Gramabharati Trust ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬ್ರಿಟಿಷರ ವಿರುದ್ಧ ಪ್ರತಿರೋಧ ಮತ್ತು ಏಕತೆಯ ಪ್ರಬಲ ಲಾಂಛನವಾಗಿದ್ದೇ ವಂದೇ ಮಾತರಂ ಗೀತೆ. ಮಾತೃಭೂಮಿಯನ್ನು ದೇವತೆಯಂತೆ ಆರಾಧಿಸುವ ಅರ್ಥ ಈ ಗೀತೆಗೆ ಇದೆ ಎಂದು ವಿಕ್ರಮ ವಾರಪತ್ರಿಕೆಯ ಗೌರವ ಸಂಪಾದಕ ನ. ನಾಗರಾಜ ಹೇಳಿದರು.
ಕಾರಣಗಿರಿ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಗ್ರಾಮಭಾರತಿ ಟ್ರಸ್ಟ್, ರಾಷ್ಟ್ರೊತ್ಥಾನ ಬಳಗ ಮತ್ತು ಗ್ರಾಮಭಾರತಿ ಟ್ರಸ್ಟ್ ಆಶ್ರಯದಲ್ಲಿ ನಡೆದ ಸಾಹಿತ್ಯ ಸಂಸ್ಕೃತಿ ಉತ್ಸವದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಗಾಯಕ ಗರ್ತಿಕೆರೆ ರಾಘಣ್ಣ ಸಾಹಿತ್ಯ ಸರ್ವರ ಹಿತ ಬಯಸುತ್ತದೆ. ಸಾಹಿತ್ಯವೂ ಮನಸ್ಸಿಗೆ ಮುದನೀಡುವ ಒಂದು ಅಮೂಲ್ಯ ಸಾಧನ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹನಿಯ ರವಿ ಮಾತನಾಡಿ ಈಗಿನ ಕೇಂದ್ರ ಸರ್ಕಾರ ವಂದೇ ಮಾತರಂ ಗೀತೆಯನ್ನು ಕಡ್ಡಾಯಗೊಳಿಸಿ ಆದೇಶವನ್ನ ಹೊರತಂದಿರುವುದು ಮಹತ್ವದ ಸಂಗತಿ ಮತ್ತು ಕಡ್ಡಾಯವಾಗಿ ಪ್ರತಿಯೊಬ್ಬರೂ ಸಂಪೂರ್ಣ ವಂದೇ ಮಾತರಂ ಗೀತೆಯನ್ನು ಕಲಿಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಳಗ್ಗೆಯಿಂದ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ, 20 ಕ್ಕೂ ಹೆಚ್ಚು ತಂಡಗಳಿಂದ ಭಜನಾ ಸಂಗಮ, ನಂತರ ಏಕಕಾಲದಲ್ಲಿ ನೂರಾರು ಕಂಠಗಳಿಂದ ವಂದೇ ಮಾತರಂ ಗೀತ ಗಾಯನ, ಹೊಸನಗರದ ವಿನಾಯಕ ಅವರಿಂದ ವಂದೇ ಮಾತರಂ ಚಿತ್ರ ಪ್ರದರ್ಶಿನಿ ನಡೆಯಿತು. ರಾತ್ರಿ ಕಾರಣಗಿರಿ ಕಲಾಭಾರತಿ ನೃತ್ಯ ಶಾಲೆ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಹಿರಿಯ ಯಕ್ಷಗಾನ ಕಲಾವಿದ ನಿತ್ಯಾನಂದ ಹೆಬ್ಬಾರ್, ಲೇಖಕ ತಿರುಪತಿ ನಾಯಕ್ ಇವರನ್ನು ಸನ್ಮಾನಿಸಲಾಯಿತು.
Gramabharati Trust ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ನಳಿನಚಂದ್ರ, ಆರತಿ ಮಹೇಶ್, ಹನಿಯ ಗುರುಮೂರ್ತಿ ಉಪಸ್ಥಿತರಿದ್ದರು. ಶ್ರೀಮತಿ ಶೃತಿ ನಿರೂಪಿಸಿ ವಿನಾಯಕ ಪ್ರಭು ಸ್ವಾಗತಿಸಿ, ಧನ್ಯ ರಮೇಶ್ ವಂದಿಸಿದರು.
