ನಾಯಕತ್ವ ಗುಣಗಳನ್ನು ಸ್ವಯಂ ಸೇವಕರು ಹೊಂದುವಲ್ಲಿ ನಿರಂತರ ಪರಿಶ್ರಮ ಮತ್ತು ಶ್ರದ್ಧೆ ಬಹಳ ಮುಖ್ಯ ಎಂದು ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಡಾ. ಡಿ.ಬಿ.ಶಿವರುದ್ರಪ್ಪ ಹೇಳಿದರು.
ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ 1, 2 ಮತ್ತು 3ರ ವತಿಯಿಂದ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವಲ್ಲಿಯೂ ಶಿಬಿರ ಮಹತ್ತರ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಗ್ರಾಮದ ಮುಖಂಡರಾದ ರಾಜಿ ಪ್ರಕಾಶ್ ಮಾತನಾಡಿ, ಎನ್ಎಸ್ಎಸ್ನಲ್ಲಿ ಸಕ್ರಿಯವಾಗಿರುವ ವಿದ್ಯಾರ್ಥಿಗಳು ಜೀವನದಲ್ಲಿ ಗುರಿಯನ್ನು ಮುಟ್ಟುತ್ತಾರೆ ಎಂದು ವಿವರಿಸಿದರು.
ಸ್ವಯಂ ಸೇವಕ ಶಿವಮೊಗ್ಗ ಜಿಲ್ಲಾ ಕೇಂದ್ರದ ಸಂಜು ಮಾತನಾಡಿ, ಪದವಿ ನಂತರ ಉದ್ಯೋಗ ಅವಕಾಶಗಳಿಗೆ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕೇಂದ್ರ ಸಂಪರ್ಕಿಸಬೇಕು. ಅದರಿಂದ ಭವಿಷ್ಯವನ್ನು ಕಟ್ಟಿಕೊಳ್ಳಬಹುದು ಎಂದರು.
ರಾಷ್ಟ್ರೀಯ ಸೇವಾ ಯೋಜನೆ ಪ್ರಯೋಜನಗಳು ವಿಷಯ ಕುರಿತು ಮಾಲತೇಶ್ ಮಾತನಾಡಿ, ವಿದ್ಯಾರ್ಥಿಗಳು ನಿರ್ದಿಷ್ಟ ಉದ್ದೇಶ ಗುರಿಯನ್ನು ಇಟ್ಟುಕೊಂಡು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಹೇಳಿದರು.
ಧ್ವಜಾರೋಹಣ ಕಾರ್ಯಕ್ರಮವನ್ನು ಗ್ರಾಮದ ಮುಖಂಡ ವಿದ್ಯಾಧರ್ ನೆರವೇರಿಸಿದರು. ಸ್ವಯಂ ಸೇವಕರು ಸಮಾಜಕ್ಕೆ ಮಾದರಿಯಾಗುತ್ತಾರೆ ಎಂದು ಪ್ರಶಂಶಿಸಿದರು. ಚಿತ್ರ ವಿಶ್ಲೇಷಣೆಯಲ್ಲಿ ಎಐ ಕುರಿತು ಮಾಹಿತಿ ನೀಡಲಾಯಿತು. ಕೋಹಳ್ಳಿ ಮುಖ್ಯ ಬೀದಿಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಗಣಿತ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರು ಕೆ ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕಿ ನಂದಿತಾ, ಡಿವಿಎಸ್ ಸಂಜೆ ಕಾಲೇಜಿನ ಮಂಜಪ್ಪ ಜಿ. ಕೆ, ಮನು ಎಸ್ ಮೂರ್ತಿ, ಮಂಜಪ್ಪ ಮತ್ತು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
