International Women’s Day ಪ್ರತಿಯೊಂದು ದಿನವು, ಮಹಿಳೆಯರ ಸಾಧನೆಯನ್ನು ಗುರುತಿಸುವಂತಹ ದಿನವಾಗಬೇಕು ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಡಾ. ಅರುಂಧತಿ ಚಂದ್ರಶೇಖರ್ ಹೇಳಿದರು.
“ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ” ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಮಹಿಳಾ ಘಟಕದ ವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ, ‘ಕೊಟ್ಟು ಪಡೆದುಕೊಳ್ಳೋಣ’ ಎಂಬ ಘೋಷ ವಾಕ್ಯದೊಂದಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸುತ್ತಿದ್ದೇವೆ. ಮಹಿಳೆಯರಿಗೆ ಗೌರವ, ಅವಕಾಶ, ಧ್ವನಿ ಮತ್ತು ಸುರಕ್ಷತೆ ಕೊಡಬೇಕಿದೆ. ಜಾಸ್ತಿ ಕೊಟ್ಟಷ್ಟು ನಮ್ಮ ಸಮಾಜ ಪಡೆದುಕೊಳ್ಳುವುದು ಹೆಚ್ಚುತ್ತದೆ ಎಂದು ತಿಳಿಸಿದರು.
ಭಾರತೀಯ ವೈದ್ಯಕೀಯ ಸಂಘದಂತಹ ಸಂಸ್ಥೆಗಳು ಮತ್ತು ಎಲ್ಲ ವೈದ್ಯರು, ಮಹಿಳೆಯರ ಆರೋಗ್ಯದ ವಿಷಯಕ್ಕೆ ಮತ್ತಷ್ಟು ಕೊಡುಗೆ ನೀಡಲು ಸಾಧ್ಯವಿದೆ. ಕೌಟುಂಬಿಕ ದೌರ್ಜನ್ಯ ಅನುಭವಿಸುವ ಮಹಿಳೆಯರು ಸಹಾಯಕ್ಕಾಗಿ ಮೊದಲು ಧಾವಿಸುವುದೇ ವೈದ್ಯರ ಬಳಿಗೆ. ಇವರಿಗೆ ನೆರವನ್ನು ಸಕಾಲಕ್ಕೆ ನೀಡುವುದು ವೈದ್ಯರಾದ ಎಲ್ಲರ ಕರ್ತವ್ಯ ಎಂದು ಹೇಳಿದರು.
ಭಾರತದಲ್ಲಿ ಮಹಿಳೆಯರು ಗ್ರಾಮೀಣ ಮಟ್ಟದಲ್ಲಿ ಸಮಾಜದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಅದರ ಅತ್ಯುತ್ತಮ ಉದಾಹರಣೆ ಆಶಾ ಕಾರ್ಯಕರ್ತೆಯರು. ಇವರು ಗ್ರಾಮ ಮತ್ತು ಆರೋಗ್ಯ ವ್ಯವಸ್ಥೆಯ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಾರೆ. ಆಶಾ ಕಾರ್ಯಕರ್ತೆಯರು ಗ್ರಾಮೀಣ ಸಮುದಾಯದಲ್ಲಿ ಆರೋಗ್ಯ ಸುಧಾರಣೆಗೆ ಮಾತ್ರವಲ್ಲದೆ ಮಹಿಳಾ ಸಬಲೀಕರಣಕ್ಕೂ ಸಹಕಾರಿಯಾಗಿದ್ದಾರೆ. ಅವರ ಪರಿಶ್ರಮದಿಂದ ಗ್ರಾಮಗಳಲ್ಲಿ ಆರೋಗ್ಯ ಜಾಗೃತಿ ಮತ್ತು ಸಮುದಾಯದ ಭಾಗವಹಿಸುವಿಕೆ ಹೆಚ್ಚಾಗಿದೆ ಎಂದು ತಿಳಿಸಿದರು.
