ಶ್ರೀರಾಮನ ಆದರ್ಶಗಳು ಎಂದೆಂದಿಗೂ ಪ್ರಸ್ತುತ. ವಿದ್ಯೆಯನ್ನು ಕಲಿಯಬೇಕೆಂದರೆ ಗುರುಗಳನ್ನು ನಾವು ಅನುಸರಿಸಿದಾಗ ಯಶಸ್ಸು ದೊರಕುತ್ತದೆ ಎಂದು ಶ್ರೀ ಶಿವಗಂಗಾ ಯೋಗ ಕೇಂದ್ರದ ಪ್ರಮುಖ ಎಸ್.ಎಸ್.ಜ್ಯೋತಿಪ್ರಕಾಶ್ ಹೇಳಿದರು.
ಶಿವಮೊಗ್ಗ ನಗರದ ಶ್ರೀ ಶಿವಗಂಗಾ ಯೋಗಕೇಂದ್ರದ ರಾಘವ ಶಾಖೆಯಿಂದ ಆಯೋಜಿಸಿದ್ದ ರಾಮನವಮಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವ್ಯಕ್ತಿ ವಿಕಸನಕ್ಕೆ ಇಂತಹ ಭಕ್ತಿ ಮಾರ್ಗವನ್ನು ಎಲ್ಲರೂ ಅನುಸರಿಸಬೇಕು. ಶ್ರೀ ಶಿವಗಂಗಾ ಯೋಗ ಕೇಂದ್ರದ ಗುರುಗಳು ಯೋಗಕ್ಕಾಗಿ ಜೀವನವನ್ನು ಮುಡಿಪಾಗಿಟ್ಟು ಆದರ್ಶವನ್ನು ಮೆರೆಯುತ್ತಿದ್ದಾರೆ ಎಂದು ತಿಳಿಸಿದರು.
ಯೋಗ ಶಿಕ್ಷಕ ಹರೀಶ್ ಮಾತನಾಡಿ, ರಾಮನ ಗುಣಗಳನ್ನು ನಾವು ಅಳವಡಿಸಿಕೊಂಡರೆ ನಮ್ಮ ಜೀವನ ಸುಗಮವಾಗುತ್ತದೆ. ಇಂದಿಗೂ ರಾಮನ ತತ್ವ ಆದರ್ಶ ಗುಣಗಳು ದಾರಿದೀಪವಾಗಿವೆ ಎಂದರು.
ರಾಮ ನವಮಿ ಪ್ರಯುಕ್ತ ರಾಘವ ಶಾಖೆಯ ಯೋಗ ಶಿಕ್ಷಣಾರ್ಥಿಗಳಿಂದ ಶ್ರೀರಾಮನಿಗೆ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿ ಭಜನೆಗಳನ್ನು ಹಾಡಿ ಯೋಗ ಪ್ರಾಣಾಯಾಮ ಧ್ಯಾನದ ಅಭ್ಯಾಸದಿಂದ ಶ್ರೀರಾಮನಿಗೆ ಭಕ್ತಿಯನ್ನು ಸಮರ್ಪಿಸಲಾಯಿತು.
ಯೋಗ ಶಿಕ್ಷಕ ಜಿ.ಎಸ್.ಓಂಕಾರ್ ಮಾತನಾಡಿ ಸಂಸ್ಕಾರ, ಸನ್ಮಾರ್ಗ, ಆಧ್ಯಾತ್ಮ ಹಾಗೂ ರಾಮ ನವಮಿಯ ಮಹತ್ವ ತಿಳಿಸಿಕೊಟ್ಟರು. ಹಿರಿಯ ಯೋಗಪಟು ಸುಬ್ರಮಣಿ ಅವರು ಯೋಗ ಮಾಡುವ ಸ್ಥಳದಲ್ಲಿ ಫೋಟೋವನ್ನು ಅನಾವರಣಗೊಳಿಸಿದರು.
ಶಿಕ್ಷಕ ವಿಜಯ ಕೃಷ್ಣ ಅವರು ಶ್ರೀರಾಮನಿಗೆ ಭಕ್ತಿಯಿಂದ ಪ್ರಾರ್ಥಿಸಿದರು. ಪಾನಕ, ಕೋಸಂಬರಿ ಫಲ ಸಿಹಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಸುಜಾತ, ಗಾಯತ್ರಿ, ಶ್ರೀನಿವಾಸ್, ನರಸೋಜಿರಾವ್, ಮಹೇಶ್, ಸೌಮ್ಯ, ಲತಾ, ಶೈಲಜಾ, ಶೋಭಾ, ದೀಪಕ್ ಹಾಗೂ ಯೋಗಪಟುಗಳು ಉಪಸ್ಥಿತರಿದ್ದರು.
