Friday, March 13, 2026
Friday, March 13, 2026

Klive Special Article ಶಿಸ್ತು ಬದುಕಿನ ನಿತ್ಯ ರೂಢಿಯಾಗಲಿ ಲೇ: ಪುಟ್ಟಮ್ಮ ಶಿವಾನಿ ಶಿವಮೊಗ್ಗ

Date:

Klive Special Article ಗಿರೀಶ್‌ ಕಾರ್ನಾಡರ ತಲೆದಂಡ ನಾಟಕದಲ್ಲಿ ಒಂದು ಪ್ರಸಂಗ ಬರುತ್ತದೆ. ಬಿಜ್ಜಳ ಮಹಾರಾಜರು ವಿಜಯ ಯಾತ್ರೆಗೆ ಹೋಗಿರುತ್ತಾರೆ. ಆ ಸಂದರ್ಭದಲ್ಲಿ ಅವರ ಮಗ ಸೋವಿದೇವ ಭಂಡಾರದಲ್ಲಿನ ರೊಕ್ಕ ವ್ಯತ್ಯಾಸವಾಗಿದೆಯೆಂದು ಹಣಕಾಸು ಮಂತ್ರಿಯಾಗಿದ್ದ ಬಸವಣ್ಣನವರು ಊರಲ್ಲಿ ಇಲ್ಲದ ವೇಳೆ ಅವರ ವಿರುದ್ದ ವಿಚಾರಣೆ ಆರಂಭಿಸುತ್ತಾನೆ. ನಂತರ ಬಸವಣ್ಣನವರು ಊರಿಗೆ ಬರುತ್ತಾರೆ, ಬಂದವರೆ ವಿಷಯ ತಿಳಿದು ಅಲ್ಲಿ ನೆರೆದಿದ್ದ 15 ಸಾವಿರ ಮಂದಿಯ ಕಣ್ಣೆದುರು ಸೋವಿದೇವನನ್ನು ಕೈ ಹಿಡಿದು ಭಂಡಾರದೊಳಗೆ ಕರೆದೊಯ್ದು ಕುಳ್ಳಿರಿಸಿ ಲೆಕ್ಕ ಪರಿಶೀಲನೆ ಮಾಡಲು ಕೇಳಿಕೊಳ್ಳುತಾರೆ.
ಸೋವಿದೇವ ಅಲ್ಲಿಯೇ 10 ದಿನ ಕುಳಿತು ಲೆಕ್ಕ ಪರಿಶೀಲಿಸುತ್ತಾನೆ. ಅಷ್ಟರಲ್ಲಿ ಭಿಜ್ಜಳಮಹಾರಾಜರು ವಿಜಯ ಯಾತ್ರೆಯಿಂದ ಅರಮನೆಗೆ ಹಿಂತಿರುಗುತ್ತಾರೆ. ಹಿಂತಿರುಗಿದ ನಂತರ ವಿಷಯ ತಿಳಿದು ತನ್ನ ಮಗನನ್ನು ಕರೆಸಿ ವಿಚಾರಣೆ ಮಾಡುತ್ತಾರೆ. ಮತ್ತು ಅವನನ್ನು ಕೇಳುತ್ತಾರೆ: ಒಂದು ಒಡಕು ಕವಡಿ ಹೆಚ್ಚು ಕಮ್ಮಿ ಆಗಿತ್ತಾ? ಒಂದು ದುಗ್ಗಾಣಿ ಏರು ಪೇರು ಆಗಿತ್ತಾ? ಅದು ಬಸವಣ್ಣನ ಲೆಕ್ಕ!; ಬ್ರಹ್ಮಲಿಖಿತ! ಒಮ್ಮೆ ಬರೆದರೆ ಒಂದಂಕಿ ಅಳಗ್ಯಾಡೂದಿಲ್ಲ! ಎನ್ನುತ್ತಾರೆ.
ಇದನ್ನು ಗಮನಿಸಿದರೆ, ಬಸವಣ್ಣನವರು ಸಾರ್ವಜನಿಕ ಸೇವೆಯಲ್ಲಿ ಎಂಥಹಾ ಶಿಸ್ತು ಪಾಲಿಸುತ್ತಿದ್ದರು ಎಂಬುದು ಸ್ಪಷ್ಟವಾಗುತ್ತದೆ.