ವೈದ್ಯರಾಗಿದ್ದಂತಹ ನನ್ನ ಪಾಲಕರು ಶಿವಮೊಗ್ಗ ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂಬುದು ಹೆಮ್ಮೆಯ ಸಂಗತಿ ಎಂದರು. ಭಾರತೀಯ ಆಡಳಿತ ಸೇವೆಯಲ್ಲಿ ಮಹಿಳೆಯರ ಸಮಾನತೆಗೆ ಯಶಸ್ವಿಯಾಗಿ ಹೋರಾಡಿದ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಪ್ರಥಮ ಮಹಿಳೆ ಸಿ.ಬಿ.ಮುತ್ತಮ್ಮ ಅವರ ಕೊಡುಗೆ ಸ್ಮರಿಸಿದರು. ಐಎಂಎ ಶಿವಮೊಗ್ಗ ವರ್ಷವಿಡೀ ನಡೆಸುತ್ತಿರುವ ವಿವಿಧ ಕಾರ್ಯಕ್ರಮಗಳಾದ ಮಹಿಳೆಯರ ಆರೋಗ್ಯದ ಕುರಿತು ವಿವಿಧ ಮಾಧ್ಯಮಗಳ ಮೂಲಕ ಮಾಹಿತಿ, ಅಗತ್ಯವಿರುವಲ್ಲಿ ಆರೋಗ್ಯ ತಪಾಸಣಾ ಶಿಬಿರಗಳು, ಶಾಲಾ ಹೆಣ್ಣು ಮಕ್ಕಳಿಗೆ ನೈರ್ಮಲ್ಯ ಕುರಿತು ನಡೆಸುತ್ತಿರುವ ಕಾರ್ಯಕ್ರಮ ಶ್ಲಾಘನೀಯ ಎಂದರು.
International Women’s Day ಐಎಂಎ ಮಹಿಳಾ ಸದಸ್ಯರಾದ ಡಾ. ರಕ್ಷಾ ರಾವ್, ಡಾ. ವಿದ್ಯಾ ರಮೇಶ್ ಮತ್ತು ಡಾ. ಅಖಿಲಾ ಅವರಿಂದ ಚಾರಣ, ಕ್ರೀಡೆ, ಹಣಕಾಸು ವಿಷಯಗಳ ಬಗ್ಗೆ ಪ್ರಸ್ತುತಿ, ಕನ್ನಡ, ಹಿಂದಿ ಸಿನಿತಾರೆಯರ ಶೈಲಿ ಅನುಕರಿಸಿ ಅವರನ್ನು ವೇದಿಕೆಯ ಮೇಲೆ ಮರುಕಲ್ಪಿಸಲಾಯಿತು.
ಐನಬೈಲು ಪರಮೇಶ್ವರ ಹೆಗಡೆ ಅವರ ನಿರ್ದೇಶನದಲ್ಲಿ ‘ಶತಗಜಾತ್ರಾಣಿ’ ಯಕ್ಷಗಾನ ಪ್ರಸಂಗವನ್ನು ಮಹಿಳಾ ಸದಸ್ಯೆಯರು ಸುಂದರವಾಗಿ ಅಭಿನಯಿಸಿದರು.
ಐಎಂಎ ಶಿವಮೊಗ್ಗ ಶಾಖೆ ಅಧ್ಯಕ್ಷ ಡಾ. ಕೆ.ಆರ್.ರವೀಶ್, ಕಾರ್ಯದರ್ಶಿ ಡಾ. ಕೆ.ಎಸ್.ಶುಭ್ರತಾ, ಖಚಾಂಚಿ ಡಾ. ಎಚ್.ಎಲ್.ಶಶಿಧರ್, ಮಹಿಳಾ ಘಟಕದ ಅಧ್ಯಕ್ಷೆ ಡಾ. ಕೌಸ್ತುಭಾ ಅರುಣ್, ಕಾರ್ಯದರ್ಶಿ ಡಾ. ಶ್ವೇತಾ ಬಾದಾಮಿ, ಹಿರಿಯ ಕಿರಿಯ ಸದಸ್ಯರು, ಕುಟುಂಬ ವರ್ಗದವರು ಉಪಸ್ಥಿತರಿದ್ದರು.
