MSME ಜಾಗತಿಕವಾಗಿ ನಮ್ಮ ದೇಶ ಬಹು ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಎಂಎಸ್ಎಂಇ ಗಳ ಪಾತ್ರ ಮಹತ್ತರವಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಎಂಎಸ್ಎಂಇ ಗಳ ಅಭಿವೃದ್ದಿಗಾಗಿ ಅನೇಕ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ರೂಪಿಸಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಉದ್ಯಮಿಗಳಿಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್.ಗಣೇಶ್ ಕರೆ ನೀಡಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಶಿವಮೊಗ್ಗ, ಕೆಸಿಟಿಯು ಬೆಂಗಳೂರು ಹಾಗೂ ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಸಂಘ ಶಿವಮೊಗ್ಗ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೆರೊಕ್ಯಾಸ್ಟ್ ಸಭಾಂಗಣದಲ್ಲಿ ಎಂಎಸ್ಎಂಇ ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು(ಆರ್ಎಎಂಪಿ) ಯೋಜನೆಯಡಿಯಲ್ಲಿ ‘ನೋ ಯುರ್ ಎಂಎಸ್ಎAಇ ಇಕೊ ಸಿಸ್ಟಂ’(ಏಟಿoತಿ ಥಿouಡಿ ಒSಒಇ ಇಛಿo Sಥಿsಣem) ಕುರಿತು ಏರ್ಪಡಿಸಲಾಗಿದ್ದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ದೇಶ ಜಾಗತಿಕವಾಗಿ 4 ನೇ ದೊಡ್ಡ ಆರ್ಥಿಕ ಶಕ್ತಿಯಾಗಿದ್ದು ಇನ್ನೂ ಎತ್ತರಕ್ಕೇರಲು ಎಂಎಸ್ಎಂಇ ಗಳ ಪಾತ್ರ ಮುಖ್ಯವಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಎಂಎಸ್ಎಂಇ ಗಳ ಅಭಿವೃದ್ದಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿವೆ. ರಾಜ್ಯ ಸರ್ಕಾರ ಪ್ರತಿ 5 ವರ್ಷಕ್ಕೊಮ್ಮೆ ಹೊಸ ಕೈಗಾರಿಕಾ ನೀತಿ ರೂಪಿಸಿ, ರಿಯಾಯಿತಿ ಮತ್ತು ಉತ್ತೇಜನಗಳನ್ನು ನೀಡುತ್ತಿದೆ.
ಎಂಎಸ್ಎಂಇ ಗಳ ಸ್ಥಾಪನೆಯಿಂದ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ. ರಾಜ್ಯ ಸರ್ಕಾರ ಎಂಎಸ್ಎಂಇ ಉತ್ತೇಜಿಸಲು 2 ಎಕರೆ ಕೃಷಿ ಭೂಮಿ ಕನ್ವವರ್ಷನ್ನ್ನು 30 ದಿನಗಳ ಒಳಗೆ ಮಾಡಲು ಅನುಮೋದನೆ ನೀಡಿದ್ದು, 30 ದಿನಗಳ ಒಳಗೆ ಆಗದಿದ್ದರೆ ಆಟೋ ಕನ್ವವರ್ಷನ್ ಮಾಡುವಂತಹ ಐತಿಹಾಸಿಕ ನಿಲುವು ತೆಗೆದುಕೊಂಡಿದೆ.
ಎಂಎಸ್ಎಂಇ ಗಳ ಅಭಿವೃದ್ಧಿಯಿಂದ ಜಿಡಿಪಿ ಮತ್ತು ಉದ್ಯೋಗಾವಕಾಶದಲ್ಲಿ ಪ್ರಗತಿಯಾಗಿ ದೇಶದ ಅಭಿವೃದ್ಧಿಯಾಗಲಿದ್ದು ಇಲಾಖೆಗಳು ಎಂಎಸ್ಎಂ ಇಗಳಿಗೆ ತಮ್ಮ ಸಹಕಾರ ನೀಡಬೇಕು. ಹೊಸ ನೀತಿಗಳು, ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಂಡು ಎಂಎಸ್ಎಂಇ ಗಳಿಗೆ ಉತ್ತಮ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷರಾದ ಜೋಯಿಸ್ ರಾಮಾಚಾರ್ ಮಾತನಾಡಿ, ಕೃಷಿಯ ನಂತರ ಅತಿ ದೊಡ್ಡ ಆರ್ಥಿಕ ವಲಯವಾಗಿ ಹೊರಹೊಮ್ಮುತ್ತಿರುವ ಎಂಎಸ್ಎಂಇ ಪ್ರಾರಂಭಿಸಲು ಸರ್ಕಾರದಿಂದ ಸಿಗುವ ಸೌಲಭ್ಯಗಳು ಹಾಗೂ ಈ ಕುರಿತು ಸಮಗ್ರ ಮಾಹಿತಿ ನೀಡುವ ಈ ಕಾರ್ಯಾಗಾರ ಅತಿ ಉಪಯುಕ್ತವಾಗಿದ್ದು ಹೊಸ ಉದ್ಯಮಿಗಳು ಸೇರಿದಂತೆ ಎಲ್ಲರೂ ಈ ಕಾರ್ಯಕ್ರಮದ ಸದುಪಯೋಗ ಪಡೆಯಬೇಕೆಂದರು.
