Teppotsava in Shivamogga ಶಿವಮೊಗ್ಗ ನಗರದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಹೆಗ್ಗುರುತಾಗಿರುವ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪ್ರಸ್ತುತ ‘ಶ್ರೀ ಸೀತಾರಾಮ ಕಲ್ಯಾಣ ಶತಮಾನೋತ್ಸವ’ದ ಸಂಭ್ರಮ ಮನೆಮಾಡಿದೆ.ಈ ಅಭೂತಪೂರ್ವ ಸಂಭ್ರಮದ ಅಂಗವಾಗಿ ಪವಿತ್ರ ತುಂಗಾ ನದಿಯ ಮಡಲಿನಲ್ಲಿ ಆಯೋಜಿಸಲಾಗಿದ್ದ ಭವ್ಯ ‘ತೆಪ್ಪೋತ್ಸವ’ ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎನ್. ಚೆನ್ನಬಸಪ್ಪನವರು ಭಾಗವಹಿಸಿ, ದೈವಿಕ ಕ್ಷಣಗಳಿಗೆ ಸಾಕ್ಷಿಯಾದರು.
ಕೆಳದಿ ಅರಸರ ಕಾಲದಿಂದಲೂ ಐತಿಹಾಸಿಕ ಮಹತ್ವ ಪಡೆದಿರುವ ಹಳೆಯ ಶಿವಮೊಗ್ಗದ ಕೋಟೆ ಪ್ರದೇಶವು ಹಿಂದೂ ಸಂಸ್ಕೃತಿಯ ಶಕ್ತಿ ಕೇಂದ್ರವಾಗಿ ಗುರುತಿಸಿಕೊಂಡಿದೆ. ಇಲ್ಲಿನ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯವು ಭಕ್ತರ ಶ್ರದ್ಧಾಕೇಂದ್ರವಾಗಿದ್ದು, ಈಗ ಶತಮಾನೋತ್ಸವದ ಹೊಸ್ತಿಲಲ್ಲಿದೆ.
ದಕ್ಷಿಣಾಭಿಮುಖವಾಗಿ ಹರಿಯುವ ಪುಣ್ಯನದಿ ತುಂಗಾ ತೀರದಲ್ಲಿ ಈ ಪುಣ್ಯಕ್ಷೇತ್ರವಿರುವುದು ನಮ್ಮ ನಗರದ ಸೌಭಾಗ್ಯ. ಕಳೆದ 74 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಈ ತೆಪ್ಪೋತ್ಸವವು, ಶಿವಮೊಗ್ಗದ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿದೆ ಎಂದು ಅವರು ತಿಳಿಸಿದ್ದಾರೆ.
Teppotsava in Shivamogga ಸೂರ್ಯಾಸ್ತದ ಮನಮೋಹಕ ಹೊತ್ತಿನಲ್ಲಿ, ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಭವ್ಯ ತೆಪ್ಪದಲ್ಲಿ ಶ್ರೀ ಸೀತಾರಾಮ, ಲಕ್ಷ್ಮಣ ಹಾಗೂ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಗಳು ತುಂಗಾ ನದಿಯಲ್ಲಿ ವಿಹರಿಸುವ ದೃಶ್ಯ ಅತ್ಯಂತ ನಯನ ಮನೋಹರವಾಗಿತ್ತು.
ನದಿಯ ಅಲೆಗಳ ಮೇಲೆ ತೇಲಿಬಂದ ದೈವಿಕ ಕಳೆಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ತುಂಗಾ ತೀರಕ್ಕೆ ಆಗಮಿಸಿದ್ದರು.
ಮಂತ್ರಘೋಷ, ಭಕ್ತರ ಜೈಕಾರ ಹಾಗೂ ಪಟಾಕಿಗಳ ಸಂಭ್ರಮದ ನಡುವೆ ನಡೆದ ಈ ಕಾರ್ಯಕ್ರಮವು ಕೇವಲ ಧಾರ್ಮಿಕ ವಿಧಿಯಲ್ಲ, ಇದು ಶಿವಮೊಗ್ಗದ ಭಾವೈಕ್ಯತೆ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ.
