ಮೈಸೂರು ನಗರದ ಜಗನ್ನಾಥ ಸೆಂಟರ್ ಪಾರ್ ಆರ್ಟ್ ಅಂಡ್ ಕಲ್ಚರ್ನಲ್ಲಿ ಪ್ರತೀ ಬುಧವಾರ ನಡೆಯುವ ಕಲಾ ಸಪ್ತಮಿ ಕಾರ್ಯಕ್ರಮದಲ್ಲಿ ಮೈಸೂರಿನ ರುದ್ರನೃತ್ಯ ಯೋಗ ಶಾಲೆಯ ನೃತ್ಯಗುರು ಸಿಂಧು ಕಿರಣ್ರವರ ಶಿಷ್ಯೆಯರಾದ ಪೃಥೆ ಹವಾಲ್ದಾರ್, ಓಜಸ್ ಬಲ್ಲೂರು, ಡಾ. ತರಾನಾ ಚೆಂಗಪ್ಪ, ಸತ್ಯ ಪ್ರಮೋದಿನಿ, ಉನ್ನತಿ ಗಣಪತಿ ಕನೋಲ್ಕರ್, ಕಾವ್ಯ ಉತ್ತಯ್ಯರವರು ಒಡಿಸ್ಸಿ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.
ಓಡಿಸ್ಸಿ ಸಂಪ್ರದಾಯದಂತೆ ಮಹಾಕವಿ ಕಾಳಿದಾಸರ ರಚನೆಯ, ನೃತ್ಯಗುರು ಸಿಂಧು ಕಿರಣ್ರವರ ನೃತ್ಯ ಸಂಯೋಜನೆಯ ಮಂಗಳಾಚರಣ್ನೊಂದಿಗೆ ಆರಂಭವಾದ ಈ ಪ್ರದರ್ಶನದಲ್ಲಿ, ನಂತರ ಓಡಿಸ್ಸಿ ನೃತ್ಯಕಲೆಯ ಮೇರು ವ್ಯಕ್ತಿತ್ವ ಕೇಳುಚರಣ ಮಹಾಪತ್ರರವರ ನೃತ್ಯ ಸಂಯೋಜನೆಯ, ಭುವನೇಶ್ವರ ಮಿಶ್ರರವರ ಸಂಗೀತ ನಿರ್ದೇಶನದಲ್ಲಿನ ಶ್ರೀಕೃಷ್ಣನ ಬಾಲ ಲೀಲೆಗಳನ್ನು ಸಿಂಧು ಕಿರಣ್, ಓಜಸ್ ಬಲ್ಲೂರು ಪ್ರಸ್ತುತ ಪಡಿಸಿದರು.
ನಂತರ ಓಜಸ್ರವರು ಏಕವ್ಯಕ್ತಿ ಪ್ರಯೋಗದಲ್ಲಿ ಶಂಕರಾಭರಣ ರಾಗದಲ್ಲಿನ ಶಂಕರ ಪಲ್ಲವಿಯನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಗೊಳಿಸಿದರು.
ನೃತ್ಯಗುರು ಸಿಂಧು ಕಿರಣ್ರವರು ಸಹ ಏಕವ್ಯಕ್ತಿ ಪ್ರಯೋಗದಲ್ಲಿ ರಾಮಾಯಣದ ಮಾಯಾಜಿಂಕೆ, ಜಟಾಯು ವಧೆಯನ್ನು ಕೇಂದ್ರವಾಗಿರಿಸಿಕೊಂಡು ಸೀತಾಪಹರಣವನ್ನು ಪ್ರಸ್ತುತ ಪಡಿಸಿ, ನೃತ್ಯ ರಸಿಕರ ಮೆಚ್ಚುಗೆಗೆ ಪಾತ್ರರಾದರು. ಇದು ಭುವನೇಶ್ವರ ಮಿಶ್ರರವರು ಸಂಗೀತ ಸಂಯೋಜನೆಯ ರಾಗಮಾಲಿಕೆಯಲ್ಲಿದ್ದು, ಕೇಳುಚರಣ ಮಹಾಪತ್ರರವರ ನೃತ್ಯ ಸಂಯೋಜನೆಯಲ್ಲಿ ಪ್ರಸ್ತುತಗೊಂಡಿತ್ತು.