MSME ಅತಿ ಸಣ್ಣ, ಸಣ್ಣ, ಮಧ್ಯಮ ಉದ್ಯಮಗಳನ್ನು (ಎಂಎಸ್ಎಂಇ) ಆರಂಭಿಸಲು ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ತಿಳಿಸುವುದು ಈ ಕಾರ್ಯಾಗಾರದ ಉದ್ದೇಶವಾಗಿದೆ.
ಈ ಕಾರ್ಯಾಗಾರದಲ್ಲಿ ಎಂಎಸ್ಎಂಇ ಆರಂಭಿಸಲು ಅಗತ್ಯವಾದ ಎಲ್ಲ ಮಾಹಿತಿಯೂ ಸಿಗಲಿದೆ. ಮುಂದಿನ ದಿನ ತಾಲ್ಲೂಕು ಮಟ್ಟದಲ್ಲಿ ಈ ಕಾರ್ಯಾಗಾರ ನಡೆಸುವ ಉದ್ದೇಶವಿದೆ.
ಈ ಹಿಂದೆ ಒಂದು ಉದ್ಯಮ ಆರಂಭಿಸುವುದು ಅಷ್ಟು ಸುಲಭವಾಗಿರಲಿಲ್ಲ. ಮಾಹಿತಿ, ತರಬೇತಿ, ಮೂಲಭೂತ ಸೌಕರ್ಯಗಳ ಕೊರತೆ ಇತ್ತು. ಸರ್ಕಾರದಿಂದ ಸೌಲಭ್ಯವೂ ಕಷ್ಟ ಇತ್ತು. ಆದರೆ ಇದೀಗ ಮಾಹಿತಿ ಹೇರಳವಾಗಿ ದೊರೆಯುತ್ತಿದೆ. ದೇಶಾದ್ಯಂತ ತರಬೇತಿ ಕೇಂದ್ರಗಳಿವೆ. ಇಲಾಖೆಗಳಲ್ಲೂ ವ್ಯವಸ್ಥಿತ ಕಾರ್ಯಕ್ರಮಗಳಿವೆ.
ಡಿಜಿಟಲ್ ಮೀಡಿಯಾದಲ್ಲೂ ಮಾಹಿತಿ ಸಾಕಷ್ಟಿದೆ. ಸರ್ಕಾರ ನೀಡುವ ಸೌಲಭ್ಯಗಳ ಕುರಿತಾದ ಈ ಕಾರ್ಯಾಗಾರ ತುಂಬಾ ಉಪಯುಕ್ತವಾಗಿದೆ. ಹಾಗೂ ಇಲಾಖೆ ಅಧಿಕಾರಿಗಳು ಅತ್ಯಂತ ಸಹಕಾರಿಯಾಗಿದ್ದಾರೆ. ಹೊಸಬರು ಸೇರಿದಂತೆ ಎಲ್ಲ ಉದ್ಯಮಾಕಾಂಕ್ಷಿಗಳು ಇಂತಹ ಕಾರ್ಯಕ್ರಮಗಳ ಸದ್ಬಳಕೆ ಮಾಡಿಕೊಳ್ಳಿರಿ ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್ ಪಿ ಮಾತನಾಡಿ, ಎಂಎಸ್ಎಂಇ ಗಳ ಅಭಿವೃದ್ಧಿಯಿಂದ ದೇಶದ ಆರ್ಥಿಕತೆ ಸುಧಾರಣೆ ಆಗುತ್ತಿದೆ. ಕಳೆದ ಬಜೆಟ್ನಲ್ಲಿ ಎಂಎಸ್ಎಂಇ ಗಳಿಗೆ ಸಾಕಷ್ಟು ಯೋಜನೆಗಳನ್ನು ಕಲ್ಪಿಸಲಾಗಿದೆ.
