ICAR-Center for Agricultural Sciences ಐ ಸಿ ಎ ಆರ್-ಕೃಷಿ ವಿಜ್ಞಾನ ಕೇಂದ್ರ ಶಿವಮೊಗ್ಗ ಇಲ್ಲಿ ಕೃಷಿ ಇಲಾಖೆ ಸಹಯೋಗದೊಂದಿಗೆ ದಿನಾಂಕ 5.12 2025 ರಂದು ವಿಶ್ವ ಮಣ್ಣು ದಿನಾಚರಣೆಯನ್ನು ಆಚರಿಸಲಾಯಿತು.
ಈ ವರ್ಷದ ಧ್ಯೇಯ ವಾಕ್ಯವಾದ ಆರೋಗ್ಯಕರ ನಗರಗಳಿಗೆ ಆರೋಗ್ಯಕರ ಮಣ್ಣು ಎಂಬ ಶೀರ್ಷಿಕೆಯಲ್ಲಿ ಈ ದಿನದ ಮಣ್ಣು ದಿನಾಚರಣೆಯನ್ನು ಆಚರಿಸಲಾಯಿತು. 2013ರಲ್ಲಿ ಆಹಾರ ಮತ್ತು ಕೃಷಿ ಸಂಸ್ಥೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 68ನೇ ಸಮ್ಮೇಳನದಲ್ಲಿ ವಿಶ್ವ ಮಟ್ಟದಲ್ಲಿ ಮಣ್ಣಿನ ದಿನವನ್ನು ಆಚರಿಸಬೇಕೆನ್ನುವ ಪ್ರಸ್ತಾವವನ್ನು ಸಲ್ಲಿಸಿತು. ಇದರ ಫಲವಾಗಿ 2014 ಡಿಸೆಂಬರ್ 5 ರಂದು ಮೊದಲ ಬಾರಿಗೆ ಮಣ್ಣು ದಿನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಯಿತು.
ಈ ವಿಶ್ವ ಮಣ್ಣು ದಿನವನ್ನು ಆಚರಿಸುವ ಉದ್ದೇಶವು ಮಣ್ಣಿನ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.
ಇಂದು ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆ ಪ್ಲಾಸ್ಟಿಕ್ ಬಳಕೆ ಸೇರಿದಂತೆ ಇತ್ಯಾದಿ ಮಾಲಿನ್ಯದ ಕಾರಣದಿಂದಾಗಿ ಮಣ್ಣಿನ ಫಲವತ್ತತೆಯು ಕಡಿಮೆಯಾಗುತ್ತಿದೆ, ಅಷ್ಟು ಮಾತ್ರವಲ್ಲದೆ ಕಾಡುಗಳ ನಾಶದಿಂದಾಗಿ ಪ್ರವಾಹ ಮತ್ತು ಬಾರಿ ಮಳೆಯ ಸಂದರ್ಭದಲ್ಲಿ ಮಣ್ಣಿನ ಸವತೆಯು ಹೆಚ್ಚಾಗುತ್ತಿದೆ.
ಹೀಗಾಗಿ ಸುಸ್ಥಿರ ಭವಿಷ್ಯಕ್ಕಾಗಿ ಮಣ್ಣಿನ ಸಂರಕ್ಷಣೆ ಎಷ್ಟು ಮುಖ್ಯ ಎಂಬ ಬಗ್ಗೆ ಜಾಗೃತಿ ಮೂಡಿಸುವುದು ಈ ಆಚರಣೆಯ ಮುಖ್ಯ ಉದ್ದೇಶವಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಲೋಕೇಶ್, ಉಪ ಕೃಷಿ ನಿರ್ದೇಶಕರು ,ಕೃಷಿ ಇಲಾಖೆ ,ಶಿವಮೊಗ್ಗ ಇವರು ಗಿಡಗಳಿಗೆ ಜೈವಿಕ ಗೊಬ್ಬರಗಳನ್ನು ಹಾಕುವುದರ ಮೂಲಕ ಉದ್ಘಾಟನೆಯನ್ನು ನೆರವೇರಿಸಿಕೊಟ್ಟರು ತಮ್ಮ ಉದ್ಘಾಟನಾ ನುಡಿಗಳಲ್ಲಿ ಇವರು ಇಂದಿನ ದಿನ ಮಣ್ಣು ತುಂಬಾ ಮಾಲಿನ್ಯಗೊಳ್ಳುತ್ತಿದ್ದು ,ಇದರ ಸಂರಕ್ಷಣೆಗೆ ನಾವು ಸಾವಯವ ಗೊಬ್ಬರ ಮತ್ತು ಜೈವಿಕ ಗೊಬ್ಬರಗಳನ್ನು ಬಳಕೆ ಮಾಡುವುದರಿಂದ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬಹುದೆಂದು ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ತಿಪ್ಪೇಶ್, ಡೀನ್ ಕೃಷಿ, ,ಕೃಷಿ ಮಹಾವಿದ್ಯಾಲಯ ಶಿವಮೊಗ್ಗ ಇವರು ಉಳಿಸಿಕೊಂಡಿದ್ದು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಪರಿಸರ ವ್ಯವಸ್ಥೆ ಮತ್ತು ಜೀವರಾಶಿಗಳ ಯೋಗಕ್ಷೇಮಕ್ಕೆ ಮಣ್ಣು ಪ್ರಮುಖ ಅಡಿಪಾಯವಾಗಿದೆ ಹೀಗೆ ಮಣ್ಣಿನ ಅಮೂಲ್ಯವಾದ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಮಣ್ಣಿನ ಮಾಲಿನ್ಯವನ್ನು ತಡೆಗಟ್ಟಲು, ಮಣ್ಣು ಹಾಗೂ ಮಣ್ಣಿನ ಆರೋಗ್ಯವನ್ನು ಸಂರಕ್ಷಿಸಲು ಡಿಸೆಂಬರ್ 5 ರಂದು ಮಣ್ಣು ದಿನವನ್ನು ಆಚರಿಸಲಾಗುತ್ತದೆ ಎಂದು ವಿವರಿಸಿದರು. ಈ ಕಾರ್ಯಕ್ರಮದಲ್ಲಿ ಮಣ್ಣು ವಿಜ್ಞಾನಿಯಾದ ಡಾಕ್ಟರ್ ಜಿ ಎನ್ ತಿಪ್ಪೇಶಪ್ಪ ಪ್ರಾಧ್ಯಾಪಕರು ಕೃಷಿ ಮಹಾವಿದ್ಯಾಲಯ ಶಿವಮೊಗ್ಗ ಇವರು ಮಣ್ಣಿನ ಸಂರಕ್ಷಣೆಯ ಕುರಿತು ರೈತರಿಗೆ ವಿವರವಾಗಿ ತಿಳಿಸಿದರು.
ಇವರು ಮಣ್ಣಿನ ಆರೋಗ್ಯದ ಬಗ್ಗೆ ವಿವರಿಸುತ್ತಾ ಆಹಾರಭದ್ರತೆ ಮತ್ತು ನಮ್ಮ ಸುಸ್ಥಿರ ಭವಿಷ್ಯವನ್ನು ಕಾಪಾಡಿಕೊಳ್ಳಲು ಮಣ್ಣು ಮತ್ತು ಮಣ್ಣಿನ ಆರೋಗ್ಯ ಸಂರಕ್ಷಣೆ ಮಾಡುವುದು ಅತ್ಯಂತ ಅಗತ್ಯವಾಗಿದೆ ಎಂದು ರೈತರಿಗೆ ಮನವರಿಕೆ ಮಾಡಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಮೊದಲಿಗೆ ಡಾ. ಸುನಿಲ್, ಸಿ ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ರವರು ಈ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ,ಬಂದಿರುವ ಎಲ್ಲಾ ಗಣ್ಯರನ್ನು ಮತ್ತು ರೈತ ಮಿತ್ರರನ್ನು ಈ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಬಿ ಸಿ ಹನುಮಂತ ಸ್ವಾಮಿ, ಸಹ ವಿಸ್ತಾರಣ ನಿರ್ದೇಶಕರು, ಡಾ. ಸುಧಾಕರ್ ಮುಖ್ಯಸ್ಥರು ಆಕಾಶವಾಣಿ ಭದ್ರಾವತಿ, ಶ್ರೀಯುತ ರಾಘವೇಂದ್ರ ರವರು, ಜಿಲ್ಲಾ ರೈತ ಸಂಘದ ಅಧ್ಯಕ್ಷರು ಹಾಗೂ ಪ್ರಗತಿಪರ ಸಾವಯವ ಕೃಷಿಕರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತಮ್ಮ ಕೃಷಿಯಲ್ಲಿನ ಅನುಭವವನ್ನು ರೈತರಲ್ಲಿ ಹಂಚಿಕೊಂಡರು.
ICAR-Center for Agricultural Sciences ಡಾ. ಶಿಲ್ಪ ಶ್ರೀ ಮಣ್ಣು ವಿಜ್ಞಾನಿಗಳು, ಕೆ ವಿ ಕೆ ಇವರು ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ನಿರೂಪಣೆಯನ್ನು ಮಾಡಿದರು. ಈ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಎಲ್ಲಾ ವಿಜ್ಞಾನಿಗಳು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತ ಬಾಂಧವರು ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ರೈತರಿಗೆ ತಮ್ಮ ಮಣ್ಣಿನ ಫಲವತ್ತತೆಯ ಮಣ್ಣು ಗುರುತು ಚೀಟಿಯನ್ನು ವಿತರಿಸಲಾಯಿತು ಮತ್ತು ಈ ಮಣ್ಣು ಗುರುತು ಚೀಟಿಯ ಮಹತ್ವವನ್ನು ಅವರಿಗೆ ತಿಳಿಸಿಕೊಡಲಾಯಿತು.
ಈ ಕಾರ್ಯಕ್ರಮದಲ್ಲಿ ಸುಮಾರು 70 ರಿಂದ 80 ರೈತ ಮಿತ್ರರು ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಂಡರು.