ನೃತ್ಯ ಪ್ರದರ್ಶನದ ಕೊನೆಯಲ್ಲಿ ಸಂಪ್ರದಾಯದಂತೆ ಭೈರವಿ ರಾಗದಲ್ಲಿನ ಮೋ ಕ್ಸ್ ನೃತ್ಯವನ್ನು ಕಲಾವಿದರು ಪ್ರದರ್ಶಿಸಿದರು.
ಈ ನೃತ್ಯ ಪ್ರದರ್ಶನದಲ್ಲಿ ಪಾಲ್ಗೊಂಡು ತನ್ನ ನೃತ್ಯಾಭಿನಯದಿಂದ ಗಮನ ಸೆಳೆದ ಕಲಾವಿದೆ ಪೃಥೆ ಹವಾಲ್ದಾರ್ರವರು ನಗರದ ಹಿರಿಯ ಪತ್ರಕರ್ತ ವೈದ್ಯನಾಥ್ ಹಾಗೂ ಜ್ಞಾನೇಶ್ವರಿ ದಂಪತಿಗಳ ಪುತ್ರಿ.
ಕಾರ್ಯಾಕ್ರಮದಲ್ಲಿ ನೃತ್ಯ ಕಲಾವಿದರಿಗೆ ಜಗನ್ನಾಥ ಸೆಂಟರ್ ಪಾರ್ ಆರ್ಟ್ಸ್ ಅಂಡ್ ಕಲ್ಚರ್ವತಿಯಿಂದ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು.
ನಂತರ ನಾಡಿನ ಪ್ರಸಿದ್ಧ ಕಲಾವಿದರಾದ ನೃತ್ಯ ಗುರು ಮೈಸೂರು ಬಿ. ನಾಗರಾಜ್ರವರ ಆರ್ಟಿಕ್ಯುಲೇಟ್ ಡ್ಯಾನ್ಸ್ ಸ್ಟುಡಿಯೋದ ಶಿಷ್ಯಂದಿರಿಂದ ನಡೆದ ಕಥಕ್ ನೃತ್ಯ ಪ್ರದರ್ಶನವು, ಸುಮಧುರವಾದ ಸಂಗೀತ, ಚುರುಕಾದ ಹಾಗೂ ಅತ್ಯಂತ ಕರಾರುವಾಕ್ಕಾದ ಪದಚಲನೆ, ಭಾವಾಭಿವ್ಯಕ್ತಿಗಳಿಂದ ನೃತ್ಯ ರಸಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಹಾಗೆಯೇ ಸ್ವತಃ ಗುರು ನಾಗರಾಜ್ರವರ ಆರ್ಥಪೂರ್ಣವಾದ ನಿರೂಪಣೆ ಕಥಕ್ ನೃತ್ಯ ಪರಂಪರೆಯನ್ನು ಪರಿಣಾಮಕಾರಿಯಾಗಿಯೇ ಅನಾವರಣಗೊಳಿಸಿತ್ತು.
ಜಗನ್ನಾಥ ಸೆಂಟರ್ ಪಾರ್ ಆರ್ಟ್ ಅಂಡ್ ಕಲ್ಚರ್ನ ಕಲಾ ಸಪ್ತಮಿಯ ಎರಡನೇ ಕಾರ್ಯಕ್ರಮ ಕಲಾ ರಸಿಕರನ್ನು ಎರಡು ವಿಭಿನ್ನ ಪ್ರಕಾರಗಳ ಪ್ರಯೋಗಗಳ ಮೂಲಕ ಮಹತ್ವದ ಹೆಜ್ಜೆ ಇರಿಸಿತ್ತು. ಪ್ರತೀ ವಾರವೂ ಸಹ ಸಂಗೀತ, ರಂಗ ಸಂಗೀತ, ನಾಟಕ, ನೃತ್ಯ, ಜಾನಪದ ಸಂಗೀತ ಸೇರಿದಂತೆ ವಿಭಿನ್ನವಾದ ಕಾರ್ಯಕ್ರಮಗಳನ್ನು ಉಚಿತವಾಗಿ ನೀಡುವ ಆಶಯವನ್ನು ಈ ಕಲಾ ಸಪ್ತಮಿ ಹೊಂದಿದೆ.
