Dr. N.B. Sridhar ಖ್ಯಾತ ಪಶುವೈದ್ಯಕೀಯ ವಿಜ್ಞಾನಿ, ಸಾಹಿತಿ, ಚಿಂತಕ ಡಾ: ಎನ್.ಬಿ.ಶ್ರೀಧರ ಇವರಿಗೆ “ಶ್ರೇಷ್ಟ ಸಂಶೋಧಕ” ಪ್ರಶಸ್ತಿ
ನಾಡಿನ ಖ್ಯಾತ ಪಶುವೈದ್ಯಕೀಯ ವಿಜ್ಞಾನಿ, ಸಾಹಿತಿ, ಚಿಂತಕ, ಬರಹಗಾರರಾದ ಡಾ: ಎನ್.ಬಿ.ಶ್ರೀಧರ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇವರಿಗೆ ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ಇದರ ಶಿಕ್ಷಕರ ಸಂಘವು ಇವರ ಉತ್ತಮ ಸಂಶೋಧನೆಗಳ ಯಶೋಗಾಥೆಯನ್ನು ಗುರುತಿಸಿ ಸಂಶೋಧನಾ ಕ್ಷೇತ್ರದಲ್ಲಿ ಇವರು ಮಾಡಿದ ಗಣನೀಯ ಸಾಧನೆಗಾಗಿ 2025 ನೇ ಸಾಲಿನ “ “ಶ್ರೇಷ್ಟ ಸಂಶೋಧಕ” ಪ್ರಶಸ್ತಿ ನೀಡಿ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಸನ್ಮಾನಿಸಿದೆ.
ಇವರು ಪಶುವೈದ್ಯಕೀಯ ರಂಗದಲ್ಲಿ ಸಹಸ್ರಾರು ವಿದ್ಯಾರ್ಥಿಗಳಿಗೆ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಷಯವನ್ನು ಬೋಧನೆ ಮಾಡಿರುವುದನ್ನು, 200ಕ್ಕೂ ಹೆಚ್ಚಿನ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ವಿದ್ಯಾರ್ಥಿಗಳಿಗೆ ಸಂಶೋಧನೆಯಲ್ಲಿ ಮಾರ್ಗದರ್ಶನ ಮಾಡಿರುವುದನ್ನು, ಜಾನುವಾರುಗಳಲ್ಲಿ ಬರುವ ಅನೇಕ ರೀತಿಯ ಸಸ್ಯಜನ್ಯ ಶಿಲೀಂದ್ರವಿಷಜನ್ಯ ಮತ್ತಿತರ ನಿಗೂಢ ಕಾಯಿಲೆಗಳ ಬಗ್ಗೆ ಸಂಶೋಧನೆ ನಡೆಸಿ ಅವುಗಳಿಗೆ ಕಾರಣ ಮತ್ತು ಚಿಕಿತ್ಸೆಯನ್ನು ಪತ್ತೆ ಮಾಡಿ ಸಹಸ್ರಾರು ಜಾನುವಾರುಗಳ ಉಳಿವಿಗೆ ಕಾರಣರಾಗಿರುವುದನ್ನು, ಜಾನುವಾರುಗಳಲ್ಲಿ ಕಾರಣ ಗೊತ್ತಿರದ ನಿಗೂಢ ಕಾಯಿಲೆಗಳ ಬಗ್ಗೆ ಸಂಶೋಧನೆ ಮತ್ತು ಚಿಕಿತ್ಸೆ ಕಂಡು ಹಿಡಿದು ಸಾವಿರಾರು ಮೂಕ ಪಶುಗಳ ಜೀವ ಉಳಿಸಲು ಕಾರಣರಾಗಿರುವುದನ್ನು, ಬಂಜೆತನದಿಂದ ಬಳಲುತ್ತಿರುವ ಅನುತ್ಪಾದಕ ಗೋವುಗಳನ್ನು ಸಂಶೋಧನೆಗಳ ಮೂಲಕ ಕಂಡುಕೊಂಡ ಆಯ್ದ ಚಿಕಿತ್ಸಾ ವಿಧಾನವನ್ನು ಗ್ರಾಮ ಮಟ್ಟದಲ್ಲಿ ಅಳವಡಿಸಿ ಅವುಗಳನ್ನು ಉತ್ಪಾದಕತೆಯತ್ತ ಕೊಂಡೊಯ್ದಿರುವ ಮತ್ತು ಅವುಗಳನ್ನು ಕಟುಕರ ಕತ್ತಿಯಿಂದ ತಪ್ಪಿಸುವ ಸಂಶೋಧನಾ ಚಟುವಟಿಕೆಗಳನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.
Dr. N.B. Sridhar ಇತ್ತೀಚಿಗಷ್ಟೆ ಇವರಿಗೆ ಭಾರತೀಯ ಪಶುವೈದ್ಯಕೀಯ ಔಷಧಶಾತ್ರಜ್ಞರ ಮತ್ತು ವಿಷಶಾಸ್ತ್ರಜ್ಞರ ಸಂಘವು “ರಾಷ್ಟ್ರೀಯ ಫೆಲೊ” ಪ್ರಶಸ್ತಿ ನೀಡಿರುವುದನ್ನು, ಕರ್ನಾಟಕ ರಾಜ್ಯ ಪಶುವೈದ್ಯ ಸಂಘವು “ಜೀವ ಮಾನದ ಶ್ರೇಷ್ಟ ಪಶುವೈದ್ಯ” ಪ್ರಶಸ್ತಿ ನೀಡಿರುವುದನ್ನು ಮತ್ತು ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯವು “ಶ್ರೇಷ್ಟ ಶಿಕ್ಷಕ” ಪ್ರಶಸ್ತಿಯನ್ನು ನೀಡಿರುವುದನ್ನು ಈ ಸಂದರ್ಭದಲ್ಲಿ ನೆನೆಯಬಹುದಾಗಿದೆ.