ಭಾರತ ರತ್ನ ಸರ್‌ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಶಿಸ್ತು ವಿಶ್ವವಿಖ್ಯಾತ! ಒಂದು ಮೇಣದಬತ್ತಿ ಹಚ್ಚಿಕೊಂಡು ಸರ್ಕಾರಿ ಕೆಲಸ ನಿರ್ವಹಿಸಿದ ನಂತರ ಅದನ್ನು ನಂದಿಸಿ ಬೇರೊಂದು ಮೇಣದಬತ್ತಿ ಹಚ್ಚಿಕೊಂಡು ತನ್ನ ಸ್ವಂತ ಕೆಲಸ ನಿರ್ವಹಿಸುತ್ತಿದ್ದ ವಿಶ್ವೇಶ್ವರಯ್ಯನವರು ಶಿಸ್ತಿನ ದಂತಕಥೆಯಾಗಿದ್ದರು! ತನ್ನ ವಯಕ್ತಿಕ ಜೀವನದಲ್ಲಿ, ಸಾರ್ವಜನಿಕ ಸೇವೆಯಲ್ಲಿ ಎಲ್ಲದರಲ್ಲೂ ಅವರದು ಬಹಳ ಶಿಸ್ತು! ಅವರು ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್‌ ಆಗಿದ್ದಾಗ ಕಚೇರಿಯಲ್ಲಿ ಲಕೋಟೆಗೆ ಪತ್ರ ಹಾಕಿ ಹೇಗೆ ಗಮ್‌ ಅಂಟಿಸಬೇಕು ಮತ್ತು ಸ್ಟಾಂಪನ್ನು ಹೇಗೆ ಅಂಟಿಸಬೇಕು ಎಂಬುದನ್ನು ರವಾನೆ ಗುಮಾಸ್ತ ರನ್ನು ತನ್ನ ಟೇಬಲ್‌ಗೆ ಕರೆಸಿ, ಗಮ್‌ ಮತ್ತು ಸ್ಟಾಂಪ್‌ ತರಿಸಿ ಅಂಟಿಸಿ ತೋರಿಸಿದ್ದರಂತೆ!. ಕಛೇರಿಯ ಎಲ್ಲಾ ನೌಕರರೂ ಸಮಯಕ್ಕೆ ಸರಿಯಾಗಿ ಕಛೆರಿಗೆ ಹಾಜರಾಗಬೇಕೆಂಬುದು ಶಿಸ್ತು! ಅದಲ್ಲದೆ ಎಲ್ಲರೂ ಶುಚಿಯಾದ ಬಟ್ಟೆ ಧರಿಸಿಯೇ ಕಛೆರಿಗೆ ಬರಬೇಕು, ತಲೆಕೂದಲನ್ನು ಬಾಚಿಕೊಂಡು ಬರಬೇಕು ….. ಇತ್ಯಾದಿ ಶಿಸ್ತೂ ಸಹ ಅವರ ಕಛೇರಿಯಲ್ಲಿದ್ದವು. ಒಂದು ದಿನ ಅವರ ಕಛೇರಿಯ ಒಬ್ಬ ನೌಕರ ಬೂಟುಗಳಿಗೆ ಪಾಲೀಶ್ ಇಲ್ಲದೆ ಕಛೇರಿಗೆ ಬಂದಿದ್ದರಂತೆ! . ವಿಶ್ವೇಶ್ವರಯ್ಯನವರು ಇದನ್ನು ಗಮನಿಸಿ ಆ ನೌಕರನಿಗೆ ½ ದಿನದ ರಜೆ ಕೊಟ್ಟು ಬೂಟು ಪಾಲೀಶ್‌ ಮಾಡಿಕೊಂಡು ತೊಟ್ಟು ನಾಳೆ ಕಛೆರಿಗೆ ಬರುವಂತೆ ತಿಳಿಸಿದರಂತೆ!
Klive Special Article ಈ ಕಾಲದಲ್ಲಿಯೂ ವಿಶ್ವೇಶ್ವರಯ್ಯನವರಷ್ಟಲ್ಲದಿದ್ದರೂ ಸ್ವಲ್ಪ ಕಡಿಮೆಯಾದರೂ ಸಾರ್ವಜನಿಕ ಸೇವೆಯಲ್ಲಿ ಸಾರ್ವಜನಿಕ ಬದುಕಿನಲ್ಲಿ ಶಿಸ್ತು ಇರುವವರು ಕೆಲವರನ್ನು ನಾವು ಕಾಣುತ್ತೇವೆ. ವೇಳೆಗೆ ಸರಿಯಾಗಿ ಕಛೇರಿಗೆ/ ಸಭೆ ಸಮಾರಂಭಗಳಿಗೆ ಹಾಜರಾಗುವುದು, ಸಮಯದ ಮಿತಿಯೊಳಗೇ ಕೆಲಸ ಮಾಡುವುದು, ಸಂಬಳ/ ಸಂಭಾವನೆಯ ಹೊರತು ಬೇರೇನನ್ನೂ ಅಪೇಕ್ಷಿಸದಿರುವುದು…… ಇತ್ಯಾದಿ ಶಿಸ್ತು ಅಳವಡಿಸಿಕೊಂಡಿರುವವರನ್ನು ನಾವು ನೋಡುತ್ತೇವೆ. ಆದರೆ ಅಂಥವರ ಸಂಖ್ಯೆ ತೀರಾ ಕಡಿಮೆ ಎನ್ನಬಹುದು.
ವಯಕ್ತಿಕ ಜೀವನದಲ್ಲಿ ಹಾಗೆಯೇ ಸಾರ್ವಜನಿಕ ಬದುಕಲ್ಲಿ ಶಿಸ್ತು ಎಲ್ಲರಿಗೂ ಬೇಕು. ಚಿಕ್ಕ ಉದಾಹರಣೆ ಕೊಡಬೇಕೆಂದರೆ ಯಾವ ವಸ್ತುವನ್ನು ತಾನು ಎಲ್ಲಿಂದ ತೆಗೆದುಕೊಂಡಿದ್ದೆನೋ ಕೆಲಸವಾದ ನಂತರ ಅಲ್ಲಿಯೇ ಇಡಬೇಕೆಂಬ ಶಿಸ್ತನ್ನು ಅಳವಡಿಸಿಕೊಂಡರೆ ಆ ವಸ್ತುವನ್ನು ಹುಡುಕಲು ಅನಾವಶ್ಯಕವಾಗಿ ಸಮಯ ಹಾಳು ಮಾಡುವುದು ತಪ್ಪುತ್ತದೆ. ಆರ್ಥಿಕ ಶಿಸ್ತು ಇಲ್ಲದೆ, ಯೋಜನೆ ಇಲ್ಲದೆ ದುಂದು ಮಾಡಿದರೆ ಅವಶ್ಯಕತೆ ಇದ್ದಾಗ ಹಣವಿಲ್ಲದೇ ವ್ಯಥೆಪಡುವುದನ್ನು ತಪ್ಪಿಸಬಹುದು. ಹಾಗೆಯೇ ಮಾನವೀಯ ಸಂಬಂಧಗಳಲ್ಲಿ ಶಿಸ್ತು ಅಳವಡಿಸಿಕೊಂಡರೆ ಜೀವನ ಹಸನಾಗುತ್ತದೆ.
ಸಾರ್ವಜನಿಕ ಜೀವನದಲ್ಲಿ ಶಿಸ್ತಿನಿಂದ ನಡೆದುಕೊಳ್ಳುವುದು ಅತ್ಯಗತ್ಯ. ಸರ್ಕಾರಿ ಹಾಗೂ ಸಾರ್ವಜನಿಕ ಸೇವೆಯಲ್ಲಿ ನಿಯೋಜಿತರಾಗಿರುವವರ ಶಿಸ್ತನ್ನು ಪಾಲಿಸಲೇಬೇಕು. ಶಿಸ್ತು ಪಾಲಿಸದಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ನಾಗರೀಕ ಸೇವಾನಿಯಮದಲ್ಲೇನೋ ಇದೆ. ಇಂದಿನ ನಾಗರೀಕಸೇವಾ ಸ್ಥಳಗಳಲ್ಲಿ ಅಪೇಕ್ಷಣೀಯ ಶಿಸ್ತು ಪಾಲನೆಯಾಗುತ್ತಿದೆಯೇ ಎಂದು ನೋಡಿದರೆ ವಿಷಾದವೆನ್ನಿಸುತ್ತದೆ. ಯಾವ ಕೆಲಸಕ್ಕೆ ಹೋದರೂ ನಾಳೆ ಬನ್ನಿ, ವಾರಬಿಟ್ಟು ಬನ್ನಿ, ನಮಗೆ ತುಂಬಾ ಕೆಲಸವಿದೆ, ಇದು ಹಾಗಲ್ಲ, ಇದು ಆಗುವುದಿಲ್ಲ, ಇದು ಇಲ್ಲಲ್ಲ, ನೀವು ಅಲ್ಲಿ ಅರ್ಜಿ ಕೊಡಿ ಎಂದು ಅಲೆದಾಡಿಸುವುದು ಸರ್ವೆ ಸಾಮಾನ್ಯವಾಗಿದೆ. ಇದು ಆಗಬಾರದೆಂದು ಸಕಾಲ, ಮಾಹಿತಿ ಹಕ್ಕು ಅಧಿನಿಯಮ ಮುಂತಾದ ಕಾನೂನುಗಳು ಬಂದಿದ್ದರೂ ಜನ ಸಾಮಾನ್ಯರ ಅಲೆದಾಟ ಮಾತ್ರ ತಪ್ಪಿಲ್ಲ. ನಮ್ಮ ಕೆಲಸದ ಕೋರಿಕೆಯ ಅರ್ಜಿ ಕೊಟ್ಟ ಬಳಿಕ ಅರ್ಜಿದಾರ ಮತ್ತೇಕೆ ಬರಬೇಕು? ಕಛೇರಿ ನಿಯಮಾವಳಿ ಪ್ರಕಾರ ನಿಶ್ಚಿತ ಸಮಯದೊಳಗೆ ಕೆಲಸ ಮಾಡಬೇಕು. ಇಲ್ಲವೇ ಹಿಂಬರಹ ನೀಡಬೇಕು. ವಾರ ಬಿಟ್ಟು ಬಂದರೆ ಕೆಲಸ ಆಗಿರುತ್ತದೆಯೇ? ಅನುಮಾನ!. ಬೇಸತ್ತು ಕಛೇರಿ ಮುಖ್ಯಸ್ತರಿಗೆ ತಿಳಿಸಿದರೆ ಆಗಲಾದರೂ ಕೆಲಸವಾಗುವುದೇ? ಆನೇಕ ವೇಳೆ ಅದು ಗೋಜಲಾಗುವುದೇ ಹೆಚ್ಚು! ಕೆಲಸವಾದರೆ ಅಮ್ಮ ಅದೃಷ್ಟ!. ಸಮಯದೊಳಗೆ ನಮ್ಮ ಕೆಲಸವಾಗಬೇಕೆಂದರೆ ರಾಜಕಾರಣಿಗಳ ಮೂಲಕ ಹೇಳಿಸುವುದು ಅಥವಾ ಬೇರೆಯದೇ ಕಸರತ್ತು ಮಾಡಬೇಕಾದ್ದು ಈಗೀಗ ಅನಿವಾರ್ಯವಾಗಿದೆ. ಇಂಥಾ ಮುಂದುವರಿದ ಕಾಲದಲ್ಲೂ ಸಾರ್ವಜನಿಕ ಸೇವೆಯಲ್ಲಿ ಪಾರದರ್ಶಕತೆ ಇಲ್ಲದಿರುವುದು ಶೋಚನೀಯ! ಇಂಥಾ ಅಧಿಕಾರಿಯಿಂದ ನಮ್ಮ ಕೆಲಸ ಸಲೀಸಾಗಿ ಆಯಿತು ಎಂದು ಕೇಳಿದ ಉಧಾಹರಣೆಗಳು ಕಡಿಮೆ!. ಈ ಎಲ್ಲಾ ಮಾತುಗಳೂ ಯಾರೊಬ್ಬರನ್ನೋ ದೂರುವುದಕ್ಕಲ್ಲ ಬದಲಾಗಿ ಇಂದಿನ ವಸ್ತುಸ್ಥಿತಿಯೇ ಹಾಗಿದೆ. ಪ್ರತಿಯೊಬ್ಬರಿಗೂ ತನ್ನ ಬದುಕಿನ ಮೌಲ್ಯಗಳ ಬಗ್ಗೆ ಗಮನವಿರಬೇಕು. ಬದುಕಿನ ಅರ್ಥ ಗುರಿ, ಉದ್ದೇಶ ಸಾಧನೆಗಳ ಅರಿವಿರಬೇಕು. ನನಗೆ ದೊರೆತಿರುವ ಈ ಪವಿತ್ರ ನೌಕರಿಯಿಂದ ನಾನು ನನ್ನ ಬದುಕು ಮತ್ತು ಜೀವನವನ್ನು ಎಷ್ಟು ಚೆನ್ನಾಗಿ ನಡೆಸಿಕೊಂಡು ಹೋಗಬಲ್ಲೆ; ಸಮಾಜಕ್ಕೆ ಎಷ್ಟು ಸಹಾಯ ಮಾಡಬಲ್ಲೆ ಎಂದು ಯೋಚಿಸಬೇಕು. ಯಾವ ವಿಶಿಷ್ಟ ಕೆಲಸವನ್ನು ನಿಯಮಾನುಸಾರ ಕಾಲಮಿತಿಯೊಳಗೆ ಸರಿಯಾಗಿ ಮಾಡಲು ಯಾವರೀತಿಯ ಶಿಸ್ತು ಅಳವಡಿಸಿಕೊಳ್ಳಬೇಕು ಎಂಬುದು ಅನುಭದಿಂದ; ಇತರರ ಅನುಭವದಿಂದ; ಮಹನೀಯರ ಜೀವನಕ್ರಮದ ಅದ್ಯಯನದಿಂದ;ಸ್ನೇಹಿತರ/ಸಂಬಂಧಿಗಳ/ಹಿತೈಶಿಗಳ/ವೃತ್ತಿಬಾಂಧವರ/ ಮೇಲಾಧಿಕಾರಿಗಳ ಸಲಹೆ, ಸೂಚನೆ, ಸಹಕಾರದಿಂದಲೂ ಅರಿಯಬಹುದು.
ಶಿಸ್ತು ನಮ್ಮ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಲು ಸಹಕಾರಿ!. ಆದರೆ ಅತಿಯಾದ, ಹಾಗೂ ಅನಾವಶ್ಯಕವಾದ ಶಿಸ್ತಿನಿಂದ ಇತರರ ಜೀವನವನ್ನು ಗೋಳು ಹೊಯ್ದುಕೊಳ್ಳುವುದನ್ನು ನಾವು ನೋಡಿದ್ದೇವೆ. ಅಷ್ಟಲ್ಲದೇ ಅತಿಯಾದ ಶಿಸ್ತಿನಿಂದ ಅನೇಕರು ತಮ್ಮ ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ. ಅದು ಸರಿಯಲ್ಲ. ಶಿಸ್ತು ನಮ್ಮ ಜೀವನವನ್ನು ಅಚ್ಚುಕಟ್ಟು ಮಾಡಬೇಕೇ ವಿನ: ಇಕ್ಕಟ್ಟು ಮಾಡಬಾರದು.