ನಮ್ಮ ದೇಶ ಉತ್ಪಾದನಾ ಹಬ್ ಆಗಲು ಪ್ರಯತ್ನ ಮಾಡಲಾಗುತ್ತಿದ್ದು ಹೊಸ ಮತ್ತು ಯುವ ಉದ್ಯಮಿಗಳು ಮುಂದೆ ಬರಬೇಕು. ಸರ್ಕಾರದಿಂದ ಸಿಗುವ ಸೌಲಭ್ಯಗಳ ವಿವರ ಮತ್ತು ಎಲ್ಲ ರೀತಿಯ ಮಾಹಿತಿ ಇಂತಹ ಕಾರ್ಯಾಗಾರದಲ್ಲಿ ನೀಡಿ ಸಹಕರಿಸಲಾಗುತ್ತಿದೆ. ಭೂಮಿ ಖರೀದಿಯಿಂದ ಹಿಡಿದು, ಬ್ಯಾಂಕ್ ಸಾಲ, ಉದ್ಯಮ ಸ್ಥಾಪನೆವರೆಗೆ ಸಹಕಾರ ದೊರಕಲಿದೆ. ಬ್ಯಾಂಕ್ನವರೂ ಕೈ ಜೋಡಿಸಿದ್ದಾರೆ. ಹೊಸ ಉದ್ಯಮ, ಕೈಗಾರಿಕೆಗಳನ್ನು ಆರಂಭಿಸಲು ಅಗತ್ಯವಾದ ಎಲ್ಲ ಜ್ಞಾನ, ಮಾಹಿತಿ ಸಹಕಾರ ಇಲ್ಲಿ ಲಭ್ಯವಿದ್ದು, ಇದೊಂದು ಅತ್ಯುತ್ತಮ ಕಾರ್ಯಕ್ರಮವಾಗಿದೆ ಎಂದರು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ವ್ಯವಸ್ಥಾಪಕ ವಿಶುಕುಮಾರ್ ಮಾತನಾಡಿ, ಕೃಷಿ ಹೊರತಾದ ಎಲ್ಲ ವ್ಯವಹಾರಗಳು ಎಂಎಸ್ಎಂಇ ಆಗಿವೆ. ಇವು ನಮ್ಮ ಆರ್ಥಿಕತೆಯ ಬೆನ್ನೆಲುಬಾಗಿದ್ದು ನಮ್ಮ ಸರ್ಕಾರಗಳು ಕೂಡ ಎಂಎಸ್ಎಂಇ ಗಳಿಗೆ ಅತ್ಯಂತ ಪ್ರಾಮುಖ್ಯತೆ ನೀಡಿವೆ. ದೇಶದ ಶೇ.30 ಜಿಡಿಪಿ ಎಂಎಸ್ಎಂಇ ಯ ಕೊಡುಗೆಯಾಗಿದ್ದು, 28 ಕೋಟಿಗೂ ಅಧಿಕ ಉದ್ಯೋಗ ನೀಡಿವೆ. ಸುಮಾರು 6.8 ಕೋಟಿ ಎಂಎಸ್ಎಂಇ ಗಳು ನೋಂದಣಿಯಾಗಿವೆ. ಈಗ ಬಹುತೇಕ ಕೈಗಾರಿಕೆಗಳು ಎಂಎಸ್ಎಂಇ ಚೌಕಟ್ಟಿನಲ್ಲಿ ಬರುತ್ತಿವೆ. ಎಂಎಸ್ಎಂಇ ಗಳಿಗೆ ಉದ್ಯಮ್ ನೋಂದಣಿ ಕಡ್ಡಾಯವಾಗಿದ್ದು ಇದರಿಂದ ಸರ್ಕಾರಿ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ.
ಜೊತೆಗೆ ಪ್ರತಿ ವರ್ಷ ಅಪ್ಡೇಟ್ ಮಾಡಬೇಕು. ಕಮರ್ಷಿಯಲ್ ಸಿಬಿಲ್ ರೇಟಿಂಗ್ ಚೆನ್ನಾಗಿರಬೇಕು. ಬ್ಯಾಲೆನ್ಸ್ ಶೀಟ್ ರೇಷಿಯೋ ಚೆನ್ನಾಗಿಟ್ಟುಕೊಳ್ಳಬೇಕು. ಬ್ಯಾಂಕ್ಗಳಿಗೆ ಕಂತು ಕಟ್ಟುವ ದಿನ ಕಟ್ಟದೇ ವಿಳಂಬ ಮಾಡಿದರೆ ಸಿಬಿಲ್ ರೇಟಿಂಗ್ ಇಳಿಕೆಯಾಗುತ್ತದೆ. ಆದ್ದರಿಂದ ಈ ಬಗ್ಗೆ ಗಮನ ಹರಿಸಬೇಕು. ಎಂಎಸ್ಎಂಇ ಗಳಿಗೆ ಸರ್ಕಾರದಿಂದ ಅನೇಕ ಸೌಲಭ್ಯಗಳಿದ್ದು ಸಿಜಿಟಿಎಂಎಸ್ ಕೂಡ ಉತ್ತಮ ಯೋಜನೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉದ್ಯಮಿ ಉಮೇಶ್ ಶಾಸ್ತ್ರಿ, ಉದ್ಯಮಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು. ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಸಂಘದ ಕಾರ್ಯದರ್ಶಿ ಎಸ್.ವಿಶ್ವನಾಥಯ್ಯ ಸ್ವಾಗತಿಸಿದರು.
