Shivaganga Yoga Center ಯೋಗ, ಧ್ಯಾನ ಹಾಗೂ ಪ್ರಾಣಾಯಾಮದ ಅಭ್ಯಾಸದಿಂದ ಆತ್ಮವಿಶ್ವಾಸ ವೃದ್ಧಿಸುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಹೇಳಿದರು.
ಕುವೆಂಪು ನಗರದ ಎನ್ಇಎಸ್ ಬಡಾವಣೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಹಾಗೂ ಶ್ರೀ ಶಿವಗಂಗಾ ಯೋಗಕೇಂದ್ರದಲ್ಲಿ ಆಯೋಜಿಸಿದ್ದ ಉಚಿತ ಯೋಗ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.
ವಯಸ್ಸು ಹೆಚ್ಚಿದಂತೆ ದೈಹಿಕ ಮತ್ತು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಯೋಗಾಭ್ಯಾಸ ಮಾಡಬೇಕು. ಇದರಿಂದ ಕಾಯಿಲೆಗಳು ಬರದಂತೆ ಎಚ್ಚರ ವಹಿಸಬಹುದಾಗಿದೆ. ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಯೋಗ ಉತ್ತಮ ಪರಿಹಾರ. ಸದಾ ಲವಲವಿಕೆಯಿಂದ ಇರಲು ನೆರವಾಗುತ್ತದೆ ಎಂದು ತಿಳಿಸಿದರು.
ಶ್ರೀ ಶಿವಗಂಗಾ ಯೋಗ ಕೇಂದ್ರ ನಗರದ 38 ಕೇಂದ್ರಗಳಲ್ಲಿ ಉಚಿತವಾಗಿ ಯೋಗ ಶಿಕ್ಷಣವನ್ನು ನೀಡುತ್ತಿರುವ ಸಂಸ್ಥೆಯಾಗಿದೆ. ಯೋಗಾಚಾರ್ಯ, ರಾಜ್ಯ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಿವಿ ರುದ್ರಾರಾಧ್ಯ ಅವರ ಸಾಧನೆ ಅವಿಸ್ಮರಣೀಯವಾಗಿದೆ ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮುನಿ ಸಜ್ಜನ್ ಮಾತನಾಡಿ, ಹಾನಗಲ್ ಕುಮಾರ ಸ್ವಾಮಿಗಳ ಆಶೀರ್ವಾದದಿಂದ ಹಾಗೂ ಎಲ್ಲ ಸಾರ್ವಜನಿಕರ ಸಹಕಾರದಿಂದ ಭವನ ನಿರ್ಮಾಣವಾಗಿದ್ದು, ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ತಿಳಿಸಿದರು.
ಯೋಗಚಾರ್ಯ ಸಿ.ವಿ.ರುದ್ರಾರಾಧ್ಯ ಮಾತನಾಡಿ, ಮನೆಮನಗಳಿಗೆ ಯೋಗವನ್ನು ತಲುಪಿಸಬೇಕು. ಶಿವಮೊಗ್ಗವನ್ನು ಯೋಗ ನಗರವನ್ನಾಗಿ ಮಾರ್ಪಾಡು ಮಾಡಬೇಕೆಂಬ ಆಶಯವಿದೆ ಎಂದರು.
Shivaganga Yoga Center ಯೋಗ ಶಿಕ್ಷಕರಿಗೆ ಗೌರವಿಸಲಾಯಿತು. ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಮಾಜಿ ಅಧ್ಯಕ್ಷ ಜಿ.ವಿಜಯ್ ಕುಮಾರ್, ಮಹಾಸಭಾ ಮಾಧ್ಯಮ ವಿಭಾಗದ ಜಿಲ್ಲಾಧ್ಯಕ್ಷ ಸೋಮನಾಥ್.ಕೆ.ಆರ್., ಖಜಾಂಚಿ ಮಲ್ಲಿಕಾರ್ಜುನ್ ಕಾನೂರ್, ಎಲ್.ಎಂ.ಮೋಹನ್, ಲವಕುಮಾರ್, ವಿಜಯ ಬಾಯರ್, ಕಾಟನ್ ಜಗದೀಶ್, ಎಚ್.ಎಸ್.ನಾಗರಾಜ್, ಶಿಲ್ಪಾ, ಸರೋಜಾ, ತಿಮ್ಮಪ್ಪ ಇತರರಿದ್ದರು.