ಪುಟ್ಟಮ್ಮ ಶಿವಾನಿ
ನಂ 80 ಶಿವಾನಿ 
 ಲಾಲ್‌ ಬಹದ್ದೂರ್‌ ಶಾಸ್ತ್ರೀ ನಗರ 2 ನೇ ಮೆಯಿನ್
ಸೌಳಂಗ ರಸ್ತೆ,  ಶಿವಮೊಗ್ಗ 577204
 E mail: puttammat415@gmail.com

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S. Kumar Bangarappa ರಾಜ್ಯದಲ್ಲಿ ಬ್ಯಾಡ್ಮಿಂಟನ್ ಕ್ಷೇತ್ರ ಇನ್ನಷ್ಟು ಎತ್ತರಕ್ಕೇರಲಿ : ಎಸ್. ಕುಮಾರ್ ಬಂಗಾರಪ್ಪ

S. Kumar Bangarappa ಗ್ರಾಮೀಣ ಪ್ರದೇಶಗಳಲ್ಲಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟ...

DC Shivamogga ಮಾ.18 ರಿಂದ ಎಸ್‌ಎಸ್‌ಎಲ್ ಪರೀಕ್ಷೆ-ಸಕಲ ಸಿದ್ದತೆಗೆ ಸೂಚನೆ : ಪ್ರಭುಲಿಂಗ ಕವಳಿಕಟ್ಟಿ

DC Shivamogga ವಿದ್ಯಾರ್ಥಿಗಳ ಜೀವನದ ದಿಸೆಯನ್ನು ನಿರ್ಧರಿಸುವ ಮುಖ್ಯ ಘಟ್ಟವಾದ ಎಸ್‌ಎಸ್‌ಎಲ್‌ಸಿ...

ಶಿವಮೊಗ್ಗದ ರಾಯಲ್ ಆರ್ಕಿಡ್ ನಲ್ಲಿ ಅವಿರ ಉಡುಪು ಸಂಸ್ಥೆಯ ಯುಗಾದಿ ಸೀರೆ ಹಬ್ಬ

ಶಿವಮೊಗ್ಗದ ರಾಯಲ್ ಆರ್ಕಿಡ್ ನಲ್ಲಿ ಚಿತ್ರನಟಿ ಕಾರುಣ್ಯ ಗೌಡರ ಅವಿರ ಉಡುಪು...

“ನೈಸರ್ಗಿಕ ಮತ್ತು ಸಾವಯವ ಕೃಷಿ” ಕುರಿತಾದ ಪ್ರಾದೇಶಿಕ ವಿಚಾರಸಂಕಿರಣ’ಯಶಸ್ವಿ

Regional Organic and Natural Farming Center ಪ್ರಾದೇಶಿಕ ಸಾವಯವ ಮತ್ತು...