Mahant Rudreshwara Maha Swami ತಾರತಮ್ಯ ಭೇದವಿಲ್ಲದೇ ಎಲ್ಲರೂ ಭಕ್ತಿ ಸಮರ್ಪಿಸಲು ದೇವಾಲಯಗಳು ಕಾರಣವಾಗಿ ತನ್ಮೂಲಕ ಸಾಮಾಜಿಕ ಸಾಮರಸ್ಯ ವೃದ್ಧಿಯಾಗುತ್ತದೆ ಎಂದು ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಮಹಾ ಸ್ವಾಮಿಗಳು ಹೇಳಿದರು.
ದಾವಣಗೆರೆ ತಾಲೂಕು ಕಾಶೀಪುರದಲ್ಲಿ ಶ್ರೀ ಕಾಶಿಲಿಂಗೇಶ್ವರ ಪ್ರಾಣ ಪ್ರತಿಷ್ಠಾಪನೆ, ಕಳಶಾರೋಹಣ, ಪೂರ್ಣ ಶಿಲಾ ದೇವಸ್ಥಾನದ ಶುಭಾರಂಭ ಸಾನ್ನಿಧ್ಯ ವಹಿಸಿ ಧರ್ಮಸಭೆಯಲ್ಲಿ ಆಶೀರ್ವಚನ ನೀಡುತ್ತಾ ಊರಿನ ನ್ಯಾಯ ನಿರ್ಣಯಗಳು ಊರಿನ ದೇವರುಗಳ ಸಾಕ್ಷಿಯಾಗಿ ನೆರವೇರುತ್ತಾ ವ್ಯಾಜ್ಯ ತೀರ್ಮಾನವಾಗುತ್ತಿದ್ದ ಸನಾತನ ಸಂಸ್ಕೃತಿ ನಮ್ಮದು, ಸನಾತನ ಧರ್ಮಾಧಾರಿತ ಭಗವಂತನ ಪ್ರತಿಷ್ಠಾಪನೆಗೊಂಡ ಪವಿತ್ರ ಕ್ಷೇತ್ರದಲ್ಲಿ ದುಶ್ಚಟಗಳಿಗೆ ಆಸ್ಪದವಿಲ್ಲದಂತೆ ನೋಡಿಕೊಳ್ಳಬೇಕು. ದೀನ ದುರ್ಬಲರಿಗೆ ಸಹಾಯ ಮಾಡುವುದು ನಮ್ಮ ಸನಾತನ ಧರ್ಮದ ಪರಂಪರೆ ಎಂದರಲ್ಲದೆ ಕಾಶಿ ಕ್ಷೇತ್ರದಿಂದಲೇ ಈಶ್ವರಲಿಂಗ ತಂದು ಮೂರು ಕೋಟಿ ರೂಪಾಯಿಗೂ ಅಧಿಕ ವೆಚ್ಚದ ಸಂಪೂರ್ಣ ಶಿಲಾ ಕೆತ್ತನೆಯ ಈ ದೇವಸ್ಥಾನ ನಿರ್ಮಾಣಕ್ಕೆ ಜಾತಿ ಮತ ಭೇದವಿಲ್ಲದೆ ಎಲ್ಲರೂ ಸ್ವಯಂ ಪ್ರೇರಣೆಯಿಂದ ನೀಡಿರುವವರು ಪುಣ್ಯಾತ್ಮರು, ಗ್ರಾಮದವರಲ್ಲದೆ ಸುತ್ತಮುತ್ತಲಿನ ಕ್ಯಾಂಪು ಗಳವರೂ, ಇತರರೂ ಸಹಕರಿಸಿದ್ದಾರೆ ಎಂದರು.
ಟ್ರಸ್ಟಿನ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರು ದಾನ ದೇಣಿಗೆ ನೀಡಿದ ಸರ್ವರನ್ನು ಸ್ವಾಮಿಗಳು ಸ್ಮರಿಸಿದರು.
‘ಸನಾತನ ಧರ್ಮ ಮತ್ತು ದೇವಾಲಯ ಸಂಸ್ಕೃತಿ’ಯ ಬಗ್ಗೆ ಪ್ರಧಾನ ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಬದುಕಿನ ಭರವಸೆಗಾಗಿ ದೈವ ಕೃಪೆ ನಿರೀಕ್ಷಿಸಿ ಬರಲು ದೇವಾಲಯಗಳು ಕಾರಣವಾಗುವುದಷ್ಟೇ ಅಲ್ಲ ನಮ್ಮ ಸನಾತನ ಸಂಸ್ಕೃತಿಯ ಮೌಲ್ಯಗಳ ಪ್ರತಿಪಾದನೆಗೂ ದೇವಾಲಯ ಸಂಸ್ಕೃತಿಯಲ್ಲಿ ಅವಕಾಶವಿದ್ದು ಅನೇಕ ವಿದೇಶೀಯರೂ ಇದರ ಮಹತ್ವ ಅರಿತು ಆಚರಿಸಲು ನಮ್ಮ ದೇಶಕ್ಕೆ ಬರುತ್ತಿದ್ದು ನಮ್ಮಲ್ಲೇ ಕೆಲವರು ಸನಾತನ ಧರ್ಮವನ್ನು ಹಾದಿ ತಪ್ಪಿಸಲು ಹೊರಟು ತಾವೇ ಹಾದಿತಪ್ಪುತ್ತಿದ್ದಾರೆ ಎಂಬುದನ್ನು ನಿದರ್ಶನಗಳ ಸಹಿತ ವಿವರಿಸಿದರು.
