು ಕೇಂದ್ರದಿಂದ ಕಾನೂನು ರೂಪಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಇದಕ್ಕೂ ಮೊದಲು ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಗೋ ಹತ್ಯೆ ನಿಷೇಧಕ್ಕೆ ಆಗ್ರಹಿಸಿ ಸಹಿ ಸಂಗ್ರಹ ಮಾಡಲಾಯಿತು.
ಸಮಿತಿಯ ಗೌರವಾಧ್ಯಕ್ಷ ಕೆ.ಪ್ರಭಾಕರ್ ರಾಯ್ಕರ್, ಪ್ರಧಾನ ಕಾರ್ಯದರ್ಶಿ ವೀರೇಂದ್ರ ಗೌಡ ಜೇಡಗೇರಿ,ಉಪಾಧ್ಯಕ್ಷ ಶರತ್ ಸ್ವಾಮಿ, ಬಸವರಾಜಪ್ಪ, ರಾಜಣ್ಣ ನಡಹಳ್ಳಿ, ಶಿವನಗೌಡ, ಸುಧೀರ್ ಭಟ್, ಹಾಲಪ್ಪ ಗೌಡ, ಮಂಜುನಾಥ ಆರೇಕೊಪ್ಪ, ಸತೀಶ್, ಸೈಯದ್ ಶಫೀವುಲ್ಲಾ, ಸುರೇಶ್ ನಡಹಳ್ಳಿ, ಚಂದ್ರು ಪಾಟೀಲ್ ಸೇರಿದಂತೆ ಇತರರಿದ್ದರು
