ವ್ಯಕ್ತಿತ್ವ ವಿಕಸನ ಶಿಬಿರವು ಮಕ್ಕಳು ಉತ್ತಮವಾಗಿ ಸಂವಹನ ನಡೆಸಲು ಹಾಗು ಆತ್ಮವಿಶ್ವಾಸದಿಂದ ಮುನ್ನಡೆಯಲು, ಸಾರ್ವಜನಿಕ ಭಾಷಣ, ಸೃಜನಶೀಲ ಬರವಣಿಗೆ, ನೃತ್ಯ, ಕ್ರೀಡೆಗಳ ಬಗ್ಗೆ ಜ್ಞಾನ ಹೆಚ್ಚಿಸಿದೆ ಎಂದು ನವುಲೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮುಖ್ಯಸ್ಥೆ, ರಾಜಯೋಗಿನಿ, ಬ್ರಹ್ಮಕುಮಾರಿ ಸ್ವಾತಿ ಹೇಳಿದರು.
ನವುಲೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಮಕ್ಕಳಿಗೆ ಆಯೋಜಿಸಿರುವ ವ್ಯಕ್ತಿತ್ವ ವಿಕಸನ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸರ್ಟಿಫಿಕೇಟ್ ನೀಡಿ ಮಾತನಾಡಿ, ಪ್ರತಿ ಮಗುವಿನ ವ್ಯಕ್ತಿತ್ವ ವಿಕಸನಕ್ಕೆ ಶಿಬಿರ ಸಹಕಾರಿಯಾಗಿದೆ. ಸಂವಹನಕಾರರು ಮತ್ತು ವಾಗ್ಮಿಗಳು ಕಲಿಕೆಯನ್ನು ಆಕರ್ಷಕವಾಗಿಸಿ ಹಂತ ಹಂತವಾಗಿ ಆತ್ಮವಿಶ್ವಾಸವನ್ನು ಬೆಳೆಸಲು ವ್ಯಕ್ತಿತ್ವ ವಿಕಸನ ಶಿಬಿರ ವಿನ್ಯಾಸಗೊಳಿಸಲಾಗಿತ್ತು ಎಂದು ತಿಳಿಸಿದರು.
ಮಕ್ಕಳಿಗೆ ಸವಾಲಿನ ಸನ್ನಿವೇಶಗಳನ್ನು ಎದುರಿಸುವ ಬಗ್ಗೆ, ಅವರಲ್ಲಿ ಕೌಶಲ್ಯ ವೃದ್ಧಿಸಲು ಪೂರಕವಾದ ಚಟುವಟಿಕೆಗಳನ್ನು ನಡೆಸಲಾಯಿತು. ವೈಯಕ್ತಿಕ ಬೆಳವಣಿಗೆ ಮತ್ತು ಕೌಶಲ್ಯ ಅಭಿವೃದ್ದಿಗೆ ನೆರವಾಗಿದೆ. ಶಿಬಿರವು ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ ಮನೋಭಾವ ಬೆಳೆಸಿದೆ. ಮುಂದಿನ ದಿನಗಳಲ್ಲೂ ಇಂತಹ ಶಿಬಿರಗಳನ್ನು ಏರ್ಪಡಿಸಲಾಗುವುದು ಎಂದು ಹೇಳಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಸಂಸ್ಥೆಯು ನೀಡಿದ ಬೇಸಿಗೆ ವ್ಯಕ್ತಿತ್ವ ವಿಕಸನ ಶಿಬಿರ ಮಕ್ಕಳಲ್ಲಿ ಹೊಸ ವಿಷಯಗಳನ್ನು ಅನ್ವೇಷಿಸಲು, ವೈಯಕ್ತಿಕ ಆಸಕ್ತಿಗಳನ್ನು ಬೆಳೆಸಿಕೊಳ್ಳಲು ಮತ್ತು ಕಡಿಮೆ ಒತ್ತಡದ ವಾತಾವರಣದಲ್ಲಿ ಆತ್ಮವಿಶ್ವಾಸವನ್ನು ಬೆಳೆಸಲು ಸ್ವಾತಂತ್ರö್ಯ ಒದಗಿಸಿದೆ. ಬೇಸಿಗೆ ವ್ಯಕ್ತಿತ್ವ ವಿಕಸನ ಶಿಬಿರ ಮಕ್ಕಳ ಜ್ಞಾನ ವೃದ್ಧಿಗೆ ಸಹಕಾರಿಯಾಗಿದೆ. ಈ ಶಿಬಿರದ ಸಮಯದಲ್ಲಿ ನೀವು ಗಳಿಸಿದ ಕೌಶಲ್ಯಗಳು ಸಕಾರಾತ್ಮಕ ಪ್ರಭಾವ ಬೀರುತ್ತವೆ. ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಸಕ್ರಿಯವಾಗಿ ಸಿದ್ಧರಾಗಿರಿಸಲು ಸಹಾಯ ಮಾಡುತ್ತದೆ. ಕಲಿಕೆಗೆ ಹೆಚ್ಚು ಹೊಂದಿಕೊಳ್ಳುವ ವಿಧಾನವನ್ನು ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.
ತೆರಿಗೆ ಸಲಹೆಗಾರ ಆರ್.ಮನೋಹರ, ಬ್ರಹ್ಮಕುಮಾರಿ ಕಾವ್ಯ, ಈಶ್ವರಿ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.