ಸಗುಣ ಸಾಕಾರವಾಗಿಯೇ ಆಗಲಿ ನಿರ್ಗುಣ ನಿರಾಕಾರವಾಗಿಯೇ ಆಗಲಿ, ನಾಮರೂಪ ಸಹಿತವಾಗಿಯೇ ಆಗಲಿ ರಹಿತವಾಗಿಯೇ ಆಗಲಿ ಸ್ಥಾವರವಾಗಿಯೇ ಆಗಲಿ ಜಂಗಮವಾಗಿಯೇ ಆಗಲಿ ಎಲ್ಲ ರೀತಿಯ ಆಚರಣೆಗಳಿಗೂ ಪ್ರಪಂಚದಲ್ಲಿ ಅವಕಾಶ ಸ್ವಾತಂತ್ರ್ಯ ಕೊಟ್ಟಿರುವ ಧರ್ಮವೆಂದರೆ ಅದು ನಮ್ಮ ಭಾರತೀಯ ಧರ್ಮ ಎಂದರು.
Mahant Rudreshwara Maha Swami ಬನವಾಸಿ ಕದಂಬ ಸಿಂಹ ಲಾಂಛನದ ದೊರೆ ರವಿವರ್ಮನು ತ್ರಯಂಬಕ ದೇವರಿಗೆ ಹೊಳಲಕೆರೆಯ ದುಮ್ಮಿ ಮುಂತಾದ ಗ್ರಾಮಗಳನ್ನು ದತ್ತಿ ಕೊಟ್ಟ ಉಲ್ಲೇಖವಿರುವ ತಾಮ್ರ ಶಾಸನಸ್ಥ ಗ್ರಾಮ ವಾಗಿರುವ ಕಾಶೀಪುರವು ಪುರಾತನ ಐತಿಹ್ಯ ಹೊಂದಿದ್ದು ಈ ದೇವಾಲಯವು ಆಗಮಗಳ ಅನುಸಾರವಾಗಿಯೇ ನಿರ್ಮಾಣಗೊಂಡಿದೆ ಎಂದರು.
ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ ಹಿಂದಿನ ಕಾಲದಲ್ಲಿ ಕಷ್ಟಪಟ್ಟಾದರೂ ಕಾಶಿ ಯಾತ್ರೆಗೆ ಹೋಗುತ್ತಿದ್ದರು, ಈಗ ಕಾಶಿಗೆ ಹೋಗಲಾರದವರು ಈ ಕಾಶಿಪುರಕ್ಕೆ ಬಂದು ಕಾಶಿ ವಿಶ್ವನಾಥನ ದರ್ಶನ ಪಡೆಯಬಹುದಾಗಿದೆ ಎಂದರು. ಶಿಲ್ಪಿಗಳ ಪರವಾಗಿ ರಾಜೇಶ್ ರನ್ನುಸನ್ಮಾನಿಸಲಾಯಿತು.

ಟ್ರಸ್ಟಿನ ಅಧ್ಯಕ್ಷರಾದ ಶೇಖರಪ್ಪ, ಸಿದ್ದೇಶ್ ಕಾಶಿಪುರ, ಓಂಕಾರ ಗೌಡ್ರು, ಗೋಪಾಲ್ ಗೌಡ್ರು ಮುಂತಾದವರು ಉಪಸ್ಥಿತರಿದ್ದು , ಮಹೇಶ್, ಜಗದೀಶ್, ಚೇತನ್ ಮುಂತಾದವರು ಭಾಗವಹಿಸಿದ್ದು ಕೆ ವಿಶ್ವನಾಥ್ ನಿರೂಪಿಸಿದ ಧರ್ಮಸಭೆಯಲ್ಲಿ ಹಗಲು ವೇಷ ತಂಡದವರು ಪ್ರಾರ್ಥನೆಯನ್ನು ಹಾಡಿದರೆ ದೇವತಾ ಸ್ತುತಿಯನ್ನು ಮಹತಿ ಹಿರೇಮಠ್, ಪ್ರಕಾಶ್ ಮಾಡಿದರು.
ಸ್ವಾಗತವನ್ನು ಗುರುಮೂರ್ತಿ ಕೋರಿದರು, ನಿಜಲಿಂಗಪ್ಪ ವಂದನೆಗಳನ್ನು ಸಮರ್ಪಿಸಿದರು. ವೇದಾಗಮೋಕ್ತವಾದ ಪ್ರತಿಷ್ಠಾಪನಾ ವಿಧಿ ವಿಧಾನಗಳನ್ನು ವೇದಮೂರ್ತಿಗಳ ತಂಡ ನೆರವೇರಿಸಿದರೆ ಆಗಮಿಸಿದ್ದ ಸಹಸ್ರಾರು ಸಂಖ್ಯೆಯ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆಯು ಅತ್ಯುತ್ತಮವಾಗಿ ಏರ್ಪಾಡಾಗಿತ್ತು.
