Dr. H.B Manjunath ಸ್ವಾವಲಂಬನೆ ಸಾಧಿಸಲು ಆತ್ಮಬಲ ಅವಶ್ಯ ಇದಕ್ಕಾಗಿ ಆರ್ಥಿಕ ಬಲವೂ ಬೇಕು, ಪೂರಕವಾಗಿ ದೈವ ಬಲವೂ ಒದಗಿಬರಬೇಕು ಎಂದು ಹಿರಿಯ ಪತ್ರಕರ್ತ ಡಾ.ಎಚ್ ಬಿ ಮಂಜುನಾಥ ಅಭಿಪ್ರಾಯ ಪಟ್ಟರು.
ಅವರಿಂದು ನಗರದ ಬೇತೂರು ರಸ್ತೆಯಲ್ಲಿರುವ ವೆಂಕಟೇಶ್ವರ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ಏರ್ಪಾಡಾಗಿದ್ದ ಸಾಮೂಹಿಕ ಸಹಸ್ರ ಬಿಲ್ವಾರ್ಚನೆ ಪೂಜೆಯ ಧಾರ್ಮಿಕ ಉಪನ್ಯಾಸ ನೀಡುತ್ತಾ ಧರ್ಮಸ್ಥಳ ಕ್ಷೇತ್ರವು ಕೇವಲ ಧಾರ್ಮಿಕ ಆಧ್ಯಾತ್ಮಿಕ ಚಟುವಟಿಕೆಗಳಿಗಷ್ಟೇ ಸೀಮಿತವಾಗದೆ ರಾಜ್ಯಾದ್ಯಂತ ಸುಮಾರು ಆರು ಲಕ್ಷಕ್ಕೂ ಹೆಚ್ಚು ಸ್ವಸಹಾಯ ಸಂಘಗಳ ಮುಖಾಂತರ 50 ಲಕ್ಷಕ್ಕೂ ಅಧಿಕ ಸದಸ್ಯರುಗಳ ಸ್ವಾವಲಂಬನೆಗಾಗಿ ಆರ್ಥಿಕ ನೆರವು ಹಾಗೂ ಸಾಲ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಕೆರೆಗಳ ಹೂಳೆತ್ತುವಿಕೆ, ಗ್ರಾಮಾಂತರ ಶಿಕ್ಷಣ, ಪರಿಸರ ಸಂರಕ್ಷಣ, ಮಾನವ ಸಂಪನ್ಮೂಲ ಅಭಿವೃದ್ಧಿ, ಕೃಷಿ ಉತ್ತೇಜನ, ಜ್ಞಾನ ವಿಕಾಸ, ತಂತ್ರಜ್ಞಾನ ಅಭಿವೃದ್ದಿ, ಆರೋಗ್ಯ ರಕ್ಷೆ, ಜನಜಾಗ್ರತಿ, ಗ್ರಾಮ ನೈರ್ಮಲ್ಯ, ಸ್ತ್ರೀ ಸಬಲೀಕರಣ, ಸ್ವಗೃಹ ಯೋಜನೆ ಮುಂತಾದವುಗಳ ಪರಿಣಾಮಕಾರಿ ಅನುಷ್ಠಾನವಲ್ಲದೇ ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ವ್ಯವಸ್ಥೆ ಮುಂತಾಗಿ ಜನಪರ ಕಾರ್ಯಕ್ರಮಗಳನ್ನು ಜಾತಿ ಮತ ಲಿಂಗ ಭೇದವಿಲ್ಲದೆ ಯಶಸ್ವಿಯಾಗಿ ನಡೆಸುತ್ತಿದ್ದು ಧಾರ್ಮಿಕ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಸಾಮೂಹಿಕವಾಗಿ ಆಯೋಜಿಸುತ್ತಾ ಸಮಾಜದಲ್ಲಿ ಸೌಹಾರ್ದತೆ ಹಾಗೂ ಬಾಂಧವ್ಯ ವೃದ್ಧಿಗೂ ಕಾರಣವಾಗುತ್ತಿದೆ ಎಂದರಲ್ಲದೇ ಬಿಲ್ವಪತ್ರೆಯ ಆಯುರ್ವೇದ ಮಹತ್ವ ಹಾಗೂ ಬಿಲ್ವಾರ್ಚನೆಯ ಆಧ್ಯಾತ್ಮಿಕ ಮಹತ್ವವನ್ನೂ ಮಂಜುನಾಥ ವಿವರಿಸಿದರು.
