H B Manjunath ದಾವಣಗೆರೆ.ಡಿ.28. ನಮ್ಮ ದೇಶದ ಹಾಗೂ ನಮ್ಮ ರಾಜ್ಯದ ಸಂಸ್ಕೃತಿ ವಿಶ್ವದಲ್ಲೇ ಶ್ರೇಷ್ಠ ಹಾಗೂ ಮೌಲ್ಯಯುತವಾಗಿದ್ದು ಇದನ್ನು ಮಕ್ಕಳಲ್ಲಿ ರೂಢಿಸುವ ಕೆಲಸ ಮನೆಗಳಲ್ಲಿ ಪೋಷಕರಿಂದಲೇ ಆಗಬೇಕು ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಕರೆ ಕೊಟ್ಟರು.
ಅವರು ತ್ಯಾವಣಿಗೆ ಶ್ರೀ ಮಾತಾ ವಿದ್ಯಾಸಂಸ್ಥೆಯ ಪ್ರಕೃತಿ ವಿದ್ಯಾಲಯ ಸಿರಿ ಸಂಭ್ರಮ ಸಮಾರೋಪ ಭಾಷಣ ಮಾಡುತ್ತಾ ವಾರ್ಷಿಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುತ್ತವೆ ಆದರೆ ಜೀವನ ಪರೀಕ್ಷೆಗಳನ್ನು ಎದುರಿಸುವಲ್ಲಿ ಬೇಕಾಗುವ ಸಂಸ್ಕೃತಿ ಹಾಗೂ ಮೌಲ್ಯಗಳು ಮನೆಗಳಲ್ಲಿ ಪೋಷಕರು ತಾವು ರೂಢಿಸಿಕೊಂಡು ಮಕ್ಕಳಿಗೂ ಹೇಳಿಕೊಡಬೇಕು ಎಂದರು. ಮಾತೃಭಾಷೆಯಾದ ಕನ್ನಡ ಹಾಗೂ ಇದರ ಸಂಸ್ಕೃತಿ ಯಾವತ್ತೂ ಶ್ರೇಷ್ಠ ಆದರೆ ಹೊರ ರಾಜ್ಯ ಮತ್ತು ಹೊರ ದೇಶಗಳಿಗೆ ಹೋಗಿ ಅವಕಾಶಗಳನ್ನು ಪಡೆಯುವಲ್ಲಿ ಆಂಗ್ಲ ಭಾಷೆಯೂ ಬೇಕಾಗುತ್ತದೆ, ಬಹು ಭಾಷೆಗಳನ್ನು ಕಲಿಯುವುದು ಒಳ್ಳೆಯದು ಆದರೆ ಸಂಸ್ಕೃತಿ ಮಾತ್ರ ನಮ್ಮ ಮಾತೃ ಭಾಷೆಯದೇ ಆಗಿರಬೇಕು ಎಂಬುದನ್ನು ನಿದರ್ಶನದ ಮೂಲಕ ಮಂಜುನಾಥ್ ವಿವರಿಸಿದರು. ಭಾರತದ ವಿದ್ಯಾರ್ಥಿಗಳು ಪ್ರಪಂಚದ ಬೇರೆಲ್ಲ ದೇಶಗಳ ವಿದ್ಯಾರ್ಥಿಗಳಿಗಿಂತಲೂ ಬುದ್ಧಿವಂತರು ಆದರೆ ತಮ್ಮ ಈ ಸಾಮರ್ಥ್ಯದ ಅರಿವು ನಮ್ಮ ವಿದ್ಯಾರ್ಥಿಗಳಿಗಿಲ್ಲ, ಇದನ್ನು ಜಾಗೃತಗೊಳಿಸುವ ಕಾರ್ಯವು ಮನೆಗಳಲ್ಲೂ ಆಗಬೇಕಿದೆ ಎಂದರು.
ಮುಖ್ಯ ಅತಿಥಿಗಳಾಗಿ ಚನ್ನಗಿರಿ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್ ಜಯಪ್ಪ ಮಾತನಾಡುತ್ತಾ ತಮ್ಮಲ್ಲಿನ ಸಾಂಸ್ಕೃತಿಕ ಪ್ರತಿಭೆಯ ಪ್ರದರ್ಶನವು ಮಕ್ಕಳ ಹಕ್ಕುಗಳಲ್ಲಿ ಒಂದಾಗಿದ್ದು ಶಾಲಾ ವಾರ್ಷಿಕೋತ್ಸವದಲ್ಲಿ ಇದಕ್ಕೆ ಅವಕಾಶವಾಗುತ್ತದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪೋಷಕರ ಶಿಕ್ಷಕರ ಹಾಗೂ ಗೆಳೆಯರ ಪಾತ್ರವೂ ಪ್ರಮುಖವಾಗಿರುತ್ತದೆ. ತಂದೆಯ ಜವಾಬ್ದಾರಿ ತಾಯಿಯ ಪ್ರೀತಿ ಸೇರಿ ಮಕ್ಕಳ ವ್ಯಕ್ತಿತ್ವ ರೂಪಗೊಳ್ಳುತ್ತದೆ. ವಿದ್ಯೆಯೊಂದಿಗೆ ಪ್ರಾಣಾಯಾಮ ಯೋಗದಂತಹ ಅನುಷ್ಠಾನಗಳು ಅವಶ್ಯ ಎಂದರು.
H B Manjunath ತ್ಯಾವಣಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರಿಬಸಪ್ಪ ಹೆಚ್ ಬಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಕೃತಿ ವಿದ್ಯಾಲಯದ ಸಂಸ್ಥಾಪಕ ಕೆ.ಜಿ ಲೋಹಿತ್ ಕುಮಾರ್ ಅಧ್ಯಕ್ಷತೆಯಲ್ಲಿ ಮುಖ್ಯ ಅತಿಥಿಗಳಾಗಿ ದಾವಣಗೆರೆ ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರ ಅಧ್ಯಾಪಕರಾದ ಡಾ. ಪ್ರಸನ್ನ ಕುಮಾರ್ ಬಿ ಸಿ, ಪ್ರತಿಭಾ ಪುರಸ್ಕಾರ ನೆರವೇರಿಸಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪಿ ಸಿ ಗೋವಿಂದಸ್ವಾಮಿ ಮಾತುಗಳನ್ನಾಡಿದರು. ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಕವಿತಾ ಶಿಕ್ಷಣದ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಲೋಕೇಶ್ ನಾಯಕ್, ಅತ್ತಿಕೆರೆ ಪ್ರಸನ್ನ ಕುಮಾರ್, ಶ್ವೇತಾ, ಮುಖ್ಯೋಪಾಧ್ಯಾಯ ಮನು ಎಸ್ ಆರ್, ಜಮಾಲ್ ವಲಿ ಎಂ, ಆಶಾ ಹೆಚ್ ಎಸ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನೆರವೇರಿದ ನಂತರ ಶಾಲಾ ಮಕ್ಕಳಿಂದ ಅತ್ಯಾಕರ್ಷಕವಾದ ನೃತ್ಯರೂಪಕಗಳು ನೆರವೇರಿದವು.
