Shimoga News ನೈಜ ಪ್ರಪಂಚವನ್ನು ಕಾಣದೆ ಮೊಬೈಲ್ ಮೂಲಕವೇ ಜಗತ್ತನ್ನು ಅರ್ಥ ಮಾಡಿಕೊಳ್ಳುವ ಇಂದಿನ ಯುವ ಜನತೆಯ ಹಾದಿ ತಪ್ಪಿಸಿ ಲಾಭ ಮಾಡಿಕೊಳ್ಳುವ ಕಂಪನಿಗಳ ಪ್ರವೃತ್ತಿಯು ಪ್ರಸ್ತುತ ಔದ್ಯಮಿಕ ರಂಗದಲ್ಲಿ ಅಧಿಕವಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಶಿಕ್ಷಣ ತಜ್ಞ ಹಾಗೂ ತತ್ವಜ್ಞ ಎ.ಹೆಚ್. ಸಾಗರ್ ಆತಂಕ ವ್ಯಕ್ತಪಡಿಸಿದರು.
ಅವರಿಂದು ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್ ನ ಬಿಸಿಎ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಕಲಿತ ವಿಷಯದಿಂದ ಬೇರೆ ವಿಷಯಗಳ ಸಮಸ್ಯೆಗಳನ್ನು ನಿವಾರಿಸುವ ಸಾಮರ್ಥ್ಯವಿದ್ದರೆ ಮಾತ್ರ ಮುಂದೆ ಭವಿಷ್ಯವಿದೆ, ಇದಕ್ಕಾಗಿ ವಿಮರ್ಶಾತ್ಮಕ ಚಿಂತನೆ ಮಾಡುವುದನ್ನು ರೂಡಿಸಿಕೊಳ್ಳಬೇಕು, ಸುಖವಾಗಿ ಇರಬೇಕೆಂಬ ವಲಯದಿಂದ ಹೊರಬಂದು ಸವಾಲುಗಳನ್ನು ಸ್ವೀಕರಿಸುವ ವಲಯಕ್ಕೆ ಹೋಗಿ ಜ್ಞಾನಾರ್ಜನೆಯ ವಲಯವನ್ನು ಪ್ರವೇಶಿಸಿದರೆ ಅಭಿವೃದ್ಧಿಯ ವಲಯವು ಪ್ರಾಪ್ತವಾಗುತ್ತದೆ ಎಂದರಲ್ಲದೆ ಶೈಕ್ಷಣಿಕ ದೆಸೆಯಲ್ಲಿ ಪಠ್ಯ ವಿಷಯಗಳನ್ನು ಪ್ರೀತಿಸಬೇಕೇ ಹೊರತು ಹುಡುಗ ಹುಡುಗಿಯರನ್ನು ಪ್ರೀತಿಸುವುದಲ್ಲ, ಮನೋದ್ವೇಗಗಳಿಂದ ಉಂಟಾಗುವ ಸಮಸ್ಯೆಗಳಿಗೆ ಹಾಸ್ಯಪ್ರಜ್ಞೆಯು ಪರಿಹಾರವಾಗಬಲ್ಲದು, ಭಾಷೆಗಳನ್ನು ಸರಿಯಾಗಿ ಕಲಿಯದಿದ್ದಲ್ಲಿ ಮತ್ತೊಬ್ಬರು ಹೇಳಿದ್ದನ್ನೆಲ್ಲ ಒಪ್ಪಬೇಕಾಗುತ್ತದೆ, ಕಲಿತರೆ ಎಲ್ಲವೂ ಸ್ವಯಂ ಅರ್ಥವಾಗುತ್ತದೆ ಎಂಬುದನ್ನು ಉದಾಹರಣೆಗಳ ಮೂಲಕ ವಿವರಿಸಿದರು.

Shimoga News ಕಾಲೇಜಿನ ಚೇರ್ಮನ್ ಖ್ಯಾತ ಲೆಕ್ಕಪರಿಶೋಧಕ ಡಾ ಅಥಣಿ ಎಸ್ ವೀರಣ್ಣನವರ ಅಧ್ಯಕ್ಷತೆಯಲ್ಲಿ ಕಾಲೇಜನ ಪ್ರಾಂಶುಪಾಲ ಡಾ.ಬಿ ವೀರಪ್ಪ, ಡಾ. ಸ್ವಾಮಿ ತ್ರಿಭುವನಾನಂದರ ಉಪಸ್ಥಿತಿಯಲ್ಲಿ ರಾಂಕ್ ವಿಜೇತರನ್ನು ಸನ್ಮಾನಿಸಿ ಪದವೀಧರರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಬೋಧಕ ವರ್ಗದ ಚನ್ನೇಗೌಡ ಕೆ ಮತ್ತು ನಾಗರಾಜ ಬಿ ಎಸ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದ ಪ್ರಾರ್ಥನೆಯನ್ನು ಶ್ರಾವಣಿ ಮತ್ತು ತಂಡ ಹಾಡಿದರೆ ಬಿ ಎಂ ಪ್ರಶಾಂತಿನಿ ಸ್ವಾಗತ ಕೋರಿದರು. ಎನ್ ಜ್ಯೋತಿ ಅತಿಥಿಗಳ ಪರಿಚಯ ಮಾಡಿದರು. ಹೆಚ್ ನವೀನ್ ಪ್ರತಿಜ್ಞಾವಿಧಿ ಬೋಧಿಸಿದರು. ಕೆ ಸಿದ್ದಲಿಂಗಪ್ಪ ಅತಿಥಿಗಳನ್ನು ಸನ್ಮಾನಿಸಿದರೆ ಎಂ ಎಸ್ ಪೂಜಾ ವಂದನೆಗಳನ್ನು ಸಮರ್ಪಿಸಿದರು.
ಚಿತ್ರ ಹಾಗೂ ವರದಿ: ಡಾ. ಎಚ್.ಬಿ. ಮಂಜುನಾಥ, ಹಿರಿಯ ಪತ್ರಕರ್ತರು.