Dr. H.B Manjunath ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದ ಮಾನಸ ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ ಸಿ ಲಿಂಗರಾಜ್ ಸಮಾಜದ ಎಲ್ಲ ಸ್ಥರಗಳ ಜನರನ್ನು ಒಗ್ಗೂಡಿಸಿ ಸಮಾಜಮುಖಿ ಕಾರ್ಯಗಳಿಗೆ ಪ್ರೇರೇಪಿಸುವುದು ಸುಲಭ ಸಾಧ್ಯವಲ್ಲ ಇಂತಹ ಸತ್ಕಾರ್ಯ ಮಾಡುವ ಕ್ಷೇತ್ರದ ತೇಜೋವಧೆ ಮಾಡುವವರಿಗೆ ಯಾರೂ ಬೆಂಬಲ ನೀಡಬಾರದು ಎಂದರು. ಪ್ರಾಸ್ತಾವಿಕ ನುಡಿಗಳ ನಾಡುತ್ತಾ ಟ್ರಸ್ಟಿನ ಹಿರಿಯ ಜಿಲ್ಲಾ ನಿರ್ದೇಶಕ ಎಂ ಲಕ್ಷ್ಮಣ್ ಸಂಘದ ಸದಸ್ಯರಲ್ಲಿ ನಿರ್ದಿಷ್ಟ ಗುರಿ ಇರಬೇಕು, ಹಣವಿಲ್ಲದವ ಬಡವನಲ್ಲ ಗುರಿ ಇಲ್ಲದವ ಬಡವನಾಗುತ್ತಾನೆ ಎಂದರಲ್ಲದೆ ಸಂಸ್ಥೆಯ ಯೋಜನೆಗಳ ಬಗ್ಗೆ ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ದಾವಣಗೆರೆ ಜಿಲ್ಲಾ ಅಲ್ಪಸಂಖ್ಯಾಕರ ಉಪಾಧ್ಯಕ್ಷ ಸೈಯದ್ ಅರೀಫ್ ಲಾಲ್ ಕರಾರುವಾಕ್ಕಾಗಿ ನಡೆಯುವ ಈ ಸಂಸ್ಥೆಯು ಕ್ಷೇತ್ರಕ್ಕೆ ಭಕ್ತರು ಕೊಡುವುದನ್ನೆಲ್ಲ ಭಕ್ತರಿಗೇ ಪ್ರಾಮಾಣಿಕವಾಗಿ ತಲುಪಿಸುತ್ತಿದೆ ಎಂದರು. ಮತ್ತೋರ್ವ ಮುಖ್ಯ ಅತಿಥಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ಎಸ್ ಕೆ ಚಂದ್ರಶೇಖರ್ ಮಾತನಾಡಿ ಸಮಾಜಮುಖಿ ಯೋಜನೆಗಳನ್ನು ಸರ್ಕಾರಗಳಿಗಿಂತ ಪರಿಣಾಮಕಾರಿಯಾಗಿ ಸಂಸ್ಥೆ ಅನುಷ್ಠಾನಗೊಳಿಸುತ್ತಿದೆ ಎಂದರು. ವೇದಿಕೆಯ ಉಪಾಧ್ಯಕ್ಷ ದಾನಿ ಅಣಬೇರು ಮಂಜಣ್ಣ ಮಾತನಾಡಿ ರಾಜ್ಯ ಸುಭೀಕ್ಷವಾಗಲು ಅಬಲೆಯರ ಸಬಲೀಕರಣ ಹಾಗೂ ಶಿಕ್ಷಣ ಮುಂತಾದವನ್ನು ಸಂಸ್ಥೆ ಮಾಡುತ್ತಿದೆ ಎಂದರು. ಕರ್ನಾಟಕ ಏಕಾಂತ ವೇದಿಕೆ ರಾಜ್ಯಾಧ್ಯಕ್ಷ ಎನ್ ಹೆಚ್ ಹಾಲೇಶ್ ಮಾತನಾಡಿ ಪವಿತ್ರ ಕ್ಷೇತ್ರ ಹಾಗೂ ಅತ್ಯುತ್ತಮ ಸಂಸ್ಥೆಗೆ ಯಾರೂ ಕಿರುಕುಳ ಕೊಡಲು ಅವಕಾಶ ಮಾಡಿಕೊಡಬಾರದು ಎಂದರು. ಎಲೆ ಬೇತೂರಿನ ಕನ್ನಡ ಸಾಹಿತ್ಯ ಪರಿಷತ್ ಸದಸ್ಯ ಎಂ ಷಡಾಕ್ಷರಪ್ಪ ಮಾತನಾಡಿ ಧಾರ್ಮಿಕ ಆಚರಣೆಗಳ ಮೇಲೆ ನಮ್ಮ ದೇಶದ ಪವಿತ್ರತೆ ಉಳಿದಿದೆ, ಮಹಿಳೆಯರ ಸ್ವಾವಲಂಬನೆ ಮೂಲಕ ಸಮಾನತೆಯು ಸಾಧ್ಯ ಎಂದರು. ಮಂಡಕ್ಕಿ ಬಟ್ಟಿ ಬಡಾವಣೆಯ ಸಮಾಜ ಸೇವಕ ಮಹಮ್ಮದ್ ಸುಹೀಲ್ ಮಾತನಾಡಿ ಗುರುಗಳಿಗೆ ಗೌರವ ಕೊಡುತ್ತಾ ಜ್ಞಾನಿಗಳಾಗಬೇಕು, ಸಮಾಜದಲ್ಲಿ ಎಲ್ಲರೂ ಸಮಾನರು ಎಂದು ಹೇಳಿದರು.
ಅಧ್ಯಕ್ಷೀಯ ನುಡಿಗಳ ನಾಡಿದ ಹಿರಿಯ ನ್ಯಾಯವಾದಿ ಶ್ರೀಮತಿ ಅನಿತಾ ದೇಶ ಸೇವೆಯೇ ಈಶ ಸೇವೆ ಎಂಬ ತತ್ವ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರದು, ಕೆರೆಯ ನೀರನ್ನು ಕೆರೆಗೆ ಚೆಲ್ಲುವಂತೆ ಜನರ ಕಲ್ಯಾಣ ಯೋಜನೆಗಳಿಗೆ ಸಂಸ್ಥೆಯು ವಿನಿಯೋಗಿಸುತ್ತಾ ನಿಜವಾದ ಅರ್ಥದಲ್ಲಿ ಮಹಿಳಾ ಸಬಲೀಕರಣವನ್ನು ಮಾಡುತ್ತಿದೆ ಎಂದರು.
ಟ್ರಸ್ಟಿನ ಯೋಜನಾಧಿಕಾರಿ ಶ್ರೀಮತಿ ಯಶೋಧ ರೇಂಜಾಳ ಉಪಸ್ಥಿತರಿದ್ದರು. ಕೊಟ್ರೇಶ್ ಹಾಗೂ ಮಂಜುನಾಥ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಮೇಲ್ವಿಚಾರಕಿ ಶ್ರೀಮತಿ ದ್ಯಾಮಕ್ಕ ವಂದನೆ ಸಲ್ಲಿಸಿದರು. ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನದ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು. ವೇದ ಮೂರ್ತಿ ವಿಜಯಕುಮಾರ್, ಚೇತನ್, ಮಂಜುನಾಥ ಜೋಯಿಸ್ ಬಿಲ್ವಾರ್ಚನೆ ನಿರ್ವಹಿಸಿದರೆ ಒಕ್ಕೂಟದ ನಾಗರತ್ನಮ್ಮ, ಮಂಜುಳಾ ಜಿ ಎಸ್, ನೇತ್ರಾ, ನಿಷಾದ್ ಬಾನು, ಎ ಮಂಜುಳಾ, ಅಂಜುಮ್ ಬಾನು, ಮುಕ್ತಾಯಮ್ಮ, ಮೊಸರನ್ನ ಬಾನು, ಶ್ರುತಿ ಬಸಾಪುರ,ಬಸಮ್ಮ, ದರ್ಶನಾ ಮುಂತಾದವರು ಭಾಗವಹಿಸಿದ್ದರು.
